ಬೆಂಗಳೂರು : ರಾಗಿ, ಜೋಳಗಳಂತೆ ಇತರ ಸಿರಿಧಾನ್ಯಗಳನ್ನೂ (ತೃಣ ಧಾನ್ಯಗಳು) ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸೇರ್ಪಡೆಗೊಳಿಸುವುದು ಸೇರಿದಂತೆ ರೈತರಿಗೆ ವಿವಿಧ ರೀತಿಯಲ್ಲಿ ನೆರವು ಒದಗಿಸಲು ಕೃಷಿ ಕ್ಷೇತ್ರಕ್ಕೆ ಇನ್ನಷ್ಟು ಹೆಚ್ಚಿನ ಅನುದಾನ ಮತ್ತು ಆದ್ಯತೆ ನೀಡುವಂತೆ ರಾಜ್ಯ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶಿವರಾಜ್ಸಿಂಗ್ ಚೌಹಾಣ್ ದೇಶದ ಎಲ್ಲ ರಾಜ್ಯಗಳ ಕೃಷಿ ಸಚಿವರೊಂದಿಗೆ ವಿಡಿಯೋ ಸಂವಾದ ನಡೆಸಿದ ಸಂದರ್ಭದಲ್ಲಿ ಅವರು ವಿಧಾನಸೌಧದಿಂದ ಮಾತನಾಡಿ, ಕರ್ನಾಟಕದ ಪರವಾಗಿ ಹಲವು ಬೇಡಿಕೆಗಳನ್ನು ಮುಂದಿಟ್ಟರು.
![Minister-n-chaluvarayaswamy](https://etvbharatimages.akamaized.net/etvbharat/prod-images/04-01-2025/kn-bng-02-minister-chaluvarayaswamy-talk-script-7208083_04012025160727_0401f_1735987047_619.jpg)
ರಾಜ್ಯದಲ್ಲಿ ಸರ್ಕಾರಿ ಬೀಜೋತ್ಪಾದನಾ ಕೇಂದ್ರಗಳು ಮತ್ತು ಗುಣಮಟ್ಟ ನಿಯಂತ್ರಣ ಪ್ರಯೋಗಾಲಯಗಳನ್ನು ಬಲಪಡಿಸಲು ಹೊಸ ಯೋಜನೆಗಳನ್ನು ರೂಪಿಸಿ ನೆರವು ನೀಡುವಂತೆ ಸಚಿವರು ಮನವಿ ಮಾಡಿದರು. ಜೋಳ(ಮಾಲ್ದಂಡಿ)ಕ್ಕೆ ಹಿಂಗಾರು ಹಂಗಾಮಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡುವಂತೆಯೂ ಸಹ ಅವರು ಕೇಂದ್ರ ಸಚಿವರಲ್ಲಿ ಕೋರಿದರು.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರಾಜ್ಯದ ಕೃಷಿ ಹಾಗೂ ವಿವಿಧ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳಿಗೂ ಹೆಚ್ಚಿನ ಅನುದಾನ ಒದಗಿಸಬೇಕು. ಇದೇ ವೇಳೆ, ಸಿರಿಧಾನ್ಯಗಳ ಮೌಲ್ಯವರ್ಧಿತ ಉತ್ಪನ್ನಗಳ ಮೇಲಿನ ಜಿಎಸ್ಟಿಯನ್ನು ಶೇಕಡಾ 18 ರಿಂದ 5ಕ್ಕೆ ಇಳಿಸುವಂತೆ ಅವರು ಮನವಿ ಮಾಡಿದರು.
![Shivraj Singh Chouhan held a video conference with all the Agriculture Ministers of the country](https://etvbharatimages.akamaized.net/etvbharat/prod-images/04-01-2025/kn-bng-02-minister-chaluvarayaswamy-talk-script-7208083_04012025160727_0401f_1735987047_485.jpg)
ಇನ್ಸ್ಟಿಟ್ಯೂಟ್ ಆಫ್ ಪೆಸ್ಟಿಸೈಡ್ ಫಾರ್ಮುಲೇಶನ್ ಟೆಕ್ನಾಲಜಿ: ಬೆಂಗಳೂರು ಜಿಲ್ಲೆಯ ಆನೇಕಲ್ನಲ್ಲಿರುವ ಸರ್ಕಾರಿ ಭೂಮಿಯಲ್ಲಿ ಇನ್ಸ್ಟಿಟ್ಯೂಟ್ ಆಫ್ ಪೆಸ್ಟಿಸೈಡ್ ಫಾರ್ಮುಲೇಶನ್ ಟೆಕ್ನಾಲಜಿಯ ಸ್ಥಾಪನೆಗೂ ಧನಸಹಾಯ ಒದಗಿಸಬೇಕು. ಕೃಷಿ ವಿಶ್ವವಿದ್ಯಾಲಯಗಳ ಕ್ಷೇತ್ರ ಬೆಳೆಗಳ ವಿಶೇಷವಾಗಿ ಎಣ್ಣೆಕಾಳು ಬೆಳೆಗಳ ತಳಿವರ್ಧನೆಗೆ ಕೇಂದ್ರೀಯ ಕೃಷಿ ಸಂಶೋಧನೆ ಹಾಗೂ ವಿಸ್ತರಣೆ ಇಲಾಖೆ (DARE) ಮೂಲಕ ಹೆಚ್ಚಿನ ಹಣವನ್ನು ಮಂಜೂರು ಮಾಡಲು ಕೇಂದ್ರ ಸಚಿವರಿಗೆ ವಿನಂತಿಸಿದರು.
ರಾಜ್ಯದಲ್ಲಿ ಸವಳು ಮತ್ತು ಜವಳು ಮಣ್ಣು ಸುಧಾರಣೆಗೆ ಹೊಸ ಯೋಜನೆಯನ್ನು ಪ್ರಾರಂಭಿಸಬಹುದಾಗಿದೆ ಎಂದು ಕೇಂದ್ರ ಸಚಿವರ ಗಮನ ಸೆಳೆದ ಎನ್. ಚಲುವರಾಯಸ್ವಾಮಿ, ರೈತರ ಹೊಲಗಳಲ್ಲಿ ಕೃಷಿ ಅರಣ್ಯೀಕರಣ ಪ್ರದೇಶ ವಿಸ್ತರಣೆಗೆ ಧನಸಹಾಯ ಹೆಚ್ಚಿಸಲು ಕೋರಿದರು.
ಕರ್ನಾಟಕದಲ್ಲಿ ಕ್ಲಸ್ಟರ್ ಆಧಾರದ ಮೇಲೆ ರೈತ ಉತ್ಪಾದಕ ಸಂಸ್ಥೆಗಳು ಮತ್ತು ಅಗ್ರಿ - ಟೆಕ್ ಸ್ಟಾರ್ಟ್ಅಪ್ಗಳ ಮೂಲಕ ಕೋಲ್ಡ್ ಚೈನ್ ಅಭಿವೃದ್ಧಿ ಮಾಡಿ ಸಂಸ್ಕರಣೆ, ಪ್ಯಾಕೇಜಿಂಗ್, ಬ್ರ್ಯಾಂಡಿಂಗ್, ಮಾರ್ಕೆಟಿಂಗ್, ರಫ್ತು ಮುಂತಾದ ತಂತ್ರಜ್ಞಾನಗಳನ್ನು ಉತ್ತೇಜಿಸಲು ಯೋಜನೆಯನ್ನು ಪ್ರಾರಂಭಿಸುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಕೇಂದ್ರ ಕೃಷಿ ಸಚಿವರಾದ ಶಿವರಾಜ್ಸಿಂಗ್ ಚೌಹಾಣ್ , ಕೃಷಿ ರಾಜ್ಯ ಸಚಿವರು ಹಾಗೂ ವಿವಿಧ ರಾಜ್ಯಗಳ ಕೃಷಿ ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಇದೇ ತಿಂಗಳು ಬೆಂಗಳೂರಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ಸಾವಯವ, ಸಿರಿಧಾನ್ಯ ವಾಣಿಜ್ಯ ಮೇಳ-2025ಕ್ಕೆ ಆಗಮಿಸುವಂತೆ ಚಲುವರಾಯಸ್ವಾಮಿ ಆಹ್ವಾನಿಸಿದರು.
ಇದನ್ನೂ ಓದಿ : ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ: ಸಚಿವ ಶಿವಾನಂದ ಪಾಟೀಲ್ - MINIMUM SUPPORT PRIZE