ದಾವಣಗೆರೆ: ಬೆಣ್ಣೆನಗರಿಯಲ್ಲಿ ಸೂರ್ಯನ ತಾಪ ಹೆಚ್ಚಾಗತೊಡಗಿದೆ. ಈಗಲೇ ಬಿಸಿಲ ಝಳ ತಡೆಯಲಾಗದೇ ಜಿಲ್ಲೆಯ ಜನತೆ ಕಲ್ಲಂಗಡಿ ಹಣ್ಣಿನ ಹಿಂದೆ ಬಿದ್ದಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಕಲ್ಲಂಗಡಿಗೆ ಡಿಮ್ಯಾಂಡ್ ಶುರುವಾಗಿದೆ. ಆದರೆ, ಸ್ಥಳೀಯ ಕಲ್ಲಂಗಡಿಗಳು ಈ ಬಾರಿ ಫಸಲು ಬಾರದ ಕಾರಣ ತಮಿಳುನಾಡಿನ ನಾಮಧಾರಿ-295, ಸುಪ್ರೀತ್, ಕಿರಣ್ ತಳಿಯ ಕಲ್ಲಂಗಡಿ ಹಣ್ಣುಗಳ ದರ್ಬಾರ್ ಆರಂಭವಾಗಿದೆ.
ಬಿಸಿಲಿನ ಹೊಡತಕ್ಕೆ ಕಲ್ಲಂಗಡಿ ಹಣ್ಣಿನ ದರ ಕಳೆದ ವರ್ಷಕ್ಕಿಂತ ಕೊಂಚ ಏರಿಕೆ ಕಂಡಿದೆ. ನಿನ್ನೆ ಶಿವರಾತ್ರಿ ಹಬ್ಬದ ಹಿನ್ನೆಲೆ ಜನ ಖರೀದಿಗೆ ಮುಗಿ ಬಿದ್ದಿದ್ದರು.
ಬೇಡಿಕೆ ಜತೆಗೆ ಬೆಲೆ ಅಧಿಕ: ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಕಲ್ಲಂಗಡಿ ಬೆಳೆದಿದ್ದರಿಂದ ಅಂದುಕೊಂಡಷ್ಟು ಮಾರುಕಟ್ಟೆಗೆ ಪೂರೈಕೆಯಾಗಿಲ್ಲ. ಅಲ್ಲದೇ ಸ್ಥಳೀಯ ಹಣ್ಣು ಮಾರುಕಟ್ಟೆಗೆ ಬರುತ್ತಿದ್ದರೂ ಆವಕದ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿಲ್ಲ. ಇದರಿಂದ ವಾಟರ್ ಮೆಲನ್ಗೆ ಬೇಡಿಕೆ ಜತೆಗೆ ಬೆಲೆಯೂ ಏರಿದೆ. ನಿನ್ನೆ ಶಿವರಾತ್ರಿ ಹಿನ್ನೆಲೆ ಒಂದು ವಾರದ ಹಿಂದೆಯೇ ಜಿಲ್ಲೆಗೆ ಸ್ಥಳೀಯ ಕಲ್ಲಂಗಡಿ ಹಣ್ಣಿನ ಬದಲಿಗೆ ತಮಿಳುನಾಡಿನ ಕಲ್ಲಂಗಡಿ ಮಾರುಕಟ್ಟೆಗೆ ಕಾಲಿಟ್ಟಿದೆ.

ಮಾರಾಟಗಾರ ರಫೀಕ್ ಅಭಿಪ್ರಾಯ: "ಬಿಸಿಲು ಹೆಚ್ಚಿರುವ ಕಾರಣ ಫಸಲು ಹೊರಗೆ ಹೋಗುತ್ತಿದೆ. ಆದ್ದರಿಂದ ದರ ಏರಿಕೆ ಆಗಿದೆ. ಕಳೆದ ಬಾರಿಗಿಂತ ಈ ಬಾರಿ 5-6 ರೂಪಾಯಿ ಏರಿಕೆ ಆಗಿದೆ. ಆದರೂ ನಾವು ಹಣ್ಣನ್ನು ಲೆಕ್ಕಕ್ಕೆ ಮಾರಾಟ ಮಾಡುತ್ತಿದ್ದೇವೆ. 150, 200, 300 ರೂಪಾಯಿ ಹೀಗೆ ಒಂದು ಹಣ್ಣಿನಂತೆ ಮಾರಾಟ ಮಾಡಲಾಗುತ್ತಿದೆ. ಈ ಹಣ್ಣು ತಮಿಳುನಾಡಿನ ದಿಂಡಿವರಂ, ಸಿಂಜೀ, ಕೃಷ್ಣಗಿರಿಯಿಂದ ದಾವಣಗೆರೆಗೆ ಆಮದು ಮಾಡಿಕೊಳ್ಳಲಾಗಿದೆ. ನಾಮಧಾರಿ 295, ಸುಪ್ರೀತ್, ಕಿರಣ್, ತಳಿಯ ಹಣ್ಣು ಬಂದಿದ್ದು, ಜನ ಖರೀದಿ ಮಾಡುತ್ತಿದ್ದಾರೆ".

"ದಾವಣಗೆರೆಯಲ್ಲಿ ಐದಾರು ಕಡೆ ಮಾತ್ರ ಕಲ್ಲಂಗಡಿ ಬೆಳೆದಿದ್ದರಿಂದ ಬೇರೆಡೆಯಿಂದ ಆವಕ ಶುರುವಾಗಿದೆ. ವ್ಯಾಪಾರ ಚೆನ್ನಾಗಿದೆ, ಬಿಸಿಲು ಹೆಚ್ಚಿರುವ ಕಾರಣ ದರ ಹೆಚ್ಚಿದೆ. ಲೋಕಲ್ ಕಲ್ಲಂಗಡಿ ಎಲ್ಲಿಯೂ ಬಂದಿಲ್ಲ. ತಮಿಳುನಾಡಿನಿಂದ ಟ್ರಾನ್ಸ್ಪೋರ್ಟ್ ಖರ್ಚು ಹೆಚ್ಚು. ಆದರೆ ಹಣ್ಣು ಮಾತ್ರ ಚೆನ್ನಾಗಿದೆ. ತುಂಬ ಜನ ಬರುತ್ತಿದ್ದಾರೆ ಖರೀದಿ ಮಾಡುತ್ತಿದ್ದಾರೆ. ಜತೆಗೆ ಫರಂಗಿ ಹಣ್ಣು(ಅನನಾಸ್) ಇದ್ದೂ, ರಾಣಿ ಪೈನಾಪಲ್ ಕೆ.ಜಿ.ಗೆ-80, ಖರ್ಬುಜಾ ಕೆ.ಜಿ.ಗೆ -50, ಪಪ್ಪಾಯಿ ಕೆ.ಜಿ.ಗೆ -50 ದರಕ್ಕೆ ಮಾರಾಟ ಮಾಡುತ್ತಿದ್ದೇವೆ" ಎಂದು ರಫೀಕ್ ಮಾಹಿತಿ ನೀಡಿದರು.

ಗ್ರಾಹಕರು ಹೇಳುವುದೇನು: ಈಟಿವಿ ಭಾರತ್ಗೆ ಗ್ರಾಹಕ ರೇವಣಸಿದ್ದಪ್ಪ ಅವರು ಪ್ರತಿಕ್ರಿಯಿಸಿ, "ಅತ್ಯಂತ ಹೆಚ್ಚು ಗುಣಮಟ್ಟದ ಹಣ್ಣು ಮಾರಾಟ ಮಾಡುತ್ತಿದ್ದಾರೆ. ತಮಿಳುನಾಡಿನಿಂದ ಬರುತ್ತಿದ್ದು, ಚೆನ್ನಾಗಿಯೂ ಇದೆ, ರುಚಿಯೂ ಇದೆ. ಪ್ರಸ್ತುತ ವಾತಾವರಣಕ್ಕೆ ದರ ಹೆಚ್ಚಿದೆ. ಸಾಮಾನ್ಯ ದಿನಗಳಲ್ಲಿ ದರ ಕಡಿಮೆ ಇರುತ್ತದೆ" ಎಂದು ಗ್ರಾಹಕ ರೇವಣಸಿದ್ದಪ್ಪ ತಮ್ಮ ಅನಿಸಿಕೆ ಹಂಚಿಕೊಂಡರು.
ಇದನ್ನೂ ಓದಿ: ದಾವಣಗೆರೆ: ಮಹಾಶಿವರಾತ್ರಿ ದಿನವೇ ತುಂಗಭದ್ರಾ ನದಿಯಲ್ಲಿ ಪುರಾತನ ಶಿವಲಿಂಗ ಪತ್ತೆ!
ಇದನ್ನೂ ಓದಿ: ಸಾಲದಿಂದ ಮುಕ್ತಗೊಳಿಸಿದ ಕ್ಯಾಬೇಜ್ : ಮನೆ, ಬೈಕ್, ಲಗ್ನ ಪತ್ರಿಕೆ ಮೇಲೆಯೂ "ಎಲ್ಲ ಕ್ಯಾಬೇಜ್ ಪುಣ್ಯದ ಫಲ" ಎಂಬ ತಲೆ ಬರಹ!