ಕರ್ನಾಟಕ

karnataka

ಕಾರು, ಬೈಕ್​ಗೆ ಗುದ್ದಿದ ಲಾರಿ: ಬಾಲಕಿ ಸೇರಿದಂತೆ ಐವರ ದುರ್ಮರಣ

By

Published : Mar 10, 2023, 7:33 PM IST

ಲಾರಿಯೊಂದು ಕಾರು ಮತ್ತು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟ ಘಟನೆ ಛತ್ತೀಸ್‌ಗಢದ ಬಲೋದ್ ಜಿಲ್ಲೆಯಲ್ಲಿ ನಡೆದಿದೆ.

minor-girl-among-five-dead-as-truck-rams-car-bike-in-chhattisgarh
ಕಾರು, ಬೈಕ್​ಗೆ ಗುದ್ದಿದ ಲಾರಿ: ಬಾಲಕಿ ಸೇರಿದಂತೆ ಐವರ ದುರ್ಮರಣ

ಬಲೋದ್ (ಛತ್ತೀಸ್‌ಗಢ): ಛತ್ತೀಸ್‌ಗಢದ ಬಲೋದ್ ಜಿಲ್ಲೆಯಲ್ಲಿ ಶುಕ್ರವಾರ ಸರಣಿ ರಸ್ತೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಲಾರಿಯೊಂದು ಕಾರು ಮತ್ತು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ 13 ವರ್ಷದ ಬಾಲಕಿ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಅಲ್ಲದೇ, ಈ ಘಟನೆಯಲ್ಲಿ ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ದೊಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಮರ್ಕಟೋಳ ಗ್ರಾಮದಲ್ಲಿ ಈ ರಸ್ತೆ ಅಪಘಾತ ಸಂಭವಿಸಿದೆ. ಭಾನುಪ್ರತಾಪುರದಿಂದ ಬಲೋದ್ ಕಡೆಗೆ ಬರುತ್ತಿದ್ದ ಲಾರಿಯು ಕಾರು ಮತ್ತು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಲಾರಿ ಗುದ್ದಿ ರಭಸಕ್ಕೆ ಕಾರು ರಸ್ತೆ ಪಕ್ಕದಲ್ಲಿದ್ದ ರೇಲಿಂಗ್‌ (ಕಬ್ಬಿಣದ ತಡೆ ಗೋಡೆ)ಗೆ ಡಿಕ್ಕಿ ಹೊಡೆದು ಅಪಘಾತದ ತೀವ್ರತೆ ಹೆಚ್ಚಿಸಿದೆ. ಪರಿಣಾಮ ಈ ಘಟನೆಯಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರಲ್ಲಿ 13 ವರ್ಷದ ಬಾಲಕಿ ಕೂಡ ಸೇರಿದ್ದಾಳೆ. ಮೂವರು ಗಾಯಾಳುಗಳನ್ನು ದೌಂಡಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.

ಈ ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಇದೇ ವೇಳೆ ರಸ್ತೆಯಲ್ಲಿ ಬಿದ್ದ ಬೈಕ್​ ಮೇಲೆ ಕಾರು ಹರಿದು ಪಕ್ಕದಲ್ಲಿದ್ದ ರೇಲಿಂಗ್‌ಗೆ ಗುದ್ದಿದೆ. ಈ ಅಪಘಾತದ ಸುದ್ದಿ ತಿಳಿದ ಕೂಡಲೇ ಬಲೋದ್ ಪೊಲೀಸ್‌ ಠಾಣೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು. ಈ ಅಪಘಾತದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ.

ಇದನ್ನೂ ಓದಿ:ಬೈಕ್‌ ನಿಲ್ಲಿಸಿ ಅಜ್ಜಿಯ ಸರ ಎಳೆದ ಕಿಡಿಗೇಡಿ; ಕೈಯಲ್ಲಿದ್ದ ಬ್ಯಾಗ್‌ನಿಂದ ಹೊಡೆದು ಓಡಿಸಿದ 10 ವರ್ಷದ ಬಾಲಕಿ!- ವಿಡಿಯೋ

ದೆಹಲಿಯಲ್ಲಿ ಇಬ್ಬರ ಸಾವು: ಮತ್ತೊಂದೆಡೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಬುಧವಾರ ನಡೆದಿದ್ದ ರಸ್ತೆ ಅಪಘಾತದ ಪ್ರಕರಣವೊಂದಲ್ಲಿ ಗಾಯಗೊಂಡಿದ್ದ ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವುದು ವರದಿಯಾಗಿದೆ. ಮೃತರನ್ನು ಮುನ್ನಾ ಮತ್ತು ಸಮೀರ್ ಎಂದು ಗುರುತಿಸಲಾಗಿದೆ.

ಪೊಲೀಸ್​ ಮೂಲಗಳ ಪ್ರಕಾರ, ಬುಧವಾರ ಸಂಜೆ 7:30ರ ಸುಮಾರಿಗೆ ವಸಂತ ವಿಹಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೀಕರ ಅಪಘಾತದ ಕುರಿತು ಪೊಲೀಸ್ ಕಂಟ್ರೋಲ್ ರೂಮ್​ಗೆ ಕರೆ ಬಂದಿತ್ತು. ಇದರಿಂದ ತಕ್ಷಣವೇ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿತ್ತು. ಆಗ ಸ್ಥಳದಲ್ಲಿ ಮಹೀಂದ್ರಾ ಥಾರ್ ಕಾರು ಮತ್ತು ಇತರ ಎರಡು ವಾಹನಗಳು ಮತ್ತು ಮೂರು ಚಕ್ರದ ತಳ್ಳುಗಾಡಿ ಹಾನಿಗೊಳಗಾಗಿರುವುದು ಪತ್ತೆಯಾಗಿತ್ತು.

ನಂತರ ಪೊಲೀಸರ ವಿಚಾರಣೆಯಲ್ಲಿ ಮಹೀಂದ್ರಾ ಥಾರ್ ಕಾರು ಚಾಲಕ ನಿಯಂತ್ರಣ ಕಳೆದುಕೊಂಡು ಈ ಅಪಘಾತಗಳನ್ನು ಮಾಡಿದ್ದ. ಅಲ್ಲದೇ, ಈ ವೇಳೆ ಆತ ಕುಡಿದ ನಶೆಯಲ್ಲಿದ್ದ ಎಂಬುವುದು ಬೆಳಕಿಗೆ ಬಂದಿತ್ತು. ಇದೇ ಅಪಘಾತದಲ್ಲಿ, ಮಕ್ಕಳು ಸೇರಿದಂತೆ ಒಟ್ಟು ಎಂಟು ಜನರು ಗಾಯಗೊಂಡಿದ್ದರು. ಎಲ್ಲ ಗಾಯಾಳುಗಳನ್ನು ಏಮ್ಸ್​ ಆಸ್ಪತ್ರೆಯ ಟ್ರಾಮಾ ಸೆಂಟರ್​ಗೆ ದಾಖಲಿಸಲಾಗಿತ್ತು.

ಈ ಗಾಯಾಳುಗಳನ್ನು ಶಿವ ಕ್ಯಾಂಪ್, ವಸಂತ ವಿಹಾರ್ ಮತ್ತು ಏಕತಾ ವಿಹಾರ್, ಆರ್​ಕೆ ಪುರಂ ನಿವಾಸಿಗಳೆಂದು ಗುರುತಿಸಲಾಗಿತ್ತು. ಈ ಗಾಯಾಳುಗಳ ಪೈಕಿ ಮುನ್ನಾ ಮತ್ತು ಸಮೀರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಈ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಕಾರುಗಳ ಕಳ್ಳತನ: 100ಕ್ಕೂ ಹೆಚ್ಚು ಕಾರುಗಳನ್ನು ಕದ್ದ ಇಬ್ಬರನ್ನು ಬಂಧಿಸಿದ ಕ್ರೈಂ ಬ್ರಾಂಚ್

ABOUT THE AUTHOR

...view details