ಕರ್ನಾಟಕ

karnataka

By ETV Bharat Karnataka Team

Published : Jan 4, 2024, 9:40 AM IST

Updated : Jan 4, 2024, 10:55 AM IST

ETV Bharat / bharat

ದೆಹಲಿ ಸಿಎಂ ಕೇಜ್ರಿವಾಲ್ ಬಂಧನ ಸಾಧ್ಯತೆ ಎಂದ ಎಎಪಿ​: ನಿವಾಸದ ಬಳಿ ಬಿಗಿ ಭದ್ರತೆ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

CM Arvind Kejriwal  raid at CM Arvind  Possibility of ED raid  ದೆಹಲಿ ಮದ್ಯ ಹಗರಣ ಪ್ರಕರಣ  ಜಾರಿ ನಿರ್ದೇಶನಾಲಯ
ವಿಚಾರಣೆಗೆ ಆಗದ ಸಿಎಂ ಕೇಜ್ರಿವಾಲ್​ರನ್ನು ಬಂಧಿಸಲಿದೆ ಇಡಿ?

ನವದೆಹಲಿ:ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದ ಸುತ್ತ ಗುರುವಾರ ಬೆಳಗ್ಗೆ ಪೊಲೀಸ್​ ಭದ್ರತೆ ಬಿಗಿಗೊಳಿಸಲಾಗಿದೆ. ಕೇಜ್ರಿವಾಲ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ, ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ. ಕೇಜ್ರಿವಾಲ್ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪ್ರವೇಶಿಸದಂತೆ ದೆಹಲಿ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ ಎಂದು ಆಪ್​ ಆರೋಪಿಸಿದೆ.

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಮನ್ಸ್ ಜಾರಿಗೊಳಿಸಿದ್ದರೂ ವಿಚಾರಣೆಗೆ ದೆಹಲಿ ಸಿಎಂ ಗೈರಾಗಿದ್ದರು. ಈ ಬೆಳವಣಿಗೆ ಬಳಿಕ, ಆಪ್​ ಸಂಸದ ಸಂದೀಪ್ ಪಾಠಕ್ ಮತ್ತು ದೆಹಲಿ ಸರ್ಕಾರದ ಸಚಿವರಾದ ಸೌರಭ್ ಭಾರದ್ವಾಜ್ ಮತ್ತು ಅತಿಶಿ ತಮ್ಮ ಮೂಲಗಳನ್ನು ಉಲ್ಲೇಖಿಸಿ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಗುರುವಾರ ಬೆಳಗ್ಗೆ ಕೇಜ್ರಿವಾಲ್ ಮನೆ ಮೇಲೆ ಇಡಿ ದಾಳಿ ನಡೆಸಬಹುದು. ಈ ವೇಳೆ ಕೇಜ್ರಿವಾಲ್ ಅವರನ್ನು ಬಂಧಿಸುವ ಸಾಧ್ಯತೆಯಿದೆ ಎಂದಿದ್ದಾರೆ. ದೆಹಲಿ ಸಚಿವ ಸೌರಭ್ ಭಾರದ್ವಾಜ್ ಅವರು 'ಎಕ್ಸ್' ನಲ್ಲಿ ಪೋಸ್ಟ್​ ಮಾಡಿ, 'ಇಡಿ ತಂಡ ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಮನೆ ಮೇಲೆ ದಾಳಿ ಮಾಡಿ ಅವರನ್ನು ಬಂಧಿಸಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ' ಅಂತಾ ಬರೆದುಕೊಂಡಿದ್ದಾರೆ.

ಸಿಎಂ ಕೇಜ್ರಿವಾಲ್​ ಅವರು ಇಡಿ ಮೂರನೇ ಸಮನ್ಸ್‌ಗೆ ಬುಧವಾರ ಹಾಜರಾಗದೆ, ತಮ್ಮ ಉತ್ತರ ಕಳುಹಿಸಿದ್ದರು. ಅದರಲ್ಲಿ, 'ನಾನು ಎತ್ತಿರುವ ಆಕ್ಷೇಪಣೆಗೆ ನೀವು ಪ್ರತಿಕ್ರಿಯಿಸದಿರುವುದು ಮತ್ತು ಹಿಂದಿನಂತೆಯೇ ಮತ್ತೊಮ್ಮೆ ಸಮನ್ಸ್ ಕಳುಹಿಸಿರುವುದು ನನಗೆ ಆಶ್ಚರ್ಯ ತಂದಿದೆ. ಆದ್ದರಿಂದ, ಈ ಸಮನ್ಸ್‌ಗಳಿಗೆ ಯಾವುದೇ ಸಮರ್ಥನೆ ಇಲ್ಲ ಎಂದು ಅನಿಸುತ್ತಿದೆ’ ಎಂದು ಇಡಿ ವಿರುದ್ಧ ಕಿಡಿಕಾರಿದ್ದರು.

'ನಾನು ಯಾವಾಗಲೂ ಕಾನೂನನ್ನು ಗೌರವಿಸುತ್ತೇನೆ. ತನಿಖೆಗೆ ಸಹಕರಿಸಲು ಸಿದ್ಧ. ಈ ತನಿಖೆಯ ಉದ್ದೇಶವನ್ನು ಅರಿಯಲು ಇಡಿ ನನ್ನ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು' ಎಂದು ಕೇಜ್ರಿವಾಲ್ ಒತ್ತಾಯಿಸಿದ್ದರು. ಮದ್ಯ ಹಗರಣದಲ್ಲಿ ಆಪ್​ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸಿದ ಬಳಿಕ, ಕಳೆದ ನವೆಂಬರ್‌ನಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಮೊದಲ ಬಾರಿಗೆ ಸಮನ್ಸ್ ಕಳುಹಿಸಿತ್ತು. ನವೆಂಬರ್ 2ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿತ್ತು. ಆದರೆ ಕೇಜ್ರಿವಾಲ್‌ ವಿಚಾರಣೆಗೆ ಹಾಜರಾಗಿರಲಿಲ್ಲ. ನಂತರ ಇಡಿಗೆ ಪತ್ರ ಬರೆದು, ಯಾವ ಕಾನೂನಿನ ಅಡಿಯಲ್ಲಿ ತಮಗೆ ಸಮನ್ಸ್ ಕಳುಹಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸುವಂತೆ ದೆಹಲಿ ಸಿಎಂ ಆಗ್ರಹಿಸಿದ್ದರು.

ಜನವರಿ 3ರಂದು ಮೂರನೇ ಬಾರಿಗೆ ಸಮನ್ಸ್ ಕಳುಹಿಸಿರುವ ಇಡಿ ಸಿಎಂ ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಇತ್ತೀಚೆಗಷ್ಟೇ ಇಡಿ ಮೂರನೇ ಸಮನ್ಸ್ ಕಳುಹಿಸಿದಾಗ ಸಿಎಂ ಕೇಜ್ರಿವಾಲ್ ಪಂಜಾಬ್‌ಗೆ ತೆರಳಿದ್ದರು. ಕಳೆದ ವರ್ಷ ಏಪ್ರಿಲ್‌ನಲ್ಲಿ ದೆಹಲಿ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಬಿಐ ವಿಚಾರಣೆ ನಡೆಸಿತ್ತು.

ಓದಿ:ರಾಮಮಂದಿರ, ಯುಪಿ ಸಿಎಂ ಯೋಗಿಗೆ ಬಾಂಬ್ ಬೆದರಿಕೆ: ಇಬ್ಬರ ಬಂಧನ

Last Updated : Jan 4, 2024, 10:55 AM IST

ABOUT THE AUTHOR

...view details