ಕರ್ನಾಟಕ

karnataka

ಸುಡಾನ್​ನಲ್ಲಿನ ಭಾರತೀಯರ ಸುರಕ್ಷತೆಗೆ ಮುಂದಾದ ಭಾರತ: ವಿವಿಧ ದೇಶಗಳೊಂದಿಗೆ ಸಂಪರ್ಕ

By

Published : Apr 19, 2023, 2:33 PM IST

ಸುಡಾನ್​ನಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಹಿಂಸಾಚಾರ ನಡೆಯುತ್ತಿದೆ. ಈ ಮಧ್ಯೆ ಸುಡಾನ್​ನಲ್ಲಿರುವ ಭಾರತೀಯರ ಸುರಕ್ಷತೆಗಾಗಿ ಭಾರತ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.

India coordinating with various countries on safety of Indians in Sudan
India coordinating with various countries on safety of Indians in Sudan

ನವದೆಹಲಿ:ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆ ಖಚಿತಪಡಿಸಿಕೊಳ್ಳಲು ಭಾರತವು ವಿವಿಧ ದೇಶಗಳೊಂದಿಗೆ ನಿಕಟವಾಗಿ ಸಮನ್ವಯ ಸಾಧಿಸುತ್ತಿದೆ ಎಂದು ಸರ್ಕಾರಿ ಮೂಲಗಳು ಬುಧವಾರ ತಿಳಿಸಿವೆ. ಸುಡಾನ್ ದೇಶದಲ್ಲಿನ ಪರಿಸ್ಥಿತಿ ತುಂಬಾ ಉದ್ವಿಗ್ನವಾಗಿದೆ ಮತ್ತು ಈ ಹಂತದಲ್ಲಿ ಜನರ ಓಡಾಟವು ತುಂಬಾ ಅಪಾಯಕಾರಿಯಾಗಿದೆ ವರದಿ ಹೇಳಿವೆ. ಸುಡಾನ್​ನಲ್ಲಿ ಕಳೆದ ಆರು ದಿನಗಳಿಂದ ದೇಶದ ಸೇನೆ ಮತ್ತು ಅರೆಸೈನಿಕ ಪಡೆಗಳ ನಡುವೆ ಭೀಕರ ಕಾದಾಟ ನಡೆಯುತ್ತಿದೆ. ಈ ಯುದ್ಧದಲ್ಲಿ ಈಗಾಗಲೇ ಸುಮಾರು 100 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಭಾರತದ ಪ್ರಜೆಗಳು ಎಲ್ಲಿಯೇ ಇದ್ದರೂ ಅವರ ಯೋಗ ಕ್ಷೇಮವೇ ತನಗೆ ಮುಖ್ಯವಾಗಿದೆ ಎಂದು ಭಾರತ ಹೇಳಿದೆ.

ಅಮೆರಿಕ, ಬ್ರಿಟನ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ದೇಶಗಳು ಸುಡಾನ್‌ನಲ್ಲಿ ಪ್ರಮುಖ ಪಾತ್ರ ಹೊಂದಿವೆ ಮತ್ತು ಅದಕ್ಕೆ ಅನುಗುಣವಾಗಿ ಭಾರತವು ಅವುಗಳೊಂದಿಗೆ ಮಾತುಕತೆ ನಡೆಸುತ್ತಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಸೌದಿ ಅರೇಬಿಯಾ ಮತ್ತು ಯುಎಇಯ ವಿದೇಶಾಂಗ ಸಚಿವರೊಂದಿಗೆ ಈಗಾಗಲೇ ಮಾತನಾಡಿದ್ದಾರೆ. ಸುಡಾನ್​ನಲ್ಲಿ ಭಾರತಕ್ಕೆ ಅಗತ್ಯವಾದ ಸಹಾಯ ಮಾಡುವುದಾಗಿ ಎರಡೂ ದೇಶಗಳ ವಿದೇಶಾಂಗ ಮಂತ್ರಿಗಳು ಜೈಶಂಕರ್ ಅವರಿಗೆ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಸುಡಾನ್‌ನಲ್ಲಿ ಗಣನೀಯ ಅಸ್ತಿತ್ವ ಹೊಂದಿರುವ ಯುಎನ್‌ನೊಂದಿಗೆ ಭಾರತವೂ ಕಾರ್ಯನಿರ್ವಹಿಸುತ್ತಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಸುಡಾನ್ ರಾಜಧಾನಿ ಖಾರ್ಟೂಮ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿನ ಪರಿಸ್ಥಿತಿ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ಕೆಲವೊಂದು ವಿಷಯಗಳನ್ನು ನಾವು ಬಹಿರಂಗಪಡಿಸುತ್ತಿಲ್ಲ ಎಂದು, ಮೇಲೆ ಉಲ್ಲೇಖಿಸಿದ ಮೂಲವು ಹೇಳಿದೆ.

ಇದಕ್ಕೂ ಮುನ್ನ ಹಿಂಸಾಚಾರ ಪೀಡಿತ ದೇಶ ಸುಡಾನ್​ನಲ್ಲಿ ಯುಎಸ್ ರಾಜತಾಂತ್ರಿಕ ಬೆಂಗಾವಲು ಪಡೆಯ ಮೇಲೆ ಗುಂಡು ಹಾರಿಸಲಾಯಿತು ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಜಿ7 ಮಾತುಕತೆಯ ನಂತರ ಜಪಾನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯುಎಸ್ ವಿದೇಶಾಂಗ ಕಾರ್ಯದರ್ಶಿ, ಎಲ್ಲ ಅಮೆರಿಕನ್ನರು ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.

ನಿನ್ನೆ ಅಮೆರಿಕದ ರಾಜತಾಂತ್ರಿಕ ಬೆಂಗಾವಲು ಪಡೆಯ ಮೇಲೆ ಗುಂಡು ಹಾರಿಸಿರುವುದು ನಿಜ. ಆದರೆ, ನಮ್ಮ ಎಲ್ಲ ಪ್ರಜೆಗಳು ಸುರಕ್ಷಿತವಾಗಿದ್ದಾರೆ. ಆದರೆ, ನಮ್ಮ ಜನರ ಮೇಲೆ ಗುಂಡು ಹಾರಿಸಿದ ಕ್ರಮವು ಅಜಾಗರೂಕತನದ್ದು ಮತ್ತು ಬೇಜವಾಬ್ದಾರಿತನದ್ದಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಈ ಮಧ್ಯೆ ಬ್ಲಿಂಕನ್ ಅವರು ಸುಡಾನ್ ಸಶಸ್ತ್ರ ಪಡೆಗಳ ಕಮಾಂಡರ್ ಬುರ್ಹಾನ್ ಮತ್ತು ಕ್ಷಿಪ್ರ ಬೆಂಬಲ ಪಡೆಗಳ ಕಮಾಂಡರ್ ದಗಾಲೊ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಕದನ ವಿರಾಮವನ್ನು ಜಾರಿಗೆ ತರುವ ಅಗತ್ಯ ವ್ಯಕ್ತಪಡಿಸಿದ್ದಾರೆ. ಏತನ್ಮಧ್ಯೆ ಸುಡಾನ್ ಪರಿಸ್ಥಿತಿ ಬಗ್ಗೆ ಟ್ವೀಟ್ ಮಾಡಿರುವ ವಿದೇಶಾಂಗ ಸಚಿವ ಜೈಶಂಕರ್, ಇದೀಗ ಸೌದಿ ಅರೇಬಿಯಾದ ವಿದೇಶಾಂಗ ಸಚಿವ ಫೈಸಲ್ ಬಿನ್ ಫರ್ಹಾನ್ ಅವರೊಂದಿಗೆ ಮಾತನಾಡಿದ್ದೇವೆ. ಅವರು ಸುಡಾನ್ ಪರಿಸ್ಥಿತಿಯ ಬಗ್ಗೆ ಮಾಹಿತಿ ಹಂಚಿಕೊಂಡರು. ಅವರು ನಮ್ಮ ನಿಕಟ ಸಂಪರ್ಕದಲ್ಲಿರುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಸುಡಾನ್ ಸೇನಾ ಸಂಘರ್ಷ: ನೂರಕ್ಕೂ ಹೆಚ್ಚು ಸಾವು, 600 ಜನರಿಗೆ ಗಾಯ

ABOUT THE AUTHOR

...view details