ಕರ್ನಾಟಕ

karnataka

By

Published : Dec 11, 2019, 8:53 PM IST

Updated : Dec 11, 2019, 10:19 PM IST

ETV Bharat / bharat

ಪೌರತ್ವ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲೂ ಸಿಕ್ತು ಅಂಗೀಕಾರ, ರಾಷ್ಟ್ರಪತಿ ಸಹಿಯಷ್ಟೇ ಬಾಕಿ!

ಲೋಕಸಭೆಯಲ್ಲಿ ಅನುಮೋದನೆ ಪಡೆದ ಮಹತ್ವದ ಪೌರತ್ವ ತಿದ್ದುಪಡಿ ಮಸೂದೆಗೆ ಇಂದು ಸಂಸತ್ತಿನ ಮೇಲ್ಮನೆ ರಾಜ್ಯಸಭೆಯಲ್ಲೂ ಅಂಗೀಕಾರ ಸಿಕ್ಕಿದೆ. ಮಸೂದೆ ಕಾಯ್ದೆಯಾಗಿ ರೂಪುಗೊಳ್ಳಲು ರಾಷ್ಟ್ರಪತಿ ಸಹಿಯಷ್ಟೇ ಬೇಕಿದೆ.

Citizenship Ammendment Bill 2019
Citizenship Ammendment Bill 2019

ನವದೆಹಲಿ:ಲೋಕಸಭೆಯಲ್ಲಿ 12 ತಾಸುಗಳ ಕಾಲ ಸುದೀರ್ಘ ಚರ್ಚೆಯ ಅನುಮೋದನೆ ಪಡೆದ ಮಹತ್ವದ ಪೌರತ್ವ ತಿದ್ದುಪಡಿ ಮಸೂದೆಗೆ ಇಂದು ಸಂಸತ್ತಿನ ಮೇಲ್ಮನೆ ರಾಜ್ಯಸಭೆಯಲ್ಲಿ 8 ತಾಸುಗಳ ಚರ್ಚೆಯ ಬಳಿಕ ಅಂಗೀಕಾರ ಸಿಕ್ಕಿದೆ.

ಪಾಕಿಸ್ತಾನ, ಬಾಂಗ್ಲಾ ದೇಶ ಹಾಗು ಅಫ್ಘಾನಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತದ ಪೌರತ್ವ ನೀಡುವ ತಿದ್ದುಪಡಿ ಮಸೂದೆಯನ್ನು ಬುಧವಾರ ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್​ ಶಾ ಮಂಡಿಸಿದರು.

ಮಸೂದೆ ಕುರಿತು ಮಧ್ಯಾಹ್ನ 12 ಗಂಟೆಯಿಂದ ಸುದೀರ್ಘ ಚರ್ಚೆ ನಡೆಯಿತು. ಮಸೂದೆ ಸಾಧಕ ಬಾಧಕಗಳ ಬಗ್ಗೆ ಮೇಲ್ಮನೆ ಸದಸ್ಯರು ಸುಮಾರು 8 ಗಂಟೆಗಳ ಕಾಲ ಬಿಸಿಬಿಸಿ ಚರ್ಚೆ ನಡೆಸಿದ ಬಳಿಕ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಮಸೂದೆಯನ್ನು ಮತಕ್ಕೆ ಹಾಕಿದರು. ಮತಕ್ಕೆ ಹಾಕಿದಾಗ 230 ರಾಜ್ಯಸಭೆ ಸದಸ್ಯರ ಪೈಕಿ ಮಸೂದೆ ಪರವಾಗಿ 125, ವಿರುದ್ದವಾಗಿ 105 ಮತಗಳು ಬಿದ್ದವು. ಆದರೆ, ಶಿವಸೇನಾ ಲೋಕಸಭೆಯಲ್ಲಿ ಮಸೂದೆ ಪರವಾಗಿ ಮತ ಹಾಕಿದ್ದು ರಾಜ್ಯಸಭೆಯಲ್ಲಿ ವೋಟಿಂಗ್ ಬಹಿಷ್ಕರಿಸಿ ಸದನದಿಂದ ಹೊರನಡೆಯಿತು.

ಮಸೂದೆ ಮುಸ್ಲೀಂ ವಿರೋಧಿ ಅಲ್ಲ: ಅಮಿತ್‌ ಶಾ ಸ್ಪಷ್ಟನೆ

ರಾಜ್ಯಸಭೆಯಲ್ಲಿ ಅಮಿತ್​​ ಶಾ ಮಸೂದೆ ಮಂಡಿಸಿದಾಗ ಕಾಂಗ್ರೆಸ್, ಟಿಎಂಸಿ ಸೇರಿದಂತೆ ಪ್ರತಿಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿ ಸದನದಲ್ಲಿ ಗದ್ದಲ ಎಬ್ಬಿಸಿದವು. ಇದರ ನಡುವೆಯೇ ವಿಧೇಯಕ ಮಂಡಿಸಿದ ಗೃಹ ಸಚಿವರು, ಮಸೂದೆ ಅಲ್ಪಸಂಖ್ಯಾತ ಮುಸ್ಲೀಮರ ವಿರುದ್ಧವಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

ಐತಿಹಾಸಿಕ ಮಸೂದೆಯಿಂದ ಬಲಿಪಶುಗಳಾಗಿದ್ದ ಕೊಟ್ಯಂತರ ಜನರ ಕನಸು ಇಂದು ನನಸಾಗಿವೆ. ಅವರ ಘನತೆ ಮತ್ತು ಸುರಕ್ಷತೆ ಹೆಚ್ಚಿಸುವ ಸಲುವಾಗಿಯೇ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ಹಕ್ಕುಗಳ ರಕ್ಷಣೆಗೆ ನಿಂತ ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅಮಿತ್ ಶಾ ಹೇಳಿದರು.

ದೇಶದ ಇತಿಹಾಸದಲ್ಲಿ ಕರಾಳ ದಿನ: ಸೋನಿಯಾ ಗಾಂಧಿ

ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ದೇಶದ ಇತಿಹಾಸದಲ್ಲಿ ಇಂದು ಕರಾಳ ದಿನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶಕ್ಕೆ ಐತಿಹಾಸಿಕ ದಿನ: ಪ್ರಧಾನಿ ಮೋದಿ ಬಣ್ಣನೆ

ಪೌರತ್ವ ಮಸೂದೆ ಅಂಗೀಕಾರವಾದ ಈ ದಿನವನ್ನು ಪ್ರಧಾನಿ ಮೋದಿ 'ಐತಿಹಾಸಿಕ ದಿನ' ಎಂದು ಬಣ್ಣಿಸಿದ್ದಾರೆ. ಈ ಮಸೂದೆ ಪರ ಮತ ಹಾಕಿದ ಎಲ್ಲ ಸಂಸದರು ಹಾಗೂ ಸದಸ್ಯರಿಗೆ ಹೃದಯಪೂರ್ವಕ ಧನ್ಯವಾದಗಳು. ಮಸೂದೆಯು ಹಲವು ವರ್ಷಗಳಿಂದ ಕಿರುಕುಳ ಎದುರಿಸುತ್ತಿದ್ದ ಅನೇಕರ ಸಮಸ್ಯೆಯನ್ನು ನಿವಾರಿಸುತ್ತದೆ ಎಂದು ಟ್ವೀಟ್‌ ಮೂಲಕ ಹೇಳಿದ್ರು.

ಜೈಸಲ್ಮೇರ್‌ನಲ್ಲಿ ಪಾಕಿಸ್ತಾನಿ ಹಿಂದೂ ನಿರಾಶ್ರಿತರ ಸಂಭ್ರಮ:

ರಾಜಸ್ತಾನದ ಜೈಸಲ್ಮೇರ್‌ನಲ್ಲಿರುವ ಪಾಕಿಸ್ತಾನಿ ಹಿಂದೂ ನಿರಾಶ್ರಿತರು ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ ಆಗುತ್ತಿದ್ದಂತೆ ಸಂಭ್ರಮಾಚರಿಸಿದರು.

Last Updated : Dec 11, 2019, 10:19 PM IST

ABOUT THE AUTHOR

...view details