ಇಸ್ಲಾಮಾಬಾದ್(ಪಾಕಿಸ್ತಾನ): ಐಸಿಸಿ ಚಾಂಪಿಯನ್ಸ್ ಟ್ರೋಫಿ-2025ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಿರಾಶಾದಾಯಕ ಮತ್ತು ಉತ್ಸಾಹರಹಿತ ಪ್ರದರ್ಶನ ಹಾಗೂ ಪಂದ್ಯಾವಳಿಯಿಂದ ಬೇಗನೆ ನಿರ್ಗಮಿಸಿದ ವಿಷಯವು ತವರಿನಲ್ಲಿ ಅಭಿಮಾನಿಗಳಿಗೆ ಬೇಜಾರು ಉಂಟುಮಾಡಿದ್ದು ಮಾತ್ರವಲ್ಲದೇ, ಈಗ ದೇಶದ ಪ್ರಧಾನಿ ಶಹಬಾಜ್ ಶರೀಫ್ ಅವರಿಂದಲೂ ಪರಿಶೀಲನೆಗೆ ಒಳಪಡಲಿದೆ.
ಪ್ರಧಾನಿ ಶೆಹಬಾಜ್ ಷರೀಫ್ ಅವರು ತಂಡದ ಆರಂಭಿಕ ನಿರ್ಗಮನ ಮತ್ತು ಕಳಪೆ ಪ್ರದರ್ಶನದ ಬಗ್ಗೆ ವೈಯಕ್ತಿಕವಾಗಿ ಗಮನ ಹರಿಸಿದ್ದು, ಕ್ರಿಕೆಟ್ ತಂಡಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಕ್ಯಾಬಿನೆಟ್ ಮತ್ತು ಸಂಸತ್ತಿನಲ್ಲಿಯೂ ಚರ್ಚೆಯಾಗುವ ಸಾಧ್ಯತೆಯಿದೆ. ರಾವಲ್ಪಿಂಡಿಯಲ್ಲಿ ಗುರುವಾರ ನಡೆದ ಬಾಂಗ್ಲಾದೇಶ ವಿರುದ್ಧದ ಪಾಕಿಸ್ತಾನದ ಕೊನೆಯ ಗ್ರೂಪ್ ಎ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಪಂದ್ಯಾವಳಿಯಲ್ಲಿ ಒಂದೂ ಪಂದ್ಯ ಗೆಲ್ಲದ ಪಾಕಿಸ್ತಾನ ಕೇವಲ ಒಂದು ಅಂಕದೊಂದಿಗೆ ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿದೆ ಹಾಗೂ ಪಂದ್ಯಾವಳಿಯಿಂದ ಹೊರಬಿದ್ದಿದೆ.
ಸದ್ಯ ಈ ವಿಷಯದ ಬಗ್ಗೆ ಪ್ರಧಾನಿ ಶೆಹಬಾಜ್ ಸಂಸತ್ತಿನಲ್ಲಿ ಚರ್ಚಿಸಲು ಉದ್ದೇಶಿಸಿದ್ದಾರೆ ಎಂದು ಪ್ರಧಾನಿಯ ರಾಜಕೀಯ ಮತ್ತು ಸಾರ್ವಜನಿಕ ವ್ಯವಹಾರಗಳ ಸಹಾಯಕ ರಾಣಾ ಸನಾವುಲ್ಲಾ ಹೇಳಿದ್ದಾರೆ.
"ಪ್ರಧಾನಿ ವೈಯಕ್ತಿಕವಾಗಿ ಈ ಬಗ್ಗೆ ಗಮನ ಹರಿಸಲಿದ್ದಾರೆ ಮತ್ತು ಕ್ರಿಕೆಟ್ ಸಂಬಂಧಿತ ಈ ವಿಚಾರಗಳನ್ನು ಕ್ಯಾಬಿನೆಟ್ ಮತ್ತು ಸಂಸತ್ತಿನಲ್ಲಿ ಚರ್ಚಿಸುವಂತೆ ನಾವು ಅವರಿಗೆ ಮನವಿ ಮಾಡಲಿದ್ದೇವೆ" ಎಂದು ರಾಣಾ ಸನಾವುಲ್ಲಾ ಹೇಳಿದರು.
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಕೂಡ ಆತಿಥ್ಯ ವಹಿಸಿದೆ. ಪ್ರೇಕ್ಷಕರು ಕುಳಿತುಕೊಳ್ಳಬಹುದಾದ ಆಸನಗಳ ಸಂಖ್ಯೆ ಮತ್ತು ಸೌಲಭ್ಯಗಳನ್ನು ಮತ್ತಷ್ಟು ಹೆಚ್ಚಿಸಲು ರಾವಲ್ಪಿಂಡಿ, ಲಾಹೋರ್ ಮತ್ತು ಕರಾಚಿ ಕ್ರಿಕೆಟ್ ಕ್ರೀಡಾಂಗಣಗಳನ್ನು ನವೀಕರಿಸಲಾಗಿದೆ. ಆದರೆ ಪಾಕಿಸ್ತಾನವು ತನ್ನ ಎರಡೂ ಪಂದ್ಯಗಳನ್ನು ಸೋತ ನಂತರ ಮತ್ತು ಬಾಂಗ್ಲಾದೇಶ ವಿರುದ್ಧದ ಅಂತಿಮ ಲೀಗ್ ಪಂದ್ಯವು ಮಳೆಯಿಂದ ರದ್ದಾಗಿದ್ದರಿಂದ, ತಂಡವು ಪಂದ್ಯಾವಳಿಯಿಂದ ಹೊರಬಿದ್ದಿರುವುದು ಅಭಿಮಾನಿಗಳಿಗೆ ತೀರಾ ನಿರಾಸೆ ಮೂಡಿಸಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ಅದರ ಮುಖ್ಯಸ್ಥ ಮೊಹ್ಸಿನ್ ನಖ್ವಿ ಮತ್ತು ತಂಡವನ್ನು ಆಯ್ಕೆ ಮಾಡಿದ ಆಯ್ಕೆ ಸಮಿತಿಯ ಬಗ್ಗೆ ಕ್ರಿಕೆಟ್ ಅಭಿಮಾನಿಗಳಲ್ಲಿ ಆಕ್ರೋಶ ತೀವ್ರವಾಗುತ್ತಿದೆ. ಪಾಕಿಸ್ತಾನದ ಮುಖ್ಯ ಕೋಚ್ ಅಕಿಬ್ ಜಾವೇದ್ ಅವರು ತಂಡದ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಎಲ್ಲಾ ಆಟಗಾರರನ್ನು ಅವರ ಇತ್ತೀಚಿನ ಪ್ರದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
2023ರಲ್ಲಿ, ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ನಲ್ಲಿ ಪಾಕಿಸ್ತಾನವು ಒಂಬತ್ತು ಪಂದ್ಯಗಳ ಪೈಕಿ ಕೇವಲ ನಾಲ್ಕರಲ್ಲಿ ಗೆದ್ದಿತ್ತು ಮತ್ತು ಪಾಯಿಂಟ್ಸ್ ಟೇಬಲ್ನಲ್ಲಿ ಐದನೇ ಸ್ಥಾನದಲ್ಲಿ ಕೊನೆಗೊಂಡಿತ್ತು. ಕಳೆದ ವರ್ಷ ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಭಾರತ ಮತ್ತು ಯುಎಸ್ಎ ವಿರುದ್ಧ ಸೋತ ನಂತರ ಪಾಕಿಸ್ತಾನವು ಪ್ರಾಥಮಿಕ ಹಂತದಲ್ಲಿಯೇ ನಿರ್ಗಮಿಸಿತ್ತು.
ಇದನ್ನೂ ಓದಿ: ಗುಣರತ್ನೆ, ಜಯಸಿಂಘೆ ಆಕರ್ಷಕ ಅರ್ಧಶತಕ; ಶ್ರೀಲಂಕಾ ಮಾಸ್ಟರ್ಸ್ಗೆ ಗೆಲುವು - INTERNATIONAL MASTERS LEAGUE T20