ವಿಜಯನಗರ : ಹಂಪಿ ಉತ್ಸವ-2025 ಆಚರಣೆಯ ಅಂತಿಮ ಸಿದ್ಧತೆಗಳು ಪೂರ್ಣಗೊಂಡಿದ್ದು, ಗಾಯಿತ್ರಿ ಪೀಠದ ಮೈದಾನದಲ್ಲಿ ನಿರ್ಮಿಸಲಾಗಿರುವ ಪ್ರಧಾನ ವೇದಿಕೆ ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪದ ವೈಭವವನ್ನು ಬಿಂಬಿಸುತ್ತಿದೆ.
ಹಂಪಿ ಪ್ರಮುಖ ಸ್ಮಾರಕಗಳ ಸಮ್ಮಿಶ್ರಣದಲ್ಲಿ ವೇದಿಕೆ ಮೂಡಿಬಂದಿದೆ. ಹೊಯ್ಸಳ, ಚೋಳ ಸೇರಿದಂತೆ ಹಲವು ಮಹೋನ್ನತ ಸಾಮ್ರಾಜ್ಯಗಳ ವಾಸ್ತುಶಿಲ್ಪಗಳ ಜೊತೆ ಇಸ್ಲಾಮಿಕ್ ವಾಸ್ತುಶಿಲ್ಪ ಶೈಲಿಯನ್ನು ಸಹ ಮೈಗೂಡಿಸಿಕೊಂಡಿರುವ ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪ ಕೋಮು ಸಾಮರಸ್ಯದ ಪ್ರತೀಕವಾಗಿದೆ.
ಈ ಬಾರಿಯ ಪ್ರಧಾನ ವೇದಿಕೆಗೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಮುತ್ಸದ್ಧಿ ರಾಜಕಾರಣಿ ದಿ. ಎಂ. ಪಿ ಪ್ರಕಾಶ್ ಅವರ ಹೆಸರು ಇಡಲಾಗಿದೆ. 120*80 ಅಡಿ ವಿಸ್ತೀರ್ಣದಲ್ಲಿ ವೇದಿಕೆ ನಿರ್ಮಿಸಲಾಗಿದೆ. ವಿಶ್ವದ ಅತಿದೊಡ್ಡ ಬಯಲು ವಸ್ತು ಸಂಗ್ರಹಾಲಯ ಎಂದು ಕರೆಯಲ್ಪಡುವ ಹಂಪಿಯ ಪ್ರಮುಖ ಸ್ಮಾರಕಗಳ ಚಿತ್ರಣವನ್ನು ಒಂದು ವೇದಿಕೆಯಲ್ಲಿ ನೋಡುಗರು ಕಣ್ತುಂಬಿಕೊಳ್ಳಬಹುದು.
ವೇದಿಕೆ ಮಧ್ಯ ಭಾಗದಲ್ಲಿ ಹಜಾರಾಮ ವಿಜಯ ವಿಠ್ಠಲ ದೇವಸ್ಥಾನ, ಅದರ ಮೇಲೆ ವಿಶ್ವವಿಖ್ಯಾತ ಕಮಲ ಮಹಲ್ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. ಇದರ ಒಳಗಡೆ ಸಪ್ತ ಸ್ವರ ಕಂಬಗಳು, ಹಂಪಿಯ ವಿಶಿಷ್ಟ ರಚನೆ ಎನಿಸಿರುವ ಕುದುರೆ ಸಿಂಹಾಕೃತಿಗಳು ಇವೆ. ಇಸ್ಲಾಮಿಕ್ ಶೈಲಿಯ ಸುಂದರ ಕಿಟಕಿಗಳ ರಚನೆಯನ್ನು ಸಹ ಕಾಣಬಹುದು.
ವೇದಿಕೆ ಬಲಭಾಗದಲ್ಲಿ ಹೇಮಕೂಟದಲ್ಲಿನ ಸೂರ್ಯಾಸ್ತ ವೀಕ್ಷಣಾ ಸ್ಥಳದಲ್ಲಿನ ಕಲ್ಲಿನ ಮಂಟಪದ ಪ್ರತಿಕೃತಿಯ ಮೇಲೆ ಅಂಜನಾದ್ರಿಯ ಹನುಮನ ಮೂರ್ತಿ ರಚನೆಯಿದೆ. ಎಡಭಾಗದಲ್ಲಿ ಸಾಸಿವೆಕಾಳು ಗಣಪತಿ ಮೂರ್ತಿ ರಚನೆಯಿದೆ. ವೇದಿಕೆಯ ಎರಡು ಭಾಗದಲ್ಲಿ ಕಲ್ಲಿನರಥದ ಪ್ರತಿಕೃತಿ, ವಿಜಯನಗರ ಸಾಮ್ರಾಜ್ಯದ ವರಾಹ ಲಾಂಚನ, ಹಂಪಿ ಉತ್ಸವ-2025 ಲಾಂಚನಗಳಿವೆ. ವೇದಿಕೆ ಮಧ್ಯ ಭಾಗದಲ್ಲಿ ದಿ. ಎಂ. ಪಿ ಪ್ರಕಾಶ್ ಹೆಸರು ಕಂಗೊಳಿಸುತ್ತಿದೆ.
ಫೆ. 28 ಶುಕ್ರವಾರ ಸಂಜೆ 6 ಗಂಟೆಗೆ ಪ್ರಧಾನ ವೇದಿಕೆಯಲ್ಲಿ ಉದ್ಘಾಟನೆ ನೆರವೇರಲಿದೆ. ಮಾರ್ಚ್ 2ರ ವರೆಗೆ ನಡೆಯುವ ಹಂಪಿ ಉತ್ಸವದಲ್ಲಿ ನಾಡಿನ ಹೆಸರಾಂತ ಚಲನಚಿತ್ರ ನಟ -ನಟಿಯರು ಭಾಗವಹಿಸುತ್ತಿದ್ದಾರೆ. ಜೊತೆಗೆ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಹಿನ್ನೆಲೆ ಗಾಯಕರು ರಸಮಂಜರಿ ಮತ್ತು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ವೇದಿಕೆ ಮುಂಭಾಗದಲ್ಲಿ ಸಾರ್ವಜನಿಕರಿಗಾಗಿ ಸುಮಾರು 70 ಸಾವಿರ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ವೇದಿಕೆ ಎಡಭಾಗದಲ್ಲಿ ಜರ್ಮನ್ ಟೆಂಟ್ನಿಂದ ನಿರ್ಮಿತವಾದ ಅತಿಗಣ್ಯರ ವಿಶ್ರಾಂತಿ ಸ್ಥಳ ಹಾಗೂ ಕಲಾವಿದರ ಪ್ರಸಾದನ ಕೊಠಡಿಗಳನ್ನು ನಿರ್ಮಿಸಲಾಗಿದೆ. ವೇದಿಕೆ ಬಲಭಾಗದಲ್ಲಿ ಮಾಧ್ಯಮ ಕೇಂದ್ರ ಕಾರ್ಯನಿರ್ವಹಿಸಲಿದೆ.
ಹಂಪಿ ಉತ್ಸವದಲ್ಲಿ ಧ್ವನಿ, ಬೆಳಕು, ವೇದಿಕೆ ಸೇರಿ ಒಟ್ಟು ಆರು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಎದುರು ಬಸವಣ್ಣ ವೇದಿಕೆ ರಾಯಭಾರಿಯನ್ನಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೆ. ಎಂ ವೀರಸಂಗಯ್ಯ, ಮಹಾನವಮಿ ದಿಬ್ಬ ವೇದಿಕೆಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತೊಗಲುಗೊಂಬೆ ಕಲಾವಿದ ನಾರಾಯಣಪ್ಪ ಕಾರಿಗನೂರು ಅವರನ್ನ ರಾಯಭಾರಿಯಾಗಿ ನೇಮಿಸಲಾಗಿದೆ.
ಬುಧವಾರ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ಜೆಡ್ ಜಮೀರ್ ಅಹ್ಮದ್ ಖಾನ್, ಶಾಸಕ ಹೆಚ್. ಆರ್ ಗವಿಯಪ್ಪ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಅನ್ವರ್ ಬಾಷಾ, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್. ಎನ್ ಎಫ್ ಇಮಾಮ್ ನಿಯಾಜಿ, ಮಾಜಿ ಶಾಸಕ ಸಿರಾಜ್ ಶೇಖ್, ಜಿಲ್ಲಾಧಿಕಾರಿ ಎಂ. ಎಸ್ ದಿವಾಕರ್, ಜಿ. ಪಂ ಸಿಇಒ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ ಎಲ್, ಪ್ರಧಾನ ವೇದಿಕೆ ಸೇರಿದಂತೆ ಇತರೆ ವೇದಿಕೆಗಳ ಸಿದ್ಧತೆಯನ್ನು ವೀಕ್ಷಿಸಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ಶಾಸಕ ಹೆಚ್. ಆರ್ ಗವಿಯಪ್ಪ ಅವರ ಮಾರ್ಗದರ್ಶನದಲ್ಲಿ ಹಂಪಿ ಉತ್ಸವದ ಎಲ್ಲ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಬಳ್ಳಾರಿ, ಕೊಪ್ಪಳ, ಹೊಸಪೇಟೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಯ ಜನರಿಗೆ ಹಂಪಿ ಉತ್ಸವ ಎಂದರೆ ಮನೆಯ ಹಬ್ಬವಿದ್ದಂತೆ. ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರಿಗಾಗಿ 300 ಬಸ್ಗಳನ್ನು ನಿಯೋಜಿಸಲಾಗಿತ್ತು. ಇನ್ನೂ 50 ಬಸ್ಗಳ ನಿಯೋಜನೆಗೆ ಬೇಡಿಕೆ ಬಂದಿದ್ದು, ಇದನ್ನು ಪರಿಗಣಿಸಿ ಬಸ್ಗಳ ಸಂಖ್ಯೆ ಹೆಚ್ಚಿಸಲಾಗುವುದು. ಜನರು ಉತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಇದನ್ನೂ ಓದಿ : ಹಂಪಿ ಉತ್ಸವ: ಸಚಿವ ಜಮೀರ್ ಅಹ್ಮದ್ ಸಹ ಗಣ್ಯರಿಂದ ತುಂಗಾರತಿ: ನಾಡಿನ ಸುಭಿಕ್ಷೆಗೆ ಪ್ರಾರ್ಥನೆ - TUNGARATI