ಧಾರವಾಡ: "ಸದ್ಗುರು ಅವರು ಶಿವರಾತ್ರಿಯಂದು ದೇಶದ ರಾಜಕೀಯ ಕುರಿತು ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ರಾಜಕೀಯ ಮಾತನಾಡುವುದಾದರೆ ಬಹಿರಂಗವಾಗಿ ಚರ್ಚಿಸಲಿ. ಶಿವರಾತ್ರಿಯಂದು ರಾಜಕೀಯ ವಿಚಾರ ಚರ್ಚಿಸಿದ್ದು ಎಷ್ಟು ಸರಿ, ಎಷ್ಟು ತಪ್ಪು ಅನ್ನೋದನ್ನು ಅವರೇ ತಿಳಿದುಕೊಳ್ಳಬೇಕು" ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, "ಸದ್ಗುರುಗಳಿಗೆ ಅವರದ್ದೇ ಆದ ಅಭಿಮಾನಿಗಳಿದ್ದಾರೆ. ನಾನೂ ಕೂಡ ಅವರ ಅಭಿಮಾನಿ. ಅಭಿಮಾನಿಗಳಿದ್ದಾಗ ಅವರು ಮಾತನಾಡುತ್ತಾರೆ. ಶಿವರಾತ್ರಿ ಹಬ್ಬದಲ್ಲಿ ರಾಜಕೀಯ ವಿಚಾರ ಮಾತನಾಡಬಾರದಿತ್ತು. ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದ್ದು ಸರಿಯಲ್ಲ ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ" ಎಂದರು.
ಗೃಹ ಲಕ್ಷ್ಮಿ ಹಣ ವಿಳಂಬದ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಟೀಕೆಗೆ, "ರಾಜ್ಯ ಸರ್ಕಾರ ದಿವಾಳಿ ಆಗಿದೆ ಅಂತ ಹೇಳುವ ಜೋಶಿ ಅವರು ಮೊದಲು ಕೇಂದ್ರ ಸರ್ಕಾರ ಏನಾಗಿದೆ ಎಂಬುದನ್ನು ಹೇಳಬೇಕು. ಅವರು ಈ ರಾಜ್ಯದವರಿದ್ದಾರೆ. ಪ್ರತೀಸಾರಿ ರಾಜ್ಯ ಸರ್ಕಾರಕ್ಕೆ ಆಟ್ಯಾಕ್ ಮಾಡಿ ಹೋಗ್ತಾರೆ. ಕೇಂದ್ರ ಸರ್ಕಾರದಿಂದ ಇಷ್ಟು ಬಜೆಟ್ ಮಂಡನೆಯಾಗಿದ್ದು, ಕರ್ನಾಟಕಕ್ಕೆ ಧಾರವಾಡ ಜಿಲ್ಲೆಗೆ ಏನೂ ಅನುದಾನ ತಂದಿದ್ದಾರೆ ಅನ್ನೋದನ್ನು ಚರ್ಚೆ ಮಾಡಲಿ. ಎರಡು ತಿಂಗಳು ದುಡ್ಡು ಹಾಕಿಲ್ಲ ಅಂದ್ರೆ ದಿವಾಳಿ ಆಗಿದೆ ಅಂತ ಹೇಳುವ ಅವರು, ಕೇಂದ್ರ ಸರ್ಕಾರದ ಬಗ್ಗೆ ಚರ್ಚೆ ಮಾಡ್ತಾರಾ" ಪ್ರಶ್ನಿಸಿದರು.
"ದೇಶದಲ್ಲಿ ಯಾರು ಸುಳ್ಳು ಹೇಳುತ್ತಿದ್ದಾರೆ, ಯಾರು ದಪ್ಪ ಚರ್ಮದವರು ಅನ್ನೋದು ಜನರಿಗೆ ಗೊತ್ತಾಗುತ್ತಿದೆ. ಕಪ್ಪು ಹಣ ತರಲಾಗುತ್ತದೆ, ದೇಶದ ಪ್ರತಿಯೊಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಗೆ 15 ಲಕ್ಷ ಹಣ ಹಾಕಲಾಗುತ್ತದೆ, 100 ಬುಲೆಟ್ ಟ್ರೈನ್ ಬರಲಿವೆ ಅಂತ ನೂರಾರು ಸುಳ್ಳು ಭರವಸೆಗಳನ್ನು ನೀಡಿದ್ದರು. ಕೇವಲ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡುವುದು ಸರಿಯಲ್ಲ. ಕೇಂದ್ರದಲ್ಲಿ ಮೋದಿ ಸರ್ಕಾರ ಕೊಟ್ಟ ಭರವಸೆಗಳ ಬಗ್ಗೆ ಜೋಶಿ ಮಾತನಾಡಲಿ" ಎಂದು ಲಾಡ್ ಸವಾಲು ಹಾಕಿದರು.
ರಾಜ್ಯ ಬಜೆಟ್ ಹಾಗೂ ಅನುದಾನದ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲಾಡ್, "ಹಲವು ಇಲಾಖೆಗಳಿಗೆ ಅನುದಾನ ಕೇಳಿದ್ದೇನೆ. ಅದರಲ್ಲೂ ಧಾರವಾಡ ಜಿಲ್ಲೆಗೆ ಹೆಚ್ಚು ಅನುದಾನ ನೀಡುವಂತೆ ಕೇಳಿದ್ದೇನೆ. ಕಾರ್ಮಿಕ ಇಲಾಖೆಗೆ ಹೆಚ್ಚು ಹಣ ಬಿಡುಗಡೆ ಮಾಡಲು ಮನವಿ ಮಾಡಿಕೊಂಡಿದ್ದೇನೆ" ಎಂದರು.
ನಾನೊಬ್ಬ ಲಕ್ಕಿ ರಾಸ್ಕಲ್: "ನನಗೀನ 50 ವರ್ಷ. ನಾನೊಬ್ಬ ಲಕ್ಕಿ ರಾಸ್ಕಲ್. ಈಗಾಗಲೇ ಸಾಕಷ್ಟು ಕಾಲ ರಾಜಕೀಯ ಜೀವನ ಕಳೆದಿದ್ದೇನೆ. ಸಣ್ಣ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡರೂ ಜನರ ಆಶೀರ್ವಾದದಿಂದ ಈ ಮಟ್ಟಕ್ಕೆ ಬೆಳೆದೆ" ಎಂದು ಹೇಳಿದರು.
ಇದನ್ನೂ ಓದಿ: ರಾಜ್ಯದಲ್ಲಿ ಸಾಯುವುದಕ್ಕೂ ದುಡ್ಡು ಕೊಡುವ ಪರಿಸ್ಥಿತಿ ನಿರ್ಮಾಣ: ಪ್ರಲ್ಹಾದ್ ಜೋಶಿ - JOSHI SLAMS CONGRESS GOVT