ಕರ್ನಾಟಕ

karnataka

By

Published : Jun 25, 2023, 6:59 AM IST

ETV Bharat / bharat

Heat wave: ಬಿಸಿಗಾಳಿ ತೀವ್ರ: ಪಾಟ್ನಾದ ಶಾಲಾ-ಕಾಲೇಜುಗಳಿಗೆ ಜೂನ್ 28ರವರೆಗೆ ರಜೆ ಘೋಷಣೆ

ಬಿಹಾರ ರಾಜ್ಯ ಮಿತಿಮೀರಿದ ಉಷ್ಣಾಂಶದಿಂದ ತತ್ತರಿಸುತ್ತಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಹೀಗಾಗಿ ಶಿಕ್ಷಣ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

heat wave
ಶಾಲಾ ಕಾಲೇಜುಗಳಿಗೆ ರಜೆ ವಿಸ್ತರಣೆ

ಬಿಹಾರ : ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಮುಂಗಾರು ಚುರುಕುಗೊಂಡಿದೆ. ಆದ್ರೆ, ಬಿಹಾರದ ಪಾಟ್ನಾ ಜಿಲ್ಲೆಯಲ್ಲಿ ಉಷ್ಣಾಂಶದಲ್ಲಿ ಭಾರಿ ಏರಿಕೆಯಾಗಿದ್ದು, ಬಿಸಿಗಾಳಿಯಿಂದ ಜನ ತತ್ತರಿಸಿ ಹೋಗಿದ್ದಾರೆ. 12ನೇ ತರಗತಿಯವರೆಗಿನ ಎಲ್ಲ ಶೈಕ್ಷಣಿಕ ಚಟುವಟಿಕೆಗಳನ್ನು ಜೂನ್ 24ರವರೆಗೆ ಸ್ಥಗಿತಗೊಳಿಸಿರುವುದಾಗಿ ಇತ್ತೀಚೆಗೆ ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶ ಹೊರಡಿಸಿತ್ತು. ಇದೀಗ ಬಿಸಿಗಾಳಿಯ ಪ್ರಭಾವ ಕಡಿಮೆಯಾಗದ ಹಿನ್ನೆಲೆಯಲ್ಲಿ ಜೂನ್ 28 ರವರೆಗೂ ಶಾಲಾ-ಕಾಲೇಜುಗಳಿಗೆ ರಜೆ ವಿಸ್ತರಿಸಿ ಮರು ಆದೇಶ ಹೊರಡಿಸಲಾಗಿದೆ.

"ಜಿಲ್ಲೆಯಲ್ಲಿ ಶಾಖದ ಅಲೆ ಮುಂದುವರೆದಿದೆ. ಹೆಚ್ಚಿನ ತಾಪಮಾನ ಇರುವ ಕಾರಣ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, 12ನೇ ತರಗತಿಯವರೆಗೆ ಅಪರಾಧ ಪ್ರಕ್ರಿಯಾ ಸಂಹಿತೆ 1973 ರ ಸೆಕ್ಷನ್ 144ರ ಅಡಿಯಲ್ಲಿ ಪಾಟ್ನಾದ ಎಲ್ಲ ಖಾಸಗಿ ಮತ್ತು ಸರ್ಕಾರಿ ಶಾಲೆಗಳ (ಪ್ರಿ-ಸ್ಕೂಲ್ ಮತ್ತು ಅಂಗನವಾಡಿ ಕೇಂದ್ರಗಳು ಸೇರಿದಂತೆ) ಶೈಕ್ಷಣಿಕ ಚಟುವಟಿಕೆಗಳನ್ನು ನಿಷೇಧಿಸುತ್ತಿದ್ದೇವೆ. ಈ ಆದೇಶವು ಜೂನ್ 26, 2023 ರಿಂದ ಜಾರಿಗೆ ಬರಲಿದ್ದು, 28 ರವರೆಗೆ ಜಾರಿಯಲ್ಲಿರುತ್ತದೆ" ಎಂದು ಜಿಲ್ಲಾಧಿಕಾರಿ ಡಾ. ಚಂದ್ರ ಶೇಖರ್ ಸಿಂಗ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಬಿಸಿಗಾಳಿಗೆ ಇಬ್ಬರು ಬಲಿ :ಇನ್ನು ಈ ತಿಂಗಳ ಆರಂಭದಲ್ಲಿ ಬಿಹಾರದ ಗಯಾ ಜಿಲ್ಲೆಯಲ್ಲಿರುವ ಅನುಗ್ರಹ ನಾರಾಯಣ್ ಮಗಧ್ ವೈದ್ಯಕೀಯ ಕಾಲೇಜಿನಲ್ಲಿ ತೀವ್ರವಾದ ಉಷ್ಣಾಂಶಕ್ಕೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಕಳೆದ ಸೋಮವಾರದವರೆಗೆ ಅನುಗ್ರಹ ನಾರಾಯಣ ಮಗಧ್ ವೈದ್ಯಕೀಯ ಕಾಲೇಜಿನಲ್ಲಿ ಒಟ್ಟು 58 ರೋಗಿಗಳು ದಾಖಲಾಗಿದ್ದರು. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ, ದೇಶಾದ್ಯಂತ ಬಿಸಿಗಾಳಿಯ ಪರಿಣಾಮಗಳನ್ನು ತಗ್ಗಿಸಲು ಮತ್ತು ಸಾರ್ವಜನಿಕ ಆರೋಗ್ಯ ಸೇವೆಗಳ ಸನ್ನದ್ಧತೆ ಕುರಿತು ಪರಿಶೀಲಿಸಿದ್ದರು.

ಇದನ್ನೂ ಓದಿ :ಬಿಸಿಗಾಳಿ ಬೀಸುವ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ: ಬಿಸಿಲ ಬೇಗೆಯಿಂದ ಸುಡುತ್ತಿದೆ ರಾಜ್ಯ ಕರಾವಳಿ

ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ್ದ ಅವರು, "ರಾಜ್ಯ ಸರ್ಕಾರಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಬಿಸಿಗಾಳಿಯನ್ನು ಅನುಭವಿಸುತ್ತಿರುವ ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಅಧಿಕಾರಿಗಳ ತಂಡವನ್ನು ಕಳುಹಿಸಲಾಗುವುದು. ಕೇಂದ್ರ ಆರೋಗ್ಯ ಸಚಿವಾಲಯ, ICMR, IMD ಮತ್ತು NDMAಯ ತಜ್ಞರ ತಂಡವು ಈ ಎರಡು ರಾಜ್ಯಗಳಿಗೆ ಭೇಟಿ ನೀಡಿ ಶಾಖ-ಸಂಬಂಧಿತ ಕಾಯಿಲೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಿದೆ" ಎಂದು ಹೇಳಿದ್ದರು.

ಇನ್ನೊಂದೆಡೆ, ಮಾಂಡವಿಯಾ ಅವರು ಅಲ್ಪ, ಮಧ್ಯಮ ಮತ್ತು ದೀರ್ಘಾವಧಿಯ ಕ್ರಿಯಾ ಯೋಜನೆಗಳೊಂದಿಗೆ ಆರೋಗ್ಯದ ಮೇಲೆ ಉಷ್ಣಾಂಶದ ಅಲೆಗಳ ಪರಿಣಾಮವನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಕುರಿತು ಸಂಶೋಧನೆ ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ICMR) ನಿರ್ದೇಶಿಸಿದ್ದಾರೆ.

ಇದನ್ನೂ ಓದಿ :ಉತ್ತರಪ್ರದೇಶದಲ್ಲಿ ಬಿಸಿಗಾಳಿಗೆ 24 ಗಂಟೆಯಲ್ಲಿ 10 ಬಲಿ.. ನಾಲ್ಕು ದಿನಗಳಲ್ಲಿ 68ಕ್ಕೂ ಹೆಚ್ಚು ಸಾವು!

ABOUT THE AUTHOR

...view details