ವಾರಾಣಸಿ:ವಿಶ್ವಖ್ಯಾತಿಯ ಕಾಶಿಯಲ್ಲಿ ಈಗ ಅಭಿವೃದ್ಧಿಯ ಪರ್ವ ಶುರುವಾಗಿದೆ. ಕಾಶಿ ವಿಶ್ವನಾಥನ ಸನ್ನಿಧಿಯಿಂದ ಗಂಗಾ ನದಿಯವರೆಗೆ ನಿರ್ಮಿಸಲಾದ ಕಾರಿಡಾರ್ನಿಂದ ಹಿಡಿದು ಸುತ್ತಲಿನ ಪ್ರದೇಶವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನಂತೆ ರೂಪಿಸಲಾಗುತ್ತಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿನ್ನೆ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ, ಯೋಜನೆಗಳ ಪ್ರಗತಿಯ ಬಗ್ಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ಕಾಶಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಖುದ್ದು ಮೋದಿಯೇ ಪರಿಶೀಲನೆ ನಡೆಸಿದರು.
ಬಳಿಕ ಗಂಗಾನದಿಯಲ್ಲಿ ನಡೆದ 'ಗಂಗಾ ಆರತಿ'ಯಲ್ಲಿ ಪಾಲ್ಗೊಂಡಿದ್ದರು. ಬಳಿಕ ರವಿದಾಸ್ ಘಾಟ್ನಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರ ಜೊತೆ ಸುತ್ತಾಡಿ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದರು. ಬಳಿಕ ಬಿಜೆಪಿ ನೇತೃತ್ವದ 12 ರಾಜ್ಯಗಳ ಮುಖ್ಯಮಂತ್ರಿ ಅನೌಪಚಾರಿಕ ಸಭೆಯನ್ನೂ ನಡೆಸಿದ್ದಾರೆ.
ವ್ಯಾಪಾರಿಗಳ ಜೊತೆ ಮೋದಿ ಮಾತುಕತೆ
ಕಾಶಿ ನಗರದ ಸುತ್ತಲೂ ಅಭಿವೃದ್ಧಿ ಕಾರ್ಯಗಳನ್ನು ಸಿಎಂ ಯೋಗಿ ಮತ್ತು ಅಧಿಕಾರಿಗಳ ಜೊತೆಗೂಡಿ ಪರಿಶೀಲಿಸುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಟೀ ಸ್ಟಾಲ್ಗಳು, ಮಿಠಾಯಿ ಅಂಗಡಿಗಳ ವ್ಯಾಪಾರಿಗಳ ಜೊತೆ ಕೆಲಕಾಲ ಮಾತನಾಡಿಸಿದ್ದಾರೆ. ಇಲ್ಲಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅವರ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ರೈಲ್ವೆ ನಿಲ್ದಾಣಕ್ಕೆ ಭೇಟಿ, ಸಂಚಾರ
ಸೋಮವಾರ ಮಧ್ಯರಾತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಪ್ರಧಾನಿ ಮೋದಿ ಮಂಡುವಾಡಿಹ್ ರೈಲು ನಿಲ್ದಾಣಕ್ಕೆ ಹಠಾತ್ ಭೇಟಿ ನೀಡಿದರು. ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ ಒಂದರಲ್ಲಿ ಮೋದಿ ನಡೆದಾಡಿ ಗುಣಮಟ್ಟದ ಪರಿಶೀಲನೆ ನಡೆಸಿದರು. ರೈಲು ಸಂಪರ್ಕವನ್ನು ಹೆಚ್ಚಿಸುವುದರ ಜೊತೆಗೆ ಸ್ವಚ್ಛ, ಆಧುನಿಕ ಮತ್ತು ಪ್ರಯಾಣಿಕರ ಸ್ನೇಹಿ ರೈಲ್ವೆ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಪ್ರಯತ್ನವಾಗಿದೆ ಎಂದು ಅವರು ಇದೇ ವೇಳೆ ಹೇಳಿದರು.
ಇದನ್ನೂ ಓದಿ: ಕೋತಿಯ ಬಾಯಿಂದ ಗಾಳಿ ಊದಿ ಪ್ರಾಣ ಉಳಿಸಿದ ಪ್ರಾಣಿ ಪ್ರೇಮಿ.. ವಿಡಿಯೋ ವೈರಲ್
ಬಳಿಕ ಕಾಶಿ ಸೊಬಗಿನ ಬಗ್ಗೆ ಟ್ವಿಟ್ಟರ್ನಲ್ಲಿ ಬರೆದುಕೊಂಡಿರುವ ಪ್ರಧಾನಿ, ಪವಿತ್ರ ಕಾಶಿ ನಗರದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ವಿಶ್ವ ವಿಖ್ಯಾತ ಕಾಶಿಯನ್ನು ದಿವ್ಯಕಾಶಿಯನ್ನಾಗಿ ಮಾಡಲಾಗುವುದು ಎಂದು ಇದೇ ವೇಳೆ ಅವರು ಭರವಸೆ ನೀಡಿದರು.