ಹೈದರಾಬಾದ್: ಕುಟುಂಬಸ್ಥರು ಎದುರಿಸಿ ರಂಜಾನ್ ಹಬ್ಬದಂದೇ ಯುವತಿ ಪ್ರೇಮ ವಿವಾಹವಾಗಿದ್ದಳು. ಇದರಿಂದ ಬೇಸರಗೊಂಡಿದ್ದ ಯುವತಿ ಕುಟುಂಬ ನವದಂಪತಿ ಮೇಲೆ ಎಲ್ಲರೂ ನೋಡು, ನೋಡುತ್ತಿದ್ದಂತೆ ಚಾಕು ದಾಳಿ ನಡೆಸಿದ್ದಾರೆ.
ಬೇಕರಿ ಬಾಯ್ ಲವ್ಸ್ಟೋರಿಗೆ ಮುಹೂರ್ತವಿಟ್ಟ ಕುಟುಂಬಸ್ಥರು! ಈ ಘಟನೆ ನಡೆದಿದ್ದು ಹೈದರಾಬಾದ್ನಲ್ಲಿ. ಸಂಗಾರೆಡ್ಡಿ ನಿವಾಸಿ ಶೇಖ್ ಇಂತಿಯಾಜ್ (21) ನಾಂಪಲ್ಲಿಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಬೊರಬಂಡದಲ್ಲಿರುವ ಸಂಬಂಧಿ ಸಯ್ಯದ್ ಅಲಿಯ ಮನೆಗೆ ಇಂತಿಯಾಜ್ ಆಗಾಗ ಹೋಗಿ ಬರುತ್ತಿದ್ದ. ಅಲಿ ಹಾಗೂ ಅಲಿಯ ಮಗಳು ಫಾತಿಮಾ (19) ಪರಿಚಯವಾಗಿದ್ದಾಳೆ. ಇಬ್ಬರ ಪರಿಚಯ ಪ್ರೇಮವಾಗಿ ಬದಲಾಗಿದ್ದು, ಈ ವಿಷಯ ಯುವತಿ ಮನೆಯವರಿಗೂ ಗೊತ್ತಾಗಿದೆ. ಆದ್ರೆ ಇವರ ವಿವಾಹಕ್ಕೆ ಫಾತಿಮಾ ಕುಟುಬಂಸ್ಥರು ಒಪ್ಪಿಗೆ ನೀಡಲಿಲ್ಲ. ಹೀಗಾಗಿ ರಂಜಾನ್ ಹಬ್ಬದಂದು ಫಾತಿಮಾ ಮತ್ತು ಇಂತಿಯಾಜ್ ದರ್ಗಾವೊಂದಕ್ಕೆ ತೆರಳಿ ಮದುವೆ ಮಾಡಿಕೊಂಡರು.
ಇನ್ನು ಯುವತಿ ಫಾತಿಮಾ ನಮ್ಮ ಕುಟುಂಬಸ್ಥರಿಂದ ಜೀವ ಬೆದರಿಕೆಯಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಶುಕ್ರವಾರದಂದು ಪೊಲೀಸರು ಎರಡು ಕುಟುಂಬಗಳನ್ನು ಠಾಣೆಗೆ ಕರೆಸಿ ರಾಜಿಗೆ ಒಪ್ಪಿಸಿದ್ದರು. ಬಳಿಕ ಪೊಲೀಸ್ ಠಾಣೆಯಿಂದ ಎರಡು ಕುಟುಂಬಗಳು ವಾಪಾಸ್ ತೆರಳಿದ್ದವು. ಆದ್ರೆ, ಯುವತಿ ಕುಟುಂಬಸ್ಥರು ಇಂತಿಯಾಜ್ ಮೇಲೆ ಚಾಕುವಿನಿಂದ ದಾಳಿ ನಡೆಸಿದರು. ನಡು ರಸ್ತೆಯಲ್ಲೇ ಎಲ್ಲರೂ ನೋಡ ನೋಡುತ್ತಿದಂತೆ ಇಂತಿಯಾಜ್ ಮನಸೋ ಇಚ್ಛೆ ಚಾಕುವಿನಿಂದ ಚುಚ್ಚಿ ಹಲ್ಲೆ ನಡೆಸಿದರು. ಈ ವೇಳೆ ಫಾತಿಮಾಳ ಕೈಬೆರಳು ಸಹಾ ಕಟ್ ಆಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯುವಕನ ಸ್ಥಿತಿ ಚಿಂತಾಜನಕವಾಗಿದೆ.
ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.