ಕರ್ನಾಟಕ

karnataka

By PTI

Published : Nov 28, 2023, 8:56 AM IST

Updated : Nov 28, 2023, 9:27 AM IST

ETV Bharat / bharat

ಕೈಕೊಟ್ಟ ಯಂತ್ರ; ಮನುಷ್ಯ ಸಾಮರ್ಥ್ಯದಿಂದಲೇ ಸುರಂಗ ಕೊರೆಯುವ ಕೆಲಸ ಶುರು

Rat hole mining to rescue trapped workers in Uttarakhand: ಸಾಂಪ್ರದಾಯಿಕ ರ‍್ಯಾಟ್​ ಹೋಲ್​ ಮೈನಿಂಗ್​ ವಿಧಾನದಿಂದ ಉತ್ತರಕಾಶಿ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಗಿದೆ.

Rat hole mining
ಉತ್ತರಕಾಶಿ ಸುರಂಗ ಕುಸಿತ: ಸಾಂಪ್ರದಾಯಿಕ ರ‍್ಯಾಟ್​ ಹೋಲ್​ ಮೈನಿಂಗ್​ ವಿಧಾನದಿಂದ ರಕ್ಷಣಾ ಕಾರ್ಯಾಚರಣೆ

ಡೆಹ್ರಾಡೂನ್(ಉತ್ತರಾಖಂಡ): ಉತ್ತರಾಖಂಡ ಜಿಲ್ಲೆಯಲ್ಲಿ ಕಳೆದ 17 ದಿನಗಳಿಂದ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗೆ ಬಳಸಲಾಗಿದ್ದ ಆಧುನಿಕ ಯಂತ್ರದಿಂದ ಕೆಲಸ ಸಫಲವಾಗಲಿಲ್ಲ. ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು ಇದೀಗ ಸಾಂಪ್ರದಾಯಿಕ ರ‍್ಯಾಟ್​ ಹೋಲ್​ ಮೈನಿಂಗ್​ ವಿಧಾನದ ಮೊರೆ ಹೋಗಿದ್ದಾರೆ.

ರ‍್ಯಾಟ್​ ಹೋಲ್​ ಮೈನಿಂಗ್​ ವಿಧಾನವನ್ನು ಹೆಚ್ಚಾಗಿ ಮೇಘಾಲಯದಲ್ಲಿ ಬಳಸಲಾಗುತ್ತಿದೆ. ಅಲ್ಲಿ ಸಣ್ಣ ಪ್ರಮಾಣದ ಕಲ್ಲಿದ್ದಲು ಗಣಿಗಾರಿಕೆಗೆ ಈ ವಿಧಾನದ ಮೂಲಕ ಕಾರ್ಮಿಕರೇ ರಂಧ್ರಗಳನ್ನು ಕೊರೆಯುತ್ತಾರೆ. ಇದೀಗ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಕುಸಿದಿರುವ ಭಾಗದಲ್ಲಿ ಅಡ್ಡಲಾಗಿ ಕೊರೆಯಲು ಇದೇ ರ‍್ಯಾಟ್​ ಹೋಲ್​ ಮೈನಿಂಗ್ ತಂತ್ರ ಅನ್ವಯಿಸಲು ಟ್ರೆಂಚ್‌ಲೆಸ್ ಎಂಜಿನಿಯರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ನವಯುಗ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ ಕನಿಷ್ಠ 12 ತಜ್ಞರನ್ನು ಕರೆಸಿಕೊಳ್ಳಲಾಗಿದೆ. ಈ ತಜ್ಞರು ದೆಹಲಿ, ಝಾನ್ಸಿ ಮತ್ತು ದೇಶದ ಇತರ ಭಾಗಗಳಿಂದ ಬಂದಿದ್ದಾರೆ.

"ತಜ್ಞರು ತಮ್ಮ ಕೈಯಿಂದಲೇ ಕನಿಷ್ಠ 10ರಿಂದ 12 ಮೀಟರ್ ಕೊರೆಯಲಿದ್ದಾರೆ. ಅವರು ಹೆಚ್ಚಂದ್ರೆ ಎರಡು ಉಪಕರಣಗಳನ್ನು ಮಾತ್ರ ಬಳಸುತ್ತಾರೆ. ಕಲ್ಲು, ಮಣ್ಣು, ಕಬ್ಬಿಣದ ಅಡೆತಡೆಗಳನ್ನು ಕತ್ತರಿಸಲು ಗ್ಯಾಸ್ ಕಟ್ಟರ್​ಗಳನ್ನು, ಕೈಯಲ್ಲಿ ಹಿಡಿಯುವ ಡ್ರಿಲ್ಲಿಂಗ್ ಯಂತ್ರಗಳನ್ನು ಬಳಕೆ ಮಾಡುತ್ತಾರೆ" ಎಂದು ಅಧಿಕಾರಿಯೊಬ್ಬರು ಹೇಳಿದರು.

ಉತ್ತರಾಖಂಡ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಮತ್ತು ರಕ್ಷಣಾ ಕಾರ್ಯಾಚರಣೆಯ ರಾಜ್ಯ ನೋಡಲ್ ಅಧಿಕಾರಿ ನೀರಜ್ ಖೈರ್ವಾಲ್ ನೀಡಿರುವ ಮಾಹಿತಿ ಪ್ರಕಾರ, ರ‍್ಯಾಟ್​ ಹೋಲ್​ ಮೈನಿಂಗ್ ತಂತ್ರವನ್ನು ಅನುಸರಿಸಿ ನುರಿತ ಕಾರ್ಮಿಕರ ತಂಡವು ತಮ್ಮ ಕೈಯಿಂದ ಅವಶೇಷಗಳನ್ನು ತೆಗೆದುಹಾಕುತ್ತದೆ. ಅವರು ಅವಶೇಷಗಳನ್ನು ತೆಗೆದುಹಾಕುತ್ತಿದ್ದಂತೆ, ಸುರಂಗದ ಪೈಪ್ (800-ಮಿ.ಮೀ) ಯಂತ್ರವು ಅವಶೇಷಗಳ ಮೂಲಕ ಕ್ರಮೇಣ ತಳ್ಳಲ್ಪಡುತ್ತದೆ" ಎಂದರು.

"ನಾವು ಅವಶೇಷಗಳನ್ನು ಕೈಯಿಂದ ಕೊರೆಯುತ್ತೇವೆ ಮತ್ತು ಹೊರ ಹಾಕುತ್ತೇವೆ. ಈ ರೀತಿಯ ಕಾರ್ಯವನ್ನು ಹಲವು ವರ್ಷಗಳಿಂದ ಮಾಡುತ್ತಿದ್ದೇವೆ. ಆಕ್ಸಿಜನ್ ಮಾಸ್ಕ್ ಮತ್ತು ಕಣ್ಣುಗಳನ್ನು ಮುಚ್ಚಲು ಕನ್ನಡಕಗಳನ್ನು ಧರಿಸಿ ಕಾರ್ಯಾಚರಣೆಗಿಳಿಯುತ್ತೇವೆ. ಈ ವಿಧಾನವನ್ನು ಬಳಸಿಕೊಂಡು ನಾವು 24 ಗಂಟೆಗಳಲ್ಲಿ 5-6 ಮೀಟರ್ ಅವಶೇಷಗಳನ್ನು ತೆಗೆದುಹಾಕುತ್ತೇವೆ'' ಎಂದು ಕಾರ್ಮಿಕರ ತಂಡದ ಮೋಹನ್ ರೈ ವಿವರಿಸಿದರು.

ಇನ್ನೊಬ್ಬ ತಜ್ಞರಾದ ರಾಕೇಶ್ ರಜಪೂತ್ ಪ್ರತಿಕ್ರಿಯಿಸಿ, ''ಈ ಪೈಕಿ ಮೂವರು ಸುರಂಗದೊಳಗೆ ಹೋಗುತ್ತಾರೆ, ಒಬ್ಬರು ಕೊರೆಯುತ್ತಾರೆ, ಇನ್ನೊಬ್ಬರು ಅವಶೇಷಗಳನ್ನು ಸಂಗ್ರಹಿಸುತ್ತಾರೆ. ಟ್ರಾಲಿಯ ಮೂಲಕ ಅವಶೇಷಗಳನ್ನು ತಳ್ಳಲಾಗುತ್ತದೆ. ಈ ಕಾರ್ಯವನ್ನು ನಾವು ಹಲವು ವರ್ಷಗಳಿಂದ ಮಾಡುತ್ತಿದ್ದೇವೆ. ಈ ವಿಧಾನದಲ್ಲಿ 20 ಗಂಟೆಗಳಲ್ಲಿ 10 ಮೀಟರ್ ಅವಶೇಷಗಳನ್ನು ತೆಗೆದುಹಾಕಬಹುದು" ಎಂದು ತಿಳಿಸಿದರು.

ರಕ್ಷಣಾ ಕಾರ್ಯದ ಕುರಿತು ಪ್ರಧಾನಿ ಮೋದಿ ಪ್ರತಿಕ್ರಿಯೆ:''ಉತ್ತರಾಖಂಡದ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರನ್ನು ಸ್ಥಳಾಂತರಿಸುವ ಪ್ರಕ್ರಿಯೆಯಲ್ಲಿ ಪ್ರಕೃತಿಯ ಸವಾಲುಗಳ ಹೊರತಾಗಿಯೂ, ಅವರನ್ನು ಸುರಕ್ಷಿತವಾಗಿ ಹೊರ ಕರೆತರಲು ಕೇಂದ್ರ ಸರ್ಕಾರ ದೃಢವಾಗಿ ನಿಂತಿದೆ'' ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ಕಾರ್ಮಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಮೋದಿ, ಕಾರ್ತಿಕ ಮಾಸದಲ್ಲಿ ದೀಪಗಳನ್ನು ಬೆಳಗಿಸುವ 'ಕೋಟಿ ದೀಪೋತ್ಸವ'ದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ''ಕಾರ್ಮಿಕರನ್ನು ಸುರಕ್ಷಿತವಾಗಿ ಮತ್ತು ಸಾಧ್ಯವಾದಷ್ಟು ಬೇಗ ಸ್ಥಳಾಂತರಿಸಲು ಸರ್ಕಾರ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ'' ಎಂದು ಹೇಳಿರವು ಅವರು, ''ಕಾರ್ಮಿಕರ ಕುಟುಂಬದ ಸದಸ್ಯರಿಗೆ ಇಡೀ ದೇಶವೇ ಜೊತೆಗಿದೆ ಎನ್ನುವ ಧೈರ್ಯ ತುಂಬುತ್ತಿದ್ದೇವೆ'' ಎಂದರು.

ಇದನ್ನೂ ಓದಿ:ಕಾಶಿಯಲ್ಲಿ ದೇವ ದೀಪಾವಳಿ ಸಂಭ್ರಮ : 12 ಲಕ್ಷ ದೀಪಗಳಿಂದ ಬೆಳಗಿದ ಘಾಟ್‌

Last Updated : Nov 28, 2023, 9:27 AM IST

ABOUT THE AUTHOR

...view details