ನವದೆಹಲಿ : ನಾಲ್ಕು ದಿನಗಳ ಭಾರತದ ಪ್ರವಾಸದಲ್ಲಿರುವ ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ ದೆಹಲಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದರು.
ಉಭಯ ದೇಶಗಳ ನಡುವೆ ರಕ್ಷಣೆ,ವ್ಯಾಪಾರ ಮತ್ತು ಸಂಪರ್ಕ ಸೇರಿ ಇತರೆ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಈ ಮೂಲಕ ಎರಡು ದೇಶಗಳ ನಡುವಿನ ಸಂಬಂಧ ಮತ್ತಷ್ಟು ಬಲಿಷ್ಠಗೊಳಿಸಲಾಯಿತು. ಇದೇ ವೇಳೆ ರೋಹಿಗ್ಯಾ ಸಮಸ್ಯೆ ಹಾಗೂ ಭಾರತ ಈರುಳ್ಳಿ ರಪ್ತು ಮಾಡುವುದನ್ನ ಸ್ಥಗಿತಗೊಳಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಬಾಂಗ್ಲಾ ಗಂಭೀರವಾಗಿ ಚರ್ಚೆ ನಡೆಸಿತು.
ಇದೇ ವೇಳೆ ಮಾತನಾಡಿದ ಪ್ರಧಾನಿ ಮೋದಿ ಕಳೆದ ಒಂದು ವರ್ಷದಲ್ಲಿ ಎರಡು ದೇಶಗಳು ಒಟ್ಟಿಗೆ 12 ಯೋಜನೆ ಪ್ರಾರಂಭಿಸಿದ್ದು, ಅದರಿಂದ ಎರಡು ದೇಶದ ಜನರಿಗೆ ಲಾಭವಾಗಿದೆ ಎಂದು ತಿಳಿಸಿದರು. ನೆರೆಯ ಬಾಂಗ್ಲಾದಿಂದ ಎಲ್ಪಿಜಿ ತೆಗೆದುಕೊಳ್ಳಲು ಇದು ಸೂಕ್ತ ಸಮಯ ಇದರಿಂದ ನಮಗೆ ಅನಿಲ ಲಭ್ಯವಾದರೆ ಬಾಂಗ್ಲಾದೇಶಕ್ಕೆ ಉದ್ಯೋಗ ಲಭ್ಯವಾಗಲಿದೆ ಎಂದರು.
ಇದಕ್ಕೂ ಮುಂಚಿತವಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಭೇಟಿ ಮಾಡಿದ ಹಸೀನಾ ಮಹತ್ವದ ವಿಷಯಗಳ ಕುರಿತು ಮಾತುಕತೆ ನಡೆಸಿದ್ದರು. ಈ ವಿಷಯವನ್ನ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.