ಹುಬ್ಬಳ್ಳಿ: ಡಿ.ಕೆ.ಶಿವಕುಮಾರ್ ಇದೇ ಅವಧಿಯಲ್ಲಿ ಸಿಎಂ ಆಗ್ತಾರೆ ಎಂದು ಭೈರವಿ ಅಮ್ಮ ಭವಿಷ್ಯ ಹೇಳಿದ್ದಾರೆ.
ನಗರದಲ್ಲಿರುವ ಸಿದ್ದರೂಢ ಮಠದ ಕಾರ್ಯಕ್ರಮದಲ್ಲಿ ಇಂದು ಭಾಗಿಯಾದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
"ನನ್ನ ಮಾತು ಯಾವತ್ತೂ ಸುಳ್ಳಾಗಲ್ಲ. ಇಲ್ಲಿಯತನಕ ಸುಳ್ಳಾಗಿಲ್ಲ, ಸುಳ್ಳು ಆಗೋದೂ ಇಲ್ಲ. ನಾನೂ ಮೂರು ವರ್ಷದ ಹಿಂದೆ ಡಿಕೆಶಿ ಮನೆಗೆ ಹೋಗಿದ್ದೆ. ಅವರು ನನ್ನ ಕರೆದಿದ್ರು. ಮುಂದೆ ಏನಾಗುತ್ತೆ ಅಂತಾ ಕೇಳಿದ್ರು. ಏನು ಆಗಬೇಕು ಅಂತಾ ಕೇಳಿದೆ. ಮುಂದಿನ ಕಥೆ ಏನು ಅಂತಾ ಕೇಳಿದರು. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅಂತಾ ಹೇಳಿದ್ದೆ. ನೀನು ದುಡಿದ ದುಡ್ಡು, ಇನ್ಯಾವನೋ ತಿಂದು ಗುಂಡಾಗ್ತಾನೆ ಅನ್ನೋದು ಅಷ್ಟೇ ಅದರರ್ಥ. ಸತ್ಯ ಆಯ್ತೋ ಇಲ್ಲವೋ" ಎಂದು ಅವರು ಪ್ರಶ್ನಿಸಿದರು.
"ನಾನು ವಿನಯ್ ಕುಲಕರ್ಣಿ ಮನೆಗೆ ಹೋಗಿ ಶಾಸಕ ಆಗ್ತಾನೆ ಅಂದಿದ್ದೆ. ಶಾಸಕ ಆದ್ನೋ ಇಲ್ವೋ?. ನನ್ನ ಮಾತು ಸುಳ್ಳಾಗಲ್ಲ. ಸಿಎಂ ಬದಲಾವಣೆ ಅಲ್ಲ, ಆ ಸೀಟ್ನಲ್ಲಿ ಡಿಕೆಶಿನೇ ಕುಳಿತುಕೊಳ್ಳಬೇಕು. ನನಗೆ ಡಿಕೆಶಿ ಮೇಲಾಗಲೀ ಅಥವಾ ಸಿದ್ದರಾಮಯ್ಯ ಹಾಗೂ ಬಿಜೆಪಿ ಮೇಲಾಗಲೀ ಯಾವುದೇ ಅಭಿಮಾನವಿಲ್ಲ" ಎಂದರು.
ಯಾರು ಈ ಸಾಧ್ವಿ ಭೈರವಿ ಅಮ್ಮ?: ಸಾಧ್ವಿ ಭೈರವಿ ಅಮ್ಮ. ಇವರ ಮೂಲ ಉಡುಪಿಯ ಪುತ್ತಿಗೆ. ಹುಟ್ಟಿ ಬೆಳೆದಿದ್ದು ದಾವಣಗೆರೆಯಲ್ಲಿ. ಮೂಲ ಹೆಸರು ವಿದ್ಯಾ ಭಾರತಿ. ತಂದೆ ಸರ್ಕಾರಿ ನೌಕರರಾಗಿದ್ರೆ, ತಾಯಿ ಶಾಲಾ ಶಿಕ್ಷಕರು. ಅಘೋರಿಗಳ ಜೊತೆಗಿದ್ದು ಅಧ್ಯಯನ ಮಾಡಿದ ಇವರು ಹರಿಹರದ ನಿರಂಜನ ಅಖಾಡದ ಮಹಾಮಂಡಲೇಶ್ವರರಾಗಿದ್ದಾರೆ. ಹರಿದ್ವಾರದಲ್ಲಿ ನಿರಂತರ ಜಪ-ತಪದ ಮೂಲಕ ಸಿದ್ದಿ ಪ್ರಾಪ್ತಿಯಾಗಿದೆ. ಪ್ರತ್ಯಂಗಿರ ಹೋಮ, ಜ್ಯೋತಿಷ್ಯ ಹಾಗೂ ಸಂಖ್ಯಾಶಾಸ್ತ್ರದ ಪ್ರಾವೀಣ್ಯತೆ ಹೊಂದಿದ್ದಾರೆ. ಉತ್ತರ ಭಾರತದಲ್ಲಿ ಅಪಾರ ಭಕ್ತರನ್ನು ಹೊಂದಿದ್ದು, ಇತ್ತೀಚಿಗೆ ರಾಜ್ಯ ರಾಜಕಾರಣಿಗಳ ಭವಿಷ್ಯ ನುಡಿಯುವ ಮೂಲಕ ರಾಜ್ಯದಲ್ಲಿಯೂ ಪ್ರಸಿದ್ಧಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ಮಹಾಶಿವರಾತ್ರಿ ದಿನವೇ ತುಂಗಭದ್ರಾ ನದಿಯಲ್ಲಿ ಪುರಾತನ ಶಿವಲಿಂಗ ಪತ್ತೆ! - SHIVA LINGA FOUND