ಆಗ್ರಾ (ಉತ್ತರ ಪ್ರದೇಶ):ಪರಿಶೀಲನೆ ವೇಳೆ ಬಾಂಬ್ ಅಥವಾ ಯಾವುದೇ ಸ್ಫೋಟಕ ಪತ್ತೆಯಾಗದ ಹಿನ್ನೆಲೆ ಈಗ ಮತ್ತೆ ತಾಜ್ಮಹಲ್ ಅನ್ನು ಪ್ರವೇಶ ಮುಕ್ತಗೊಳಿಸಲಾಗಿದೆ.
ಅಪರಿಚಿತ ವ್ಯಕ್ತಿಯೊಬ್ಬ ಯುಪಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ, ಮಿಲಿಟರಿ ನೇಮಕಾತಿಯಲ್ಲಿ ತಾರತಮ್ಯವಾಗಿದ್ದು, ನನಗೆ ಅನ್ಯಾಯವಾಗಿದೆ. ಹೀಗಾಗಿ ತಾಜ್ಮಹಲ್ ಒಳಗೆ ಬಾಂಬ್ ಇಟ್ಟಿದ್ದು, ಅದು ಶೀಘ್ರದಲ್ಲೇ ಸ್ಫೋಟಗೊಳ್ಳಲಿದೆ ಎಂದು ಬೆದರಿಕೆ ಹಾಕಿದ್ದ.
ತಾಜ್ಮಹಲ್ ಈಗ ಪ್ರವೇಶ ಮುಕ್ತ ಇದನ್ನೂ ಓದಿ: ಪ್ರೇಮಸೌಧದಲ್ಲಿ ಬಾಂಬ್ ಇಟ್ಟಿರುವುದಾಗಿ ಫೋನ್ ಕಾಲ್: ತಾಜ್ಮಹಲ್ ಬಂದ್
ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ಹಾಗೂ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಪ್ರವಾಸಿಗರಿಗೆ ನಿರ್ಬಂಧ ಹೇರಿ, ತಾಜ್ಮಹಲ್ ಬಾಗಿಲುಗಳನ್ನು ಮುಚ್ಚಿ ಪರಿಶೀಲನೆ ಕೈಗೊಂಡಿದ್ದರು. ಆದರೆ ಪರಿಶೀಲನೆ ವೇಳೆ ಬಾಂಬ್ ಅಥವಾ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಹೀಗಾಗಿ ಅದು ಹುಸಿ ಕರೆಯಾಗಿದ್ದು, ಪುನಃ ತಾಜ್ಮಹಲ್ ಅನ್ನು ಪ್ರವೇಶ ಮುಕ್ತಗೊಳಿಸಲಾಗಿದೆ.
ಇನ್ನು ಹುಸಿ ಬೆದರಿಕೆ ಕರೆ ಮಾಡಿದ ವ್ಯಕ್ತಿಯಿರುವ ಸ್ಥಳ ಪತ್ತೆ ಮಾಡಲಾಗಿದ್ದು, ಆತ ಫಿರೋಜಾಬಾದ್ನಲ್ಲಿರುವುದು ತಿಳಿದು ಬಂದಿದೆ. ಆತನನ್ನು ಶೀಘ್ರದಲ್ಲೇ ಹುಡುಕಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.