ನವದೆಹಲಿ:ಮೊಟ್ಟೆ ಮತ್ತು ಚಿಕನ್ ಇವೆರಡೂ ಮಾಂಸಹಾರಗಳೆಂಬುದು ಎಲ್ಲರಿಗೂ ತಿಳಿದಿರುವ ಸಾಮಾನ್ಯ ಸಂಗತಿ. ಆದರೆ ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಚಿಕನ್ ಹಾಗೂ ಮೊಟ್ಟೆಯನ್ನ ಸಸ್ಯಹಾರ ಎಂದಿದ್ದಾರೆ.
ಸಂಸತ್ತಿನಲ್ಲಿ ನಡೆದ ಚರ್ಚೆ ವೇಳೆ ಚಿಕನ್ ಅನ್ನು ಆಯುರ್ವೇದಿಕ್ ಚಿಕನ್ ಎಂದು ಕರೆದಿದ್ದಲ್ಲದೇ ಅದು ಸಸ್ಯಾಹಾರಿ ವರ್ಗಕ್ಕೆ ಸೇರಿದೆ ಎಂದು ಘೋಷಿಸಿ ಅದರ ಸೇವನೆಗೆ ಅನುವು ಮಾಡಬೇಕೆಂದು ಆಯುಷ್ ಸಚಿವಾಲಯಕ್ಕೆ ಸದನದಲ್ಲಿ ಮನವಿ ಮಾಡಿದ್ದಾರೆ.
ಮೊಟ್ಟೆ ಮತ್ತು ಚಿಕನ್ ಮಾಂಸಹಾರವಲ್ಲ..! ಇವರ ಈ ಹೇಳಿಕೆಯಿಂದ ಸದಸನದ ಉಳಿದ ಸಂಸದರು ತಬ್ಬಿಬ್ಬಾಗಿದ್ದಾರೆ. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ರಾವತ್ ಆಯುರ್ವೇದಿಕ್ ಚಿಕನ್ ಗೆ ಸಂಬಂಧಿಸಿದಂತೆ ತಮಗಾದ ಅನುಭವವೊಂದನ್ನು ಸದನದಲ್ಲಿ ಬಿಚ್ಚಿಟ್ಟಿದ್ದಾರೆ.
ಒಮ್ಮೆ ಅವರು ನಂದೂರ್ಬಾರ್ ಪ್ರದೇಶದ ಆದಿವಾಸಿಗಳ ಪುಟ್ಟ ಹಾಡಿಯೊಂದಕ್ಕೆ ಭೇಟಿ ನೀಡಿದ್ರಂತೆ ಈ ವೇಳೆ ಅವರಿಗೆ ಊಟ ಬಡಿಸಿದರಂತೆ. ತಟ್ಟೆಯಲ್ಲಿರುವುದು ಏನು ಎಂದು ಅವರು ಆದಿವಾಸಿ ಜನರನ್ನು ಕೇಳಿದಾಗ ಇದು ಆಯುರ್ವೇದಿಕ್ ಚಿಕನ್ ಎಂದರಂತೆ. ಆಯುರ್ವೇದ ಆಹಾರವನ್ನು ತಿನ್ನಿಸಿ ಕೋಳಿಗಳನ್ನು ಬೆಳೆಸಿದ್ದೇವೆ. ಹಾಗಾಗಿ ಇದರ ಸೇವನೆಯಿಂದ ರೋಗಗಳು ನಿವಾರಣೆಯಾಗುತ್ತವೆ ಎಂದು ಹಾಡಿ ಜನರು ತಿಳಿಸಿದ್ದಾರೆ.
ಇನ್ನು ಆಯುರ್ವೇದಿಕ್ ಚಿಕನ್ ಗೆ ಸಂಬಂಧಿಸಿದಂತೆ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾನಿಲಯ ಸಂಶೋಧನೆ ಕೂಡ ನಡೆಸಿದೆ. ಹೀಗಾಗಿ ಪ್ರೋಟಿನ್ ಯುಕ್ತ ಆಹಾರಕ್ಕೆ ಆಯುರ್ವೇದ ಚಿಕನ್ ಅನ್ನು ಬೆಂಬಲಿಸುವ ಅಗತ್ಯವಿದೆ ಎಂದು ಸಂಜಯ್ ರಾವತ್ ಸದನದಲ್ಲಿ ಒತ್ತಿ ಹೇಳಿದ್ದಾರೆ. ಇದಕ್ಕಾಗಿ ಆಯುಷ್ ಸಚಿವಾಲಯ ಅತೀ ಹೆಚ್ಚು ಬಜೆಟ್ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.