ಬೆಂಗಳೂರು : ವೈವಾಹಿಕ ಕಲಹಗಳು ಹಾಗೂ ವಿಚ್ಛೇದನದಂತಹ ಪ್ರಕರಣಗಳಲ್ಲಿ ಮಕ್ಕಳನ್ನು ವಶಕ್ಕೆ ಪಡೆದುಕೊಳ್ಳುವ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳ ನಿರ್ವಹಣೆಗೆ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ರೂಪಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಮುಂದಿನ ಎರಡ್ಮೂರು ತಿಂಗಳಲ್ಲಿ ಹೊರಬೀಳಲಿದೆ ಎಂದು ಕೇಂದ್ರ ಸರ್ಕಾರ ಹೈಕೋಟ್ರ್ಗೆ ಮಾಹಿತಿ ನೀಡಿದೆ.
ಮಕ್ಕಳನ್ನು ವಶಕ್ಕೆ ನೀಡುವುದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸ್ವಹಿತಾಸಕ್ತ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ವಿಭಾಗೀಯ ಪೀಠಕ್ಕೆ ಕೇಂದ್ರ ಸರ್ಕಾರದ ಪರ ವಕೀಲರು ಮಾಹಿತಿ ನೀಡಿದರು.
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲರಾದ ಸಾಧನಾ ದೇಸಾಯಿ, ಮಕ್ಕಳನ್ನು ವಶಕ್ಕೆ ಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಕಾರ್ಯರೂಪಕ್ಕೆ ತರುವ ಸಂಬಂಧ ಕೇಂದ್ರ ಮುಂದಾಗಿದೆ. ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಭಿಪ್ರಾಯಗಳನ್ನು ಕೋರಲಾಗುತ್ತಿದೆ. ಈ ಕಾರ್ಯ ಪೂರ್ಣಗೊಳ್ಳಲು 2 ರಿಂದ 3 ತಿಂಗಳಲ್ಲಿ ಮಾರ್ಗಸೂಚಿಗಳನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಪೀಠಕ್ಕೆ ತಿಳಿಸಿದರು.
ಈ ಅಂಶ ದಾಖಲಿಸಿಕೊಂಡ ಪೀಠ, ಕೇಂದ್ರ ಸರ್ಕಾರದ ನಿಲುವಿಗೆ ಸಂಬಂಧಿಸಿದಂತೆ ಅಗತ್ಯ ಅಂಶಗಳು ಹಾಗೂ ಕಾಲಾವಧಿಯಲ್ಲಿ ಪೂರ್ಣಗೊಳ್ಳುವ ಸಂಬಂಧ ಪ್ರಮಾಣಪತ್ರ ಸಲ್ಲಿಸುವಂತೆ ಸೂಚನೆ ನೀಡಿ ವಿಚಾರಣೆಯನ್ನು ಮಾರ್ಚ್ 19ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಪ್ರಕರಣ ಸಂಬಂಧ ಅಮೈಕಸ್ ಕ್ಯೂರಿ (ನ್ಯಾಯಾಲಯಕ್ಕೆ ನೆರವು ನೀಡುವ ವಕೀಲರು) ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ, ಈ ವಿಚಾರದಲ್ಲಿ ಸಾಕಷ್ಟು ಕಾನೂನುಗಳು, ನಿಯಮಗಳಿದ್ದರೂ, ಮನೋವಿಜ್ಞಾನ ಕ್ಷೇತ್ರದ ತಜ್ಞರ ಅಭಿಪ್ರಾಯಗಳು ಮತ್ತು ನೆರವಿನ ಕೊರತೆಯಿದೆ. ಹೀಗಾಗಿ, ಇಂತಹ ಪ್ರಕರಣಗಳಲ್ಲಿ ಮಾರ್ಗದರ್ಶನ ಮಾಡಲು ಮಾನಸಿಕ ತಜ್ಞರ ಅಭಿಪ್ರಾಯ ಅತ್ಯಂತ ಮುಖ್ಯವಾಗಿರಲಿದೆ ಎಂದು ಪೀಠಕ್ಕೆ ವಿವರಿಸಿದರು.
ಅರ್ಜಿಯಲ್ಲೇನಿತ್ತು ? ಯುವ ಸಮೂಹಲ್ಲಿ ಇತ್ತೀಚೆಗಿನ ಸಂಘರ್ಷಗಳು ಮಿತಿ ಮೀರುತ್ತಿದ್ದು, ಈ ಸಂಘರ್ಷಗಳನ್ನು ಪರಿಹರಿಸುವ ಸಾಂಪ್ರದಾಯಿಕ ವಿಧಾನಗಳು ವಿಫಲವಾಗುತ್ತಿವೆ. ಸಣ್ಣ ಕುಟುಂಬಗಳಲ್ಲಿ ಈ ರೀತಿಯ ಘಟನೆಗಳಿಂದ ಮಕ್ಕಳು ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದ್ದಾರೆ. ಮಕ್ಕಳ ಭವಿಷ್ಯಕ್ಕಿಂತ ದಂಪತಿಯ ಹಠಮಾರಿ ಮನೋಭಾವಗಳು ಹೆಚ್ಚಾಗುತ್ತಿವೆ. ಹೀಗಾಗಿ ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಮತ್ತು ಸ್ಥಿರವಾದ ವಾತಾವರಣ ಅತ್ಯಂತ ಮುಖ್ಯವಾಗಿರಲಿದೆ. ಹೀಗಾಗಿ, ಕೌಟುಂಬಿಕ ವ್ಯಾಜ್ಯಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಕಸ್ಟಡಿಗೆ ಪಡೆಯುವ ವಿಚಾರ ಹಾಗೂ ಇನ್ನಿತರೆ ವ್ಯಾಜ್ಯಗಳಲ್ಲಿ ಮಕ್ಕಳು ಎದುರಿಸಬಹುದಾದ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ನಿರ್ದೇಶನಗಳನ್ನು ರೂಪಿಸುವ ಅಗತ್ಯವಿದೆ.
ಕೌಟುಂಬಿಕ ವ್ಯಾಜ್ಯಗಳಲ್ಲಿ ಮಗುವಿನ ಪಾಲನೆಗೆ ಸಂಬಂಧಿಸಿದಂತೆ ಎದುರಾಗುವ ಸನ್ನಿವೇಶಗಳಲ್ಲಿ ಮಗು ಹೆಚ್ಚಿನ ತೊಂದರೆಗೆ ಸಿಲುಕುವ ಸಂದರ್ಭಗಳಿವೆ. ವಿಚ್ಛೇದನ ಪ್ರಕರಣಗಳಲ್ಲಿ ಪೋಷಕರು ಮಕ್ಕಳ ಪಾಲನೆ ಮತ್ತು ತಮ್ಮ ವಶಕ್ಕೆ ಪಡೆದುಕೊಳ್ಳುವ ವಿಷಯದಲ್ಲಿ ಸಾಕಷ್ಟು ಕಾನೂನು ಹೋರಾಟ ನಡೆಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಕೋರ್ಟ್ ಯಾವುದೇ ಆದೇಶ ಹೊರಡಿಸುವ ಮುನ್ನ ಮಗುವಿನ ಮನಸ್ಸನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವ ಅಗತ್ಯವಿರುತ್ತದೆ.
ತಂದೆ–ತಾಯಿಯ ವರ್ತನೆಯಿಂದಾಗಿ ಕಾನೂನು ಸಮರ, ಇವರ ಮಧ್ಯೆ ಅಜ್ಜ–ಅಜ್ಜಿಯರ ಭಾವನಾತ್ಮಕ ಅಂಶಗಳು ಮಗುವಿನ ಮನಸ್ಸಿನ ಮೇಲೆ ಗಾಢ ಪರಿಣಾಮ ಉಂಟು ಮಾಡುತ್ತವೆ. ಇವುಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಮತ್ತು ಎರಡೂ ಪಕ್ಷಗಾರರ ಜೊತೆ ಮಗು ಮಧುರ ಸಂಬಂಧವನ್ನು ಹೊಂದಲು ಆಧುನಿಕ ತಂತ್ರಜ್ಞಾನ ಮತ್ತು ಮಾಧ್ಯಮಗಳನ್ನು ಬಳಸಿಕೊಂಡು ಮುಂದುವರಿಯುವ ಅಗತ್ಯವಿದೆ. ಈ ಸಂಬಂಧ ವೃತ್ತಿಪರರ ಸಹಾಯದೊಂದಿಗೆ ಮಾರ್ಗಸೂಚಿಗಳನ್ನು ರಚಿಸುವುದು ಅವಶ್ಯವಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.