ನವದೆಹಲಿ: ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಆಚರಣೆಗೆ ಮುಖ್ಯ ಅತಿಥಿಯಾಗಿ ಭಾರತಕ್ಕೆ ಭೇಟಿ ನೀಡುವಂತೆ ಭಾರತ ಸರ್ಕಾರವು ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಆಹ್ವಾನ ನೀಡಿದೆ.
ಉಭಯ ರಾಷ್ಟ್ರಗಳ ನಡುವೆ ಈ ಬಗ್ಗೆ ದೂರವಾಣಿ ಸಂಭಾಷಣೆ ನಡೆದಿದ್ದು, ಕರೆಯ ಮೂಲಕ ಭಾರತಕ್ಕೆ ಬರುವಂತೆ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ಹೇಳುತ್ತಿವೆ.
ಜಾನ್ಸನ್ ಅವರೊಂದಿಗಿನ ಟೆಲಿಫೋನ್ ಸಂಭಾಷಣೆಯ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು "ವ್ಯಾಪಾರ ಮತ್ತು ಹೂಡಿಕೆ, ರಕ್ಷಣಾ ಮತ್ತು ಭದ್ರತೆ, ಹವಾಮಾನ ಬದಲಾವಣೆ, ಮತ್ತು ಕೋವಿಡ್-19 ವಿರುದ್ಧ ಹೋರಾಡುವ ಎಲ್ಲ ಕ್ಷೇತ್ರಗಳಲ್ಲೂ ನಮ್ಮ ಸಹಕಾರದಲ್ಲಿ ಒಗ್ಗೂಡಿ ಕೆಲಸ ಮಾಡಲು ಒಪ್ಪಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೇ ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ 2021ರಲ್ಲಿ ಲಂಡನ್ಗೆ ಭೇಟಿ ನೀಡುವ ಸಾಧ್ಯತೆಯಿದೆ. ಬ್ರಿಟಿಷ್ ಪ್ರಧಾನಿ ಅವರಿಗೆ ಆಹ್ವಾನ ನೀಡಿದ್ದರು. ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಪ್ರಸ್ತಾಪದ ಭಾಗವಾಗಿದೆ. ಸದಸ್ಯರ ಗ್ರೂಪ್ ವಿಸ್ತರಿಸುವ ಸಲುವಾಗಿ ಭಾರತವನ್ನು ಜಿ -7ನಲ್ಲಿ ಸೇರಿಸುವ ಪ್ರಯತ್ನ ಇದಾಗಿದೆ.
ಮೋದಿಯವರ ಟ್ವೀಟ್ಗೆ ಪ್ರತಿಕ್ರಿಯಿಸಿದ ಯುಕೆ ಪ್ರಧಾನಿ, ಧನ್ಯವಾದಗಳು ನರೇಂದ್ರ ಮೋದಿ. ನಿಮ್ಮೊಂದಿಗೆ ಮಾತನಾಡಿದ್ದು, ಅದ್ಭುತವಾಗಿದೆ. 2021 ಮತ್ತು ಅದಕ್ಕೂ ಮೀರಿದ ಯುಕೆ-ಇಂಡಿಯಾ ಸಂಬಂಧ ಇನ್ನಷ್ಟು ಗಾಢವಾಗಿಸಲು ಮತ್ತು ಬಲಪಡಿಸಲು ನಾನು ಆಸಕ್ತಿಯಿಂದ ಎದುರು ನೋಡುತ್ತಿದ್ದೇನೆ! ಎಂದರು.