ನವದೆಹಲಿ:ರಸ್ತೆ ಸುರಕ್ಷತೆಯು ಸರಕಾರದ ಮೊದಲ ಆದ್ಯತೆಯಾಗಿದ್ದು, 2030ರ ವೇಳೆಗೆ ರಸ್ತೆ ಅಪಘಾತಗಳನ್ನು ಶೇ 50ರಷ್ಟು ಕಡಿಮೆ ಮಾಡುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದ್ದಾರೆ.
'ರಸ್ತೆ ಸುರಕ್ಷತೆ - ಭಾರತೀಯ Roads@2030 - ಸುರಕ್ಷತೆಯ ಗಡಿ ಹೆಚ್ಚಿಸುವುದು' (Road Safety - Indian Roads@2030 - Raising the Bar of Safety) ಕುರಿತ ಸಿಐಐ ರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, ರಸ್ತೆ ಅಪಘಾತಗಳಲ್ಲಿ ಶೇಕಡಾ 12 ರಷ್ಟು ಹೆಚ್ಚಳವಾಗಿದೆ ಮತ್ತು ಅಂತಹ ಅಪಘಾತಗಳಲ್ಲಿ ಸಾವುಗಳ ಸಂಖ್ಯೆ ಶೇಕಡಾ 10 ರಷ್ಟು ಹೆಚ್ಚಳವಾಗಿದೆ ಎಂದು 2022 ರ ಇತ್ತೀಚಿನ ವರದಿ ಹೇಳಿದೆ. ಇದರ ಪರಿಣಾಮವಾಗಿ ಜಿಡಿಪಿಗೆ ಶೇಕಡಾ 3.14 ರಷ್ಟು ಸಾಮಾಜಿಕ - ಆರ್ಥಿಕ ನಷ್ಟವಾಗಿದೆ ಎಂದು ಹೇಳಿದರು.
ಈ ಅಪಘಾತಗಳಲ್ಲಿ ಮೃತಪಟ್ಟವರ ಪೈಕಿ ಶೇಕಡಾ 60 ರಷ್ಟು ಜನ 18 ರಿಂದ 35 ವರ್ಷ ವಯಸ್ಸಿನವರಾಗಿದ್ದಾರೆ. ಅಪಘಾತದಿಂದಾಗುವ ಸಾವಿನಿಂದ ಕುಟುಂಬವೊಂದು ತನ್ನ ಮುಖ್ಯಸ್ಥನನ್ನು ಕಳೆದುಕೊಳ್ಳುತ್ತದೆ. ಉದ್ಯೋಗದಾತರಿಗೆ ವೃತ್ತಿಪರ ನಷ್ಟವಾಗುತ್ತದೆ ಮತ್ತು ಆರ್ಥಿಕತೆಗೆ ಒಟ್ಟಾರೆ ನಷ್ಟ ಸಂಭವಿಸುತ್ತದೆ ಎಂದು ಅವರು ಹೇಳಿದರು. ತಮ್ಮ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಚಾಲಕರಿಗೆ ನಿಯಮಿತ ಕಣ್ಣಿನ ತಪಾಸಣೆಗಾಗಿ ಉಚಿತ ಶಿಬಿರಗಳನ್ನು ಆಯೋಜಿಸುವಂತೆ ಕೇಂದ್ರ ಸಚಿವರು ಭಾರತದ ಉದ್ಯಮ ವಲಯಕ್ಕೆ ಸೂಚಿಸಿದರು.