ಹುಬ್ಬಳ್ಳಿ: ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ನಗರದ ವ್ಯಕ್ತಿಯೊಬ್ಬನಿಗೆ ನಿರಂತರವಾಗಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹು - ಧಾ ಸಿಸಿಬಿ ಪೊಲೀಸರು ನಟೋರಿಯಸ್ ರೌಡಿ ಬಚ್ಚಾಖಾನ್ ಸೇರಿ ಆತನ ಸಹಚರರು 8 ಜನರನ್ನು ಬಂಧಿಸಿದ್ದಾರೆ.
ಜಮೀನು ವ್ಯವಹಾರ ಸಂಬಂಧ ಖರೀದಿಗಾರರು ಹಾಗೂ ಮಾರಾಟಗಾರರ ನಡುವೆ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾದ ಹಿನ್ನೆಲೆಯಲ್ಲಿ ಬಚ್ಚಾಖಾನ್ ಸಹಚರರ ತಂಡ ಜಮೀನು ಮಾರಾಟಗಾರರಿಗೆ ಕೋಟ್ಯಂತರ ರೂ. ಕೊಡುವಂತೆ ನಿರಂತರವಾಗಿ ಬೆದರಿಕೆ ಕರೆಗಳನ್ನು ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನು ಮಾಲೀಕರು ಸಿಸಿಬಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಪ್ರಕರಣದ ಕುರಿತು ಮಾಹಿತಿ ನೀಡಿದ ಹು - ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, "ಕಳೆದ ತಿಂಗಳು 18 ರಿಂದ 20ರ ನಡುವೆ ಮಂಟೂರ್ ಗ್ರಾಮದ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ಬೆದರಿಕೆ ಹಾಕಲಾಗಿತ್ತು. ಜಮೀನು ಮಾರುವ ಹಾಗೂ ಹಣಕಾಸಿನ ವಿಚಾರದಲ್ಲಿ ಗೊಂದಲ ಇದ್ದ ಆ ವ್ಯಕ್ತಿ ಕೆಲವರನ್ನು ಭೇಟಿ ಮಾಡಿದ್ದಾನೆ. ಆತನ ದೈನಂದಿನ ಚಟುವಟಿಕೆಗಳನ್ನು ಗಮನಿಸಿ, ಎರಡು ನಂಬರ್ಗಳಿಂದ ಬೇರೆ ಬೇರೆ ಸಮಯದಲ್ಲಿ ಹಲವಾರು ಬಾರಿ ಕರೆ ಬಂದಿದೆ. ಈ ಸಮಯದಲ್ಲಿ ಬೆದರಿಕೆ ಹಾಕುವುದರ ಜೊತೆಗೆ ಅವರ ಕುಟುಂಬ ಸದಸ್ಯರ ಚಲನವಲನ, ಯಾವ ವಾಹನ ಬಳಸುತ್ತಿದ್ದಾರೆ ಎನ್ನುವುದರ ಬಗ್ಗೆ ಹೇಳಿರುವುದು ಮಾತ್ರವಲ್ಲದೇ ಒಂದು ಕೋಟಿ ರೂ. ಹಣಕ್ಕೆ ಬೇಡಿಕೆ ಇಡಲಾಗಿತ್ತು." ಎಂದರು.
"ಜೀವಬೆದರಿಕೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಸಿಸಿಬಿ ಕಡೆಯಿಂದ ತನಿಖೆ ಆರಂಭಿಸಲಾಗಿತ್ತು. ಆರೋಪಿಗಳ ಪತ್ತೆಗಾಗಿ 3 ತಂಡ ರಚಿಸಲಾಗಿತ್ತು. ತನಿಖೆಯಲ್ಲಿ ಸಿಕ್ಕ ಎವಿಡೆನ್ಸ್ ಪ್ರಕಾರ ಹುಬ್ಬಳ್ಳಿ-ಧಾರವಾಡದಲ್ಲಿ 7 ಜನರನ್ನು, ಬೆಂಗಳೂರಿನಲ್ಲಿ ಪ್ರಮುಖ ಆರೋಪಿ ಬಚ್ಚಾಖಾನ್ನನ್ನು ಬಂಧಿಸಿ, ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ತಾಂತ್ರಿಕ ಸಾಕ್ಷ್ಯ ಸೇರಿ ಹಲವು ಸಾಕ್ಷಿಗಳ ಆಧಾರದ ಮೇಲೆ ತನಿಖೆ ಮಾಡಲಾಗುತ್ತಿದೆ." ಎಂದು ತಿಳಿಸಿದರು.
"ದೂರು ನೀಡಿದವರು ಸುಮಾರು 70 ವರ್ಷದ ವೃದ್ಧ. ಅವರ ಕುಟುಂಬದ ಸದಸ್ಯರು ಬೇರೆ ಬೇರೆ ಕಡೆ ಇದ್ದು, ಅವರ ಹಿಂದೆ ಅನುಮಾನಾಸ್ಪದವಾಗಿ ತಿರುಗುತ್ತಿದ್ದಾರೆ. ಹೀಗಾಗಿ ದೂರುದಾರರ ಹೆಸರನ್ನು ಬಹಿರಂಗ ಪಡಿಸಲು ಆಗುವುದಿಲ್ಲ. ಒಬ್ಬರು ಎಸಿಪಿ, ಇಬ್ಬರು ಇನ್ಸ್ಪೆಕ್ಟರ್ ಅವರನ್ನೊಳಗೊಂಡ ತಂಡ ರಚಿಸಿ ಆರೋಪಿಗಳನ್ನು ಬಂಧಿಸಿದ್ದೇವೆ. ಆರೋಪಿ ಬಚ್ಚಾಖಾನ್ ಆಗಸ್ಟ್ 2ರಿಂದ ಪೇರೋಲ್ನಲ್ಲಿ ಹೊರಗಡೆ ಇದ್ದ ಎಂಬುದಾಗಿ ಗೊತ್ತಾಗಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಫ್ರುಟ್ ಇರ್ಫಾನ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಬೆಂಗಳೂರಿನ ಒಂದು ಕೊಲೆ ಪ್ರಕರಣ ಈತನ ಮೇಲಿದೆ. ಇನ್ನು ಹಲವರಿಗೆ ಬೆದರಿಕೆ ಕರೆ ಹೋಗಿದೆ ಎನ್ನುವುದು ವಿಚಾರಣೆಯಲ್ಲಿ ತಿಳಿದಿದೆ" ಎಂದು ಕಮಿಷನರ್ ಹೇಳಿದರು.
ಇದನ್ನೂ ಓದಿ: ಕೇರಳದಲ್ಲಿ ಮಕ್ಕಳ ಅಶ್ಲೀಲ ಚಿತ್ರ ಜಾಲ ಪತ್ತೆ: 37 ಕೇಸ್ ದಾಖಲು, 6 ಆರೋಪಿಗಳ ಬಂಧನ - child pornography