ಕಾನ್ಪುರ(ಉತ್ತರ ಪ್ರದೇಶ):ದೀಪಾವಳಿ ರಾತ್ರಿಯಂದು ಆರು ವರ್ಷದ ಬಾಲಕಿಯನ್ನು ಇಬ್ಬರು ಅಪಹರಿಸಿ ಅತ್ಯಾಚಾರ ಮಾಡಿ ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ಇಲ್ಲಿನ ಗ್ರಾಮವೊಂದರಲ್ಲಿ ನಡೆದಿದೆ.
ಘಟನೆ ವಿವರ...
ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಬಗ್ಗೆ ಪೊಲೀಸ್ ಅಧಿಕಾರಿ ವಿವರಣೆ ಮದುವೆಯಾದ 21 ವರ್ಷ ಕಳೆದ್ರೂ ಪರಶುರಾಮ್ ಮತ್ತು ಸುನೈನಾ ದಂಪತಿಗೆ ಮಕ್ಕಳಾಗಿರಲಿಲ್ಲ. ಇವರು ಮಕ್ಕಳಿಗಾಗಿ ಆಸ್ಪತ್ರೆ, ಹೋಮ - ಹವನ ಪೂಜೆ ಸೇರಿದಂತೆ ನಾನಾ ರೀತಿಯ ಪ್ರಯತ್ನಗಳನ್ನು ಮಾಡಿದ್ರೂ ಅವರಿಗೆ ಮಕ್ಕಳ ಭಾಗ್ಯ ಇಲ್ಲದಂತಾಗಿತ್ತು. ಹೀಗಾಗಿ ಬಳಿಕ ಅವರು ಮಾಟ-ಮಂತ್ರ ಮಾಡುವವರ ಬಳಿ ತೆರಳಿದ್ದಾರೆ.
ಮಕ್ಕಳಿಲ್ಲದ ಕೊರಗು...
ಮಂತ್ರವಾದಿಯೊಬ್ಬ ಆ ದಂಪತಿಗೆ ಒಂದು ಮಗುವಿನ ಬಲಿ ನೀಡಬೇಕು. ಅದಾದ ಬಳಿಕ ಮಗುವಿನ ಲಿವರ್ ಮತ್ತು ಹೃದಯವನ್ನು ನೀವು ತಿಂದರೆ ನಿಮಗೆ ಮಕ್ಕಳಾಗುತ್ತವೆ ಎಂದು ನಂಬಿಸಿದ್ದಾನೆ. ಮೂಢನಂಬಿಕೆ ಅನುಸರಿಸಿದ ಪರಶುರಾಮ್, ತಮ್ಮ ಸಹೋದರನ ಮಗಳನ್ನು ಅಪಹರಿಸಿ ಕೊಲ್ಲಲು ಅಂಕುನ್ ಮತ್ತು ವೀರನ್ ಎಂಬ ಇಬ್ಬರಿಗೆ ಕೇವಲ ಒಂದೂವರೆ ಸಾವಿರ ರೂಪಾಯಿ ಸುಪಾರಿ ನೀಡಿ ಕಳುಹಿಸಿದ್ದಾನೆ.
ಬಾಲಕಿಯ ಅಪಹರಣ...
ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪಿಗಳು ನವೆಂಬರ್ 14ರ ರಾತ್ರಿ ದೀಪಾವಳಿ ಹಬ್ಬವನ್ನು ಎಲ್ಲರೂ ಸಡಗರದಿಂದ ಆಚರಿಸುತ್ತಿದ್ದರು. ಮನೆಯ ಬಳಿ ಆಟವಾಡುತ್ತಿದ್ದ ಬಾಲಕಿಗೆ ಪಟಾಕಿಯ ಆಸೆ ತೋರಿಸಿದ ಆರೋಪಿಗಳಲ್ಲೊಬ್ಬ ಅಪಹರಿಸಿ ಕಾಡಿಗೆ ಹೊತ್ತೊಯ್ದಿದ್ದರು. ಬಳಿಕ ಆ ಬಾಲಕಿಯ ಮೇಲೆ ಆರೋಪಿಗಳಿಬ್ಬರು ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ.
ಹೃದಯ ಮತ್ತು ಲೀವರ್ನ್ನು ತಿಂದ ದಂಪತಿ...!
ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಗಳು ಆಕೆಯ ದೇಹದಿಂದ ಹೃದಯ ಮತ್ತು ಲೀವರ್ ಕಿತ್ತು ತಮಗೆ ಸುಪಾರಿ ನೀಡಿದ್ದ ಬಾಲಕಿಯ ಚಿಕ್ಕಪ್ಪ ಪರಶುರಾಮ್ಗೆ ಹಸ್ತಾಂತರಿಸಿದ್ದಾರೆ. ಆ ಅಂಗಗಳನ್ನು ಸುನೈನಾ ಮತ್ತು ಪರಶುರಾಮ್ ತಿಂದಿದ್ದಾರೆ. ಉಳಿದ ಪದಾರ್ಥಗಳನ್ನು ನಾಯಿಗೆ ಎಸೆದಿದ್ದಾರೆ.
ಕಾಳಿ ದೇವಸ್ಥಾನದ ಬಳಿ ಬಾಲಕಿ ಶವ ಪತ್ತೆ!
ಬಾಲಕಿಯ ಶವ ಗ್ರಾಮದ ಕಾಳಿ ದೇವಸ್ಥಾನದ ಬಳಿ ಪತ್ತೆಯಾಗಿದೆ. ಕೂಡಲೇ ಗ್ರಾಮಸ್ಥರು ಈ ಸುದ್ದಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಬಳಿಕ ಬಾಲಕಿಯ ಪೋಷಕರಿಗೆ ಮಾಹಿತಿ ಮುಟ್ಟಿಸಿದರು. ಸುದ್ದಿ ತಿಳಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಆರೋಪಿಗಳು ಅಂದರ್...
ಈ ಘಟನೆ ಕುರಿತು ಕಾನ್ಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆಯಾದ 24 ಗಂಟೆಯೊಳಗೆ ಪೊಲೀಸರು ಆರೋಪಿಗಳಾದ ಅಂಕುನ್ ಮತ್ತು ವೀರನ್ನನ್ನು ಬಂಧಿಸಿದ್ದಾರೆ. ಆರೋಪಿಗಳ ವಿಚಾರಣೆ ನಡೆಸಿದ ಪೊಲೀಸರಿಗೆ ಶಾಕ್ ಆಗಿತ್ತು. ಮಂತ್ರವಾದಿಯ ಮಾತುಗಳೇ ಬಾಲಕಿಯ ಚಿಕ್ಕಪ್ಪ-ಚಿಕ್ಕಮ್ಮ ಈ ಕೃತ್ಯ ಎಸಗಲು ಕಾರಣ ಎಂಬುದು ಬೆಳಕಿಗೆ ಬಂದಿದೆ.
ಈ ಘಟನೆ ಕುರಿತು ಬಾಲಕಿಯ ಚಿಕ್ಕಪ್ಪ ಪರಶುರಾಮ್ ಮತ್ತು ಚಿಕ್ಕಮ್ಮ ಸುನೈನಾಳನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.