ಕರ್ನಾಟಕ

karnataka

Manipur violence: ಮೈತೇಯಿ ಸಮುದಾಯದಿಂದ ಇಂದು ಪ್ರತಿಭಟನಾ ಮೆರವಣಿಗೆ.. ಸಡಿಲಗೊಳಿಸಿದ್ದ ಕರ್ಫ್ಯೂ ಮತ್ತೆ ಟೈಟ್​

By ETV Bharat Karnataka Team

Published : Sep 6, 2023, 10:52 AM IST

ಮಣಿಪುರದಲ್ಲಿ ಹಿಂಸಾಚಾರ ತಡೆಯಲು ಹಾಕಿರುವ ಬ್ಯಾರಿಕೇಡ್​​ಗಳನ್ನು ತೆಗೆಯಲು ಆಗ್ರಹಿಸಿ ಜನರು ಇಂದು ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿದ್ದಾರೆ. ಹೀಗಾಗಿ ಸರ್ಕಾರ ಮತ್ತಷ್ಟು ಭದ್ರತೆ ನೀಡಿ, ಕರ್ಫ್ಯೂ ಬಿಗಿಗೊಳಿಸಿದೆ.

ಮೈಥೇಯಿ ಸಮುದಾಯದಿಂದ ಇಂದು ಪ್ರತಿಭಟನಾ ಮೆರವಣಿಗೆ
ಮೈಥೇಯಿ ಸಮುದಾಯದಿಂದ ಇಂದು ಪ್ರತಿಭಟನಾ ಮೆರವಣಿಗೆ

ಇಂಫಾಲ (ಮಣಿಪುರ) :ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿರುವ ಮಣಿಪುರದಲ್ಲಿ ಮೈತೇಯಿ ಸಮುದಾಯ ಇಂದು (ಬುಧವಾರ) ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿದ್ದು, ರಾಜ್ಯದ ಐದು ಜಿಲ್ಲೆಗಳಲ್ಲಿ ಸಡಿಲಿಕೆ ಮಾಡಿದ್ದ ಕರ್ಫ್ಯೂ ಅನ್ನು ಬಿಗಿಗೊಳಿಸಲಾಗಿದೆ. ಜೊತೆಗೆ ಹೆಚ್ಚಿನ ಭದ್ರತೆಯನ್ನೂ ಕೈಗೊಳ್ಳಲಾಗಿದೆ.

ಮೈತೇಯಿ ಸಮುದಾಯ ನೇತೃತ್ವದ ಮಣಿಪುರದ ಸಮನ್ವಯ ಸಮಿತಿಯು ಪ್ರತಿಭಟನಾ ಮೆರವಣಿಗೆ ನಡೆಸಲು ಸಜ್ಜಾಗಿದೆ. ಇದರಿಂದಾಗಿ ಈ ಸಮುದಾಯದ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ನೀಡಲಾಗಿದೆ. ಜೊತೆಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸದಂತೆ ಸರ್ಕಾರ ಮನವಿ ಮಾಡಿದೆ.

ಮೈತೇಯಿ ಸಮುದಾಯ ಹೆಚ್ಚು ಹಿಡಿತ ಹೊಂದಿರುವ ಕಣಿವೆ ಜಿಲ್ಲೆಗಳಾದ ಬಿಷ್ಣುಪುರ್, ಕಕ್ಚಿಂಗ್, ತೌಬಾಲ್, ಪಶ್ಚಿಮ ಇಂಫಾಲ ಮತ್ತು ಪೂರ್ವ ಇಂಫಾಲದಲ್ಲಿ ಸಂಪೂರ್ಣ ಕರ್ಫ್ಯೂ ವಿಧಿಸಲಾಗಿದೆ. ಮಂಗಳವಾರ ಸಂಜೆಯಿಂದಲೇ ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತಾ ಪಡೆಗಳ ಬೃಹತ್ ತುಕಡಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ತಲೆದೋರಿರುವ ಹಿಂಸಾಚಾರದಿಂದಾಗಿ ಸರ್ಕಾರ ಕಠಿಣ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಇದರಿಂದಾಗಿ ಜನರ ನಿತ್ಯಜೀವನಕ್ಕೂ ಪರದಾಡಬೇಕಿದೆ. ಹೀಗಾಗಿ ಜನರು ಭದ್ರತೆಯನ್ನು ಕಡಿತಗೊಳಿಸಿ, ಬ್ಯಾರಿಕೇಡ್​​ಗಳನ್ನು ತೆಗೆಯಲು ಆಗ್ರಹಿಸಿದ್ದಾರೆ. ಆದರೆ, ಪರಿಸ್ಥಿತಿ ಹದಗೆಡದಂತೆ ಕಾಪಾಡಲು ಭದ್ರತೆ ಮುಂದುವರಿಸಲಾಗಿದೆ. ಇದರ ವಿರುದ್ಧ ಜನರು ಪ್ರತಿಭಟನಾ ಮೆರವಣಿಗೆಗೆ ಮುಂದಾಗಿದ್ದಾರೆ.

ಸಡಿಲಿಕೆಯಾಗಿದ್ದ ಕರ್ಫ್ಯೂ;ಕಳೆದ ಕೆಲ ದಿನಗಳಿಂದ ಈ ಐದು ಕಣಿವೆ ಜಿಲ್ಲೆಗಳಲ್ಲಿ ಪ್ರತಿದಿನ ಬೆಳಗ್ಗೆ 5 ರಿಂದ ಸಂಜೆ 6 ರವರೆಗೆ ಕರ್ಫ್ಯೂ ಸಡಿಲಿಸಲಾಗಿತ್ತು. ಹೆಚ್ಚಿನ ಹಿಂಸಾಚಾರ ಈ ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಕಾರಣ ಇಲ್ಲಿ ಸರ್ಕಾರ ತೀವ್ರ ನಿಗಾ ವಹಿಸಿದೆ. ಇದರ ವಿರುದ್ಧ ಜನರು ಬೇಸರಗೊಂಡಿದ್ದು, ಪ್ರತಿಭಟನೆಗೆ ಮುಂದಾಗಿದ್ದಾರೆ. ಆದರೆ, ಕೊಕೊಮಿ ಕರೆ ನೀಡಿರುವ ಮೆರವಣಿಗೆಯನ್ನು ಹಿಂಪಡೆಯಲು ಸರ್ಕಾರ ಮನವಿ ಮಾಡಿದೆ. ಆದರೆ, ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಮರಳುತ್ತಿರುವ ಜನರು:ಹಿಂಸಾಚಾರದಲ್ಲಿ ಮನೆಗಳನ್ನು ಕಳೆದುಕೊಂಡು ಆಶ್ರಯ ತಾಣಗಳಲ್ಲಿ ಜೀವನ ಸಾಗಿಸುತ್ತಿರುವ ಜನರು ಮತ್ತೆ ತಮ್ಮ ನಿವಾಸಗಳತ್ತ ಮರಳುತ್ತಿದ್ದಾರೆ. ಸರ್ಕಾರದ ಭದ್ರತಾ ನಿಯಮಗಳು ಮತ್ತು ಕ್ರಮಗಳಿಗೆ ಬೆಂಬಲ ನೀಡಲು ಸಾರ್ವಜನಿಕರನ್ನು ಕೋರಲಾಗಿದೆ. ಇದರೊಂದಿಗೆ ಭದ್ರತೆಗೆ ಹಾಕಲಾಗಿರುವ ಬ್ಯಾರಿಕೇಡ್​​ಗಳ ತೆರವಿಗೆ ಜನರು ಒತ್ತಾಯಿಸುತ್ತಿದ್ದಾರೆ. ಇದರ ವಿರುದ್ಧ ಮೆರವಣಿಗೆಗೆ ಸಜ್ಜಾಗಿದ್ದಾರೆ. ಪರಿಸ್ಥಿತಿ ತಹಬದಿಗೆ ಬಂದ ಪ್ರದೇಶಗಳಲ್ಲಿ ಭದ್ರತೆ ಕಡಿತಗೊಳಿಸಲಾಗಿದೆ ಎಂದು ಸಚಿವರೊಬ್ಬರು ತಿಳಿಸಿದರು.

ಬ್ಯಾರಿಕೇಡ್‌ಗಳನ್ನು ತೆಗೆಯುವಂತೆ ಇಂದು ನಡೆಸಲಾಗುತ್ತಿರುವ ಪ್ರತಿಭಟನೆಯಲ್ಲಿ ಏನಾದರೂ ಅಹಿತಕರ ಘಟನೆಗಳು ನಡೆದರೆ ಜನರೇ ಅದರ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಸರ್ಕಾರ ಎಚ್ಚರಿಸಿದೆ.

ಇದನ್ನೂ ಓದಿ:ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ : ಎರಡು ಗುಂಪುಗಳ ನಡುವೆ ಗುಂಡಿನ ದಾಳಿ.. 72 ಗಂಟೆಯಲ್ಲಿ 8 ಸಾವು, 18 ಜನರಿಗೆ ಗಾಯ!

ABOUT THE AUTHOR

...view details