ಜೋಧ್ಪುರ(ಜೈಪುರ): ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತವರೂರು ಜೋಧ್ಪುರದಲ್ಲಿ ಮಂಗಳವಾರ ಈದ್ ಸಂಭ್ರಮದ ಗಂಟೆಗಳಿಗೂ ಮೊದಲು ಹಿಂಸಾಚಾರ ಭುಗಿಲೆದ್ದಿತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಹರಿಹಾಯ್ದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಅಧಿಕಾರಿಗಳು ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದ್ದಾರೆ. ಅಷ್ಟೇ ಅಲ್ಲದೇ, ಸುಮಾರು 90ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದು, ನಗರದ 10 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ವಿಧಿಸಲಾಗಿದೆ.
ಘಟನೆಯ ವಿವರ: ನಿನ್ನೆ ಪರಶುರಾಮ ಜಯಂತಿ ಮತ್ತು ರಂಜಾನ್ ಹಬ್ಬವಿತ್ತು. ಇದರ ತಯಾರಿ ಏ.2 ರಾತ್ರಿಯಿಂದಲೇ ನಡೆಯುತ್ತಿತ್ತು. ಮುಸ್ಲಿಮರು ತಮ್ಮ ಧ್ವಜವನ್ನೂ, ಹಿಂದೂಗಳು ಕೇಸರಿ ಧ್ವಜಗಳಿಂದ ನಗರವನ್ನು ಅಲಂಕೃತಗೊಳಿಸುತ್ತಿದ್ದರು. ಈ ವೇಳೆ ಜಲೋರಿ ಗೇಟ್ ವೃತ್ತದಲ್ಲಿ ಧ್ವಜಗಳನ್ನು ಹಾಕುವ ಬಗ್ಗೆ ಎರಡು ಸಮುದಾಯಗಳ ನಡುವೆ ಗಲಾಟೆ ನಡೆದಿದೆ. ಈ ಜಗಳ ತಾರಕಕ್ಕೇರಿ ಕಲ್ಲು ತೂರಾಟ ನಡೆಯಿತು. ಮಧ್ಯರಾತ್ರಿ ನಡೆದ ಘರ್ಷಣೆ ಪೊಲೀಸ್ ಮಧ್ಯಪ್ರವೇಶದಿಂದ ತಣ್ಣಗಾಗಿತ್ತು.
ಮತ್ತೆ ಕಲ್ಲು ತೂರಾಟ: ರಾತ್ರಿ ಕಲ್ಲು ತೂರಾಟದಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಸ್ಥಳದಲ್ಲಿ ಮಂಗಳವಾರ ಮುಂಜಾನೆ ಪೊಲೀಸರನ್ನು ನಿಯೋಜಿಸುವುದರೊಂದಿಗೆ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಯಿತು. ಆದರೆ ಬೆಳಿಗ್ಗೆ ಈದ್ಗಾದಲ್ಲಿ ಪ್ರಾರ್ಥನೆಯ ನಂತರ ಮತ್ತೆ ಉದ್ವಿಗ್ನತೆ ಉಂಟಾಯಿತು. ಕಿಡಿಗೇಡಿಗಳು ಜಲೋರಿ ಗೇಟ್ ಪ್ರದೇಶದ ಬಳಿ ಅಂಗಡಿಗಳು, ವಾಹನಗಳು ಮತ್ತು ಮನೆಗಳ ಮೇಲೆ ಕಲ್ಲು ತೂರಾಟ ಮುಂದುವರೆಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರ ಬಳಿ ಈದ್ ಧ್ವಜ: ನಗರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಈದ್ ಧ್ವಜಗಳನ್ನು ಸ್ಥಾಪಿಸುತ್ತಿದ್ದರು. ಅವರು ಸ್ವಾತಂತ್ರ್ಯ ಹೋರಾಟಗಾರ ಬಲ್ಮುಕುಂದ್ ಬಿಸ್ಸಾ ಅವರ ಪ್ರತಿಮೆಯ ಪಕ್ಕದ ವೃತ್ತದಲ್ಲಿ ಧ್ವಜ ಹಾಕಿದ್ದಾರೆ. ಪರಶುರಾಮ ಜಯಂತಿಗೂ ಮುನ್ನ ಅಲ್ಲಿ ಹಾಕಿದ್ದ ಕೇಸರಿ ಧ್ವಜ ನಾಪತ್ತೆಯಾಗಿದೆ ಎಂದು ಇತರೆ ಸಮುದಾಯದವರು ಆರೋಪಿಸಿದ್ದರಿಂದ ಕಲ್ಲು ತೂರಾಟ ಮತ್ತು ಘರ್ಷಣೆಗೆ ಕಾರಣವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು, ಪತ್ರಕರ್ತರಿಗೆ ಗಾಯ:ಘರ್ಷಣೆ ನಿಯಂತ್ರಿಸಲು ಬಂದ ಪೊಲೀಸರ ಮೇಲೆಯೂ ಕಿಡಿಗೇಡಿಗಳು ಕಲ್ಲು ತೂರಿದರು. ಪರಿಣಾಮ, ಐವರು ಪೊಲೀಸರು ಹಾಗು ಕೆಲವು ಪತ್ರಕರ್ತರು ಗಾಯಗೊಂಡು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಪು ಚದುರಿಸಲು ಅಶ್ರುವಾಯು ಶೆಲ್ಗಳನ್ನು ಪ್ರಯೋಗಿಸಬೇಕಾಯಿತು ಎಂದು ಪೊಲೀಸ್ ನಿಯಂತ್ರಣ ಕೊಠಡಿ ತಿಳಿಸಿದೆ.