ಚಾಮರಾಜನಗರ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಗ್ರಾಮ ಆಡಳಿತಾಧಿಕಾರಿಗಳು 2 ದಿನಗಳ ಧರಣಿ ಆರಂಭಿಸಿದ್ದು, ಸಾರ್ವಜನಿಕರಿಗೆ 48 ಸೇವೆಗಳು ಬಹುತೇಕ ಅಲಭ್ಯ ಆಗಲಿವೆ. ಕರ್ನಾಟಕ ಗ್ರಾಮ ಆಡಳಿತಾಧಿಕರಿಗಳ ಕೇಂದ್ರ ಸಂಘ ಕರೆ ನೀಡಿರುವ ಹಿನ್ನೆಲೆ ಚಾಮರಾಜನಗರ ಜಿಲ್ಲೆಯ ತಾಲೂಕು ಕಚೇರಿಗಳ ಮುಂಭಾಗ VAO ಗಳು ಇಂದು ಧರಣಿ ಆರಂಭಿಸಿದ್ದು, ಶುಕ್ರವಾರ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
ಎರಡು ದಿನ ಧರಣಿ, 4ನೇ ಶನಿವಾರ, ಭಾನುವಾರ ರಜೆ ಸೇರಿದರೆ ಒಟ್ಟು 4 ದಿನಗಳ ಕಾಲ ಕಂದಾಯ ವೃತ್ತಗಳು ಮತ್ತು ಹೋಬಳಿ ನಾಡ ಕಚೇರಿಗಳಲ್ಲಿ ಹಲವು ಸೇವೆಗಳು ಅಲಭ್ಯ ಆಗಲಿವೆ. ಜನನ-ಮರಣ, ಆದಾಯ, ವಾಸಸ್ಥಳ ದೃಢೀಕರಣ ವಂಶವೃಕ್ಷ, ಬೆಳೆ ಸಮೀಕ್ಷೆ, ಬೆಳೆ, ಪ್ರಾಣಿ ಹಾನಿ ಪಂಚನಾಮೆ, ಮನಸ್ವಿನಿ, ವಿಧವಾ ವೇತನ ಸೇರಿ 48ಕ್ಕೂ ಹೆಚ್ಚು ಸೇವೆಗಳು ಜನರಿಗೆ ಸಿಗುವುದಿಲ್ಲ.
ಗ್ರಾಮ ಆಡಳಿತ ಅಧಿಕಾರಿ ಕೆ. ಶ್ರೀಧರ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, "17ಕ್ಕೂ ಅಧಿಕ ಮೊಬೈಲ್ ಆ್ಯಪ್ಗಳಲ್ಲಿ ಕೆಲಸ ಮಾಡುತ್ತೇವೆ. ಇದರ ಜೊತೆಗೆ 48 ಸಾರ್ವಜನಿಕ ಸೇವೆಗಳನ್ನು ನೀಡುವ ಕೆಲಸದ ಒತ್ತಡ ಹೆಚ್ಚಾಗಿದೆ. ತಾಂತ್ರಿಕ ಹುದ್ದೆಗಳಿಗೆ ಕೊಡುವ ವೇತನ ಶ್ರೇಣಿ ಕೊಡಬೇಕು. ವಿಎಒಗಳಿಗೆ ಸುಸಜ್ಜಿತವಾದ ಕಚೇರಿ ಒದಗಿಸಬೇಕು. ಪ್ರಯಾಣ ಭತ್ಯೆ ಹೆಚ್ಚಳ, ಬೆಳೆ ಸಮೀಕ್ಷೆ- ಬೆಳೆ ಹಾನಿ ಸಮೀಕ್ಷೆಯನ್ನು ಕೃಷಿ ಇಲಾಖೆಗೆ ವಹಿಸಬೇಕು" ಎಂದು ಒತ್ತಾಯಿಸಿದರು.
"ಇಂದು ತಾಲೂಕು ಕೇಂದ್ರಗಳಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸುತ್ತಿದ್ದೇವೆ. ನಾಳೆ ಜಿಲ್ಲಾ ಕೇಂದ್ರದಲ್ಲಿ ಧರಣಿ ನಡೆಸಲಿದ್ದು, ಬೇಡಿಕೆ ಈಡೇರುವ ಭರವಸೆ ಸಿಗದಿದ್ದರೆ ಬಳಿಕ ಅಹೋರಾತ್ರಿ ಧರಣಿ ನಡೆಸಲು ಮುಂದಾಗುತ್ತೇವೆ" ಎಂದರು.
ಇದನ್ನೂ ಓದಿ: ಪೌರ ಕಾರ್ಮಿಕ ದಿನಾಚರಣೆಗೆ ಬಹಿಷ್ಕಾರ; ಬೆಳಗಾವಿಯಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ - civic workers protest