ನವದೆಹಲಿ:ಮಣಿಪುರ, ತಮಿಳುನಾಡಿನಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ಬಿಹಾರದಲ್ಲಿ ನಿತೀಶ್ ಕುಮಾರ್ ವಿಧಾನಸಭೆ ಕಟ್ಟಡವನ್ನು ಉದ್ಘಾಟಿಸಿದ್ದರು. ಮಾಜಿ ಪಿಎಂ ಇಂದಿರಾ ಗಾಂಧಿ ಸಂಸತ್ ಭವನದ ಹೆಚ್ಚುವರಿ ಭವನ ಉದ್ಘಾಟಿಸಿದರೆ, ಅವರ ಉತ್ತರಾಧಿಕಾರಿಯಾಗಿದ್ದ ರಾಜೀವ್ ಗಾಂಧಿ 1987 ರಲ್ಲಿ ಸಂಸತ್ ಗ್ರಂಥಾಲಯ ಕಟ್ಟಡದ ಶಂಕುಸ್ಥಾಪನೆ ಮಾಡಿದ್ದರು. ಇದ್ಯಾವುದಕ್ಕೂ ರಾಷ್ಟ್ರಪತಿಗಳು ನೆನಪಾಗದ ಕಾಂಗ್ರೆಸ್ಗೆ, ಪ್ರಧಾನಿ ಮೋದಿ ಉದ್ಘಾಟಿಸಲಿರುವ ನೂತನ ಸಂಸತ್ ಭವನದ ವೇಳೆ ಎಚ್ಚರವಾಗಿದೆ ಎಂದು ಬಿಜೆಪಿ ಟೀಕಾಪ್ರಹಾರ ನಡೆಸಿದೆ.
ನೂತನ ಸಂಸತ್ ಭವನ ಉದ್ಘಾಟನೆ ವಿಚಾರದಲ್ಲಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಬೂಟಾಟಿಕೆ ನಡೆಸುತ್ತಿವೆ. ಪ್ರಧಾನಿ ಮೋದಿ ಅವರ ಮೇಲಿರುವ ಅಪರಿಮಿತ ದ್ವೇಷವೇ ವಿರೋಧಕ್ಕೆ ಕಾರಣ. ಸೋನಿಯಾ ಗಾಂಧಿ ಅವರು ವಿಧಾನಸಭೆ ಕಟ್ಟಡ ಉದ್ಘಾಟನೆ ಮಾಡಿದಾಗ ಅವರ ಸ್ಥಾನ ಏನಾಗಿತ್ತು ಎಂಬುದನ್ನು ಕಾಂಗ್ರೆಸ್ ವಿವರಿಸಬೇಕು ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಸೇರಿದಂತೆ 21 ವಿಪಕ್ಷಗಳು ನೂತನ ಸಂಸತ್ ಭವನ ಉದ್ಘಾಟನೆಯನ್ನು ಬಹಿಷ್ಕರಿಸಿದ್ದಕ್ಕೆ ಉದಾಹರಣೆಗಳ ಸಮೇತ ಪ್ರಶ್ನಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಅವರು, ವಿರೋಧ ಪಕ್ಷಗಳು ಈ ನಿರ್ಧಾರ ತಳೆಯುವ ಮುನ್ನ ಹಿಂದಿನ ಘಟನೆಗಳನ್ನು ನೆನಪಿಸಿಕೊಳ್ಳಬೇಕು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಸಂಸತ್ ಭವನದ ಅನೆಕ್ಸ್(ಹೆಚ್ಚುವರಿ ಭವನ) ಅನ್ನು ಉದ್ಘಾಟಿಸಿದರು. ಅವರ ಉತ್ತರಾಧಿಕಾರಿ ರಾಜೀವ್ ಗಾಂಧಿ ಅವರು 1987 ರಲ್ಲಿ ಸಂಸತ್ತು ಗ್ರಂಥಾಲಯ ಕಟ್ಟಡದ ಶಂಕುಸ್ಥಾಪನೆ ಮಾಡಿದರು. ಆಗ ರಾಷ್ಟ್ರಪತಿಗಳನ್ನು ಯಾಕೆ ಕರೆಯಲಿಲ್ಲ ಎಂದು ಕೇಳಿದ್ದಾರೆ.
ಮಣಿಪುರ ಮತ್ತು ತಮಿಳುನಾಡಿನಲ್ಲಿ ವಿಧಾನಸಭೆ ಕಟ್ಟಡಗಳನ್ನು ಉದ್ಘಾಟನೆ ಮಾಡಿದ್ದು, ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ. ಸಿಂಗ್ ಅವರು ಪ್ರಧಾನಿಗಳಾಗಿದ್ದರು. ಆದರೆ, ಸೋನಿಯಾ ಅವರ ಹುದ್ದೆ ಏನಾಗಿತ್ತು. ಅವರಿಂದ ಯಾಕೆ ಉದ್ಘಾಟನೆ ಮಾಡಿಸಲಾಯಿತು ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು. ಮೋದಿಯವರನ್ನು ವಿರೋಧಿಸುವ ಕಾಂಗ್ರೆಸ್ನ ಬೂಟಾಟಿಕೆಗೆ ಮಿತಿಯಿಲ್ಲ ಎಂದು ಖಂಡಿಸಿದರು.