ನವದೆಹಲಿ:ದೆಹಲಿ ಹಿಂಸಾಚಾರ ಪ್ರಕರಣವನ್ನು ವಿಚಾರಣೆ ನಡೆಸಿ ಪೊಲೀಸರನ್ನು ತರಾಟೆಗೆತೆಗೆದುಕೊಂಡಿದ್ದ ದೆಹಲಿ ಹೈಕೋರ್ಟ್ ನ್ಯಾಯಾಧೀಶ ಎಸ್ ಮುರಳೀಧರ್ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ಗೆ ವರ್ಗಾಯಿಸಲಾಗಿದೆ.
ಮುರಳೀಧರ್ ಅವರು ದೆಹಲಿ ಹಿಂಸಾಚಾರ ಪ್ರಕರಣವನ್ನು ವಿಚಾರಣೆ ನಡೆಸಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು. ದೆಹಲಿ ಪೊಲೀಸರು ಮೂವರು ಬಿಜೆಪಿ ನಾಯಕರ ದ್ವೇಷದ ಭಾಷಣಗಳ ವಿರುದ್ಧ ಎಫ್ಐಆರ್ ದಾಖಲಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಬಗ್ಗೆ ವಿಚಾರಣೆ ವೇಳೆ ಅವರು ಬೇಸರ ವ್ಯಕ್ತಪಡಿಸಿದ್ದರು.
ಕಾನೂನು ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಸಂಪರ್ಕಿಸಿದ ನಂತರ ರಾಷ್ಟ್ರಪತಿಗಳು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಸಲಾಗಿದೆ.
ಇನ್ನು ದೆಹಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್ ನ್ಯಾಯಾಧೀಶರ ವರ್ಗಾವಣೆ ಪ್ರಸ್ತಾಪವನ್ನು ಈ ಹಿಂದೆಯೇ ಖಂಡಿಸಿತ್ತು. ಇದೀಗ ಸುಪ್ರೀಂಕೋರ್ಟ್ ಕೊಲಿಜಿಯಂ ನಿಂದ ಅತ್ಯುತ್ತಮ ನ್ಯಾಯಾಧೀಶರೊಬ್ಬರು ವರ್ಗಾವಣೆಗೊಂಡಿದ್ದಾರೆಂದು ಬಾರ್ ಅಸೋಸಿಯೇಷನ್ ಬೇಸರ ವ್ಯಕ್ತಪಡಿಸಿದೆ.
ಪ್ರಿಯಾಂಕಾ ವಾದ್ರಾ ಬೇಸರ:
ನ್ಯಾಯಾಧೀಶ ಮುರಳೀಧರ್ ಅವರನ್ನು ವರ್ಗಾವಣೆ ಮಾಡಿರುವ ನಡೆ ಕುರಿತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಬೇಸರ ವ್ಯಕ್ತಪಡಿಸಿದ್ದಾರೆ. ಮುರಳೀಧರ್ ಅವರ ವರ್ಗಾವಣೆಯಿಂದ ನನಗೆ ಆಘಾತ ಆಗಿಲ್ಲ, ನಿಜಕ್ಕೂ ಇದು ಅವಮಾನಕರ. ಕೋಟ್ಯಂತರ ಭಾರತೀಯರಿಗೆ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಗೌರವ ಇದೆ. ಆದರೆ, ಕೇಂದ್ರ ಸರ್ಕಾರ ಆ ಗೌರವವನ್ನು ಹಾಳುಗೆಡುವಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಅವರು ಟ್ವಿಟ್ ಮಾಡಿದ್ದಾರೆ.