ಕರ್ನಾಟಕ

karnataka

ಮಣಿಪುರದಲ್ಲಿ ಭದ್ರತಾ ಪಡೆ ದಂಗೆಕೋರರ ನಡುವೆ ಗುಂಡಿನ ದಾಳಿ: ಬಿಎಸ್‌ಎಫ್ ಜವಾನ ಹುತಾತ್ಮ

By

Published : Jun 6, 2023, 12:58 PM IST

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಹಿಂಸಾಚಾರ ಹೆಚ್ಚುತ್ತಿರುವ ನಡುವೆಯೇ ಮಣಿಪುರದ ಕಕ್ಚಿಂಗ್ ಜಿಲ್ಲೆಯ ಸೆರೋ ಸುಗ್ನು ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದೆ.

BSF jawan killed, 2 Assam Rifles personnel injured in Gunfight between security forces and insurgents in Manipur
ಮಣಿಪುರದಲ್ಲಿ ಭದ್ರತಾ ಪಡೆ ದಂಗೆಕೋರರ ನಡುವೆ ಗುಂಡಿನ ದಾಳಿ

ಮಣಿಪುರ:ಕಳೆದ ಕೆಲವು ದಿನಗಳಿಂದ ಹಿಂಸಾಚಾರದ ಮಡುವಿನಲ್ಲಿ ಬಿದ್ದಿರುವ ಮಣಿಪುರದಲ್ಲಿ ಇದೀಗ ಭದ್ರತಾ ಪಡೆಗಳ ಮೇಲೆ ಶಂಕತ ಉಗ್ರರು ಗುಂಡಿನಾ ದಾಳಿ ನಡೆಸಿರುವ ಘಟನೆ ನಡೆದಿದೆ.ಸೋಮವಾರ ಮಧ್ಯರಾತ್ರಿ ಮಣಿಪುರದ ಕಾಕ್ಚಿಂಗ್ ಜಿಲ್ಲೆಯ ಸೆರೊ ಸುಗ್ನು ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ದಂಗೆಕೋರರ ಗುಂಪಿನ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಅಸ್ಸಾಂ ರೈಫಲ್ಸ್‌ನ ಇಬ್ಬರು ಸಿಬ್ಬಂದಿ ಗುಂಡೇಟಿನಿಂದ ಗಾಯಗೊಂಡಿದ್ದು, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧ ಹುತಾತ್ಮರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹುತಾತ್ಮರಾದ ಯೋಧನನ್ನು ಬಿಎಸ್‌ಎಫ್ ಕಾನ್ಸ್​​ಟೇಬಲ್​ ರಂಜಿತ್ ಯಾದವ್ ಎಂದು ಗುರುತಿಸಲಾಗಿದೆ.

ಬಿಎಸ್‌ಎಫ್ ಕಾನ್ಸ್​ಟೇಬಲ್​​ ರಂಜಿತ್ ಯಾದವ್ ಅವರನ್ನು ಮಣಿಪುರದ ಕಕ್ಚಿಂಗ್ ಜಿಲ್ಲೆಯ ಸುಗ್ನು ಪ್ರದೇಶದ ಸೆರೋ ಪ್ರಾಕ್ಟಿಕಲ್ ಹೈಸ್ಕೂಲ್‌ಗೆ ನಿಯೋಜಿಸಲಾಗಿತ್ತು. ಕಳೆದ ತಿಂಗಳು ಆರಂಭವಾದ ಹಿಂಸಾಚಾರವನ್ನು ಹತ್ತಿಕ್ಕಲು ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸಾವನ್ನಪ್ಪಿದವರಲ್ಲಿ ಯಾದವ್ ಎರಡನೇ ಬಿಎಸ್‌ಎಫ್ ಅಧಿಕಾರಿಯಾಗಿದ್ದಾರೆ. ಈಶಾನ್ಯ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಜನಾಂಗೀಯ ಘರ್ಷಣೆಯ ನಂತರ ಅಸ್ಸಾಂ ರೈಫಲ್ಸ್, ಬಿಎಸ್ಎಫ್ ಮತ್ತು ಮಣಿಪುರ ಪೊಲೀಸರು ಸುಗ್ನು-ಸೆರೋ ಪ್ರದೇಶದಲ್ಲಿ ಜಂಟಿ ಪ್ರದೇಶ ಪ್ರಾಬಲ್ಯ ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.

"ಬೆಳಗ್ಗೆ 4.05 ರ ಸುಮಾರಿಗೆ ಶಂಕಿತ ಕುಕಿ ಉಗ್ರಗಾಮಿಗಳು ಸೆರೋ ಪ್ರಾಕ್ಟಿಕಲ್ ಶಾಲೆಯಲ್ಲಿ ಬೀಡುಬಿಟ್ಟಿದ್ದ ಬಿಎಸ್‌ಎಫ್ ಸಿಬ್ಬಂದಿಯ ಮೇಲೆ ವಿವೇಚನಾರಹಿತ ಮತ್ತು ಭಾರೀ ಪ್ರಮಾಣದ ಗುಂಡಿನ ದಾಳಿ ನಡೆಸಿದರು. 163 ಬೆಟಾಲಿಯನ್‌ನೊಂದಿಗೆ ನಿಯೋಜಿಸಲಾಗಿದ್ದ ಕಾನ್ಸ್​ಟೇಬಲ್​ ಯಾದವ್ ಅವರಿಗೆ ಬುಲೆಟ್ ಗಾಯವಾಗಿದ್ದು, ಅವರನ್ನು ಕಾಕ್ಚಿಂಗ್‌ನ ಜಿತನ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ಯೋಧ ಸಾವನ್ನಪ್ಪಿರುವುದಾಗಿ ಘೋಷಣೆ ಮಾಡಿದ್ದಾರೆ, ”ಎಂದು ಬಿಎಸ್ಎಫ್ ವಕ್ತಾರರು ಹೇಳಿದರು.

ಸೇನಾ ಅಧಿಕಾರಿಗಳ ಪ್ರಕಾರ, ಜೂನ್ 5 ರ ರಾತ್ರಿ ಹಾಗೂ 6 ರ ಮುಂಜಾನೆವರೆಗೆ ಭದ್ರತಾ ಪಡೆಗಳು ಮತ್ತು ದಂಗೆಕೋರರ ಗುಂಪಿನ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ. ದಂಗೆಕೋರರ ಗುಂಪು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ್ದು, ಅದಕ್ಕೆ ಸರಿಯಾಗಿ ನಮ್ಮ ಭದ್ರತಾ ಪಡೆಗಳು ಕೂಡ ಸಮರ್ಥವಾಗಿ ಪ್ರತಿದಾಳಿ ನಡೆಸಿದೆ ಎಂದು ಭಾರತೀಯ ಸೇನೆಯ ಸ್ಪಿಯರ್ ಕಾರ್ಪ್ಸ್ ತಿಳಿಸಿದೆ.

ಮುಂದುವರಿದ ಶೋಧ ಕಾರ್ಯಾಚರಣೆ:ಜಿಲ್ಲೆಯ ಇತರ ಭಾಗಗಳಲ್ಲಿ ಉಗ್ರಗಾಮಿ ಗುಂಪುಗಳು ಮತ್ತು ಭದ್ರತಾ ಪಡೆಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಭಾನುವಾರ ಶಂಕಿತ ಉಗ್ರರು ಮಣಿಪುರದ ಕಕ್ಚಿಂಗ್ ಜಿಲ್ಲೆಯ ಸೆರೋ ಗ್ರಾಮದಲ್ಲಿ ಕನಿಷ್ಠ 100 ಮನೆಗಳಿಗೆ ಬೆಂಕಿ ಹಚ್ಚಿದ ನಂತರ ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಮಣಿಪುರದಲ್ಲಿ ಹಿಂಸಾಚಾರದಲ್ಲಿ ಉಲ್ಬಣವಾಗಿದ್ದು, ಶನಿವಾರ ಶಂಕಿತ ಉಗ್ರರು ಕಾಕ್‌ಚಾಂಗ್ ಜಿಲ್ಲೆಯ ಸುಗ್ನು ಬಳಿಯ ಸೆರೊ ಬಜಾರ್‌ನಲ್ಲಿ ಕಾಂಗ್ರೆಸ್ ಶಾಸಕ ಕೆ ರಂಜಿತ್ ಸಿಂಗ್ ಅವರ ನಿವಾಸ ಸೇರಿದಂತೆ ಕೆಲವು ಮನೆಗಳನ್ನು ಸುಟ್ಟು ಹಾಕಿದ್ದಾರೆ. ನಂತರ ರಾತ್ರಿ ವೇಳೆಯಲ್ಲೇ ಬಂಡುಕೋರರ ಗುಂಪು ಭದ್ರತಾ ಪಡೆಗಳ ಶಿಬಿರವನ್ನು ಮುತ್ತಿಗೆ ಹಾಕಲು ಪ್ರಯತ್ನಿಸಿದ್ದು, ಅಲ್ಲಿ ರಾತ್ರಿಯಿಡೀ ಮಧ್ಯಂತರ ಗುಂಡಿನ ದಾಳಿ ಮುಂದುವರೆದಿತ್ತು.

ರಾಜ್ಯದ ವಿವಿಧ ಭಾಗಗಳನ್ನು ಆವರಿಸಿರುವ ಜನಾಂಗೀಯ ಹಿಂಸಾಚಾರವು ಇದುವರೆಗೆ 98 ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು 310 ಜನರು ಗಾಯಗೊಂಡಿದ್ದಾರೆ. ರಾಜ್ಯದಲ್ಲಿ ಕನಿಷ್ಠ 4,000 ಅಗ್ನಿಸ್ಪರ್ಶ ಪ್ರಕರಣಗಳು ವರದಿಯಾಗಿವೆ, ಅಲ್ಲಿ 36,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಬಠಿಂಡಾ ಸೇನಾ ನೆಲೆಯಲ್ಲಿ ಮತ್ತೊಬ್ಬ ಯೋಧ ಸಾವು: ಕಾಣೆಯಾಗಿದ್ದ ರೈಫಲ್​ ಬಗ್ಗೆ ತನಿಖೆ

ABOUT THE AUTHOR

...view details