ಹೈದರಾಬಾದ್, ತೆಲಂಗಾಣ: ಸುರಂಗ ಕುಸಿದು ಎಂಟು ಜನರು ಸಿಲುಕಿರುವ ಶ್ರೀ ಶೈಲಂ ಎಡದಂಡೆ ಕಾಲುವೆ ಸುರಂಗ ಮಾರ್ಗದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಎರಡು ದಿನಗಳ ಕ್ರಿಯಾ ಯೋಜನೆ ಸಿದ್ಧಪಡಿಸಿದೆ. ರಕ್ಷಣಾ ಕಾರ್ಯಾಚರಣೆಗೆ ಸವಾಲಾಗಿರುವ ಅವಶೇಷಗಳು, ನೀರು, ಮಣ್ಣು, ಹೂಳು ತೆಗೆದು ಘಟನಾ ಸ್ಥಳಕ್ಕೆ ತಲುಪಲು ನಿರ್ಧರಿಸಲಾಗಿದೆ. ಇನ್ನು 14 ಕಿ.ಮೀ ಉದ್ದದ ಸುರಂಗದ 11.5 ಕಿ.ಮೀ ವರೆಗೆ ಯಾವುದೇ ಸೋರಿಕೆ ಕಂಡು ಬಂದಿಲ್ಲ.
ಅರ್ಧ ಕಿಮೀ ಕೊಚ್ಚಿಕೊಂಡು ಹೋದ ಸುರಂಗ ಕೊರೆಯುವ ಯಂತ್ರ: ಲೊಕೊ ರೈಲು ರಕ್ಷಣಾ ಕಾರ್ಯಕ್ಕೆ ಬಳಕೆ ಮಾಡಬಹುದಾಗಿದೆ. ಆದರೆ, ಎರಡರಿಂದ ಮೂರು ಅಡಿ ನೀರು ತುಂಬಿದ್ದು, ಇದು ಲೋಕೋ ರೈಲು ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಹೀಗಾಗಿ ನೀರನ್ನು ತೆಗೆಯಲು ಅಧಿಕಾರಿಗಳು ಮುಂದಾಗಿದ್ದಾರೆ. ಇದಾದ ಬಳಿಕ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿರುವ ಸುರಂಗ ಕೊರೆಯುವ ಯಂತ್ರದ ಅವಶೇಷಗಳನ್ನು ಹೊರಕ್ಕೆ ತೆಗೆಯಲು ನಿರ್ಧರಿಸಲಾಗಿದೆ. 14 ಕಿ.ಮೀ ಉದ್ದದ ಸುರಂಗದಲ್ಲಿ ದೊಡ್ಡ ಪ್ರಮಾಣದಲ್ಲಿ ಮಣ್ಣು ಕುಸಿದ ಪರಿಣಾಮ ನೀರಿನ ಪ್ರವಾಹ ಉಂಟಾಗಿ ಅಲ್ಲಿ ಬಳಕೆ ಮಾಡುತ್ತಿದ್ದ ಸುರಂಗ ಕೊರೆಯುವ ಯಂತ್ರ ಅರ್ಧ ಕಿ. ಮೀ ದೂರು ಕೊಚ್ಚಿಕೊಂಡು ಹೋಗಿದೆ.
ಟಿಬಿಎಂ ಸಂಪೂರ್ಣವಾಗಿ ಹಾನಿಗೊಂಡಿದ್ದು, ಅದರ ಅವಶೇಷಗಳು ಸುರಂಗದಲ್ಲೆಲ್ಲ ತುಂಬಿವೆ. ಈ ಪರಿಣಾಮವಾಗಿ ರಕ್ಷಣಾ ತಂಡ ಪೈಪ್ ಮತ್ತು ಕನ್ವೇಯರ್ ಬೆಲ್ಟ್ ಮೂಲಕ ಮುಂದೆ ಸಾಗುತ್ತಿದೆ. ಗ್ಯಾಸ್ ಕಟರ್ ಮತ್ತು ಪ್ಲಾಸ್ಮಾ ಕಟ್ಟರ್ಗಳಿಂದ ಟಿಬಿಎಂನ ಹಿಂಭಾಗವನ್ನು ಸಂಪೂರ್ಣವಾಗಿ ಕತ್ತರಿಸಿ ಪ್ರತ್ಯೇಕಿಸಲು ನಿರ್ಧರಿಸಲಾಗಿದೆ.
ಟಿಬಿಎಂನ ಅವಶೇಷಗಳನ್ನು ತೆಗೆದ ನಂತರ 100 ಮೀಟರ್ವರೆಗೆ ಶೇಖರಣೆಯಾದ ಕೆಸರು ಉಳಿದಿದ್ದು, ಸುರಂಗದ ಕೊನೆಯಲ್ಲಿ 40 ಮೀಟರ್ಗಳಲ್ಲಿ ಸುಮಾರು 15-20 ಅಡಿ ಎತ್ತರಕ್ಕೆ ಹೂಳು ಶೇಖರಣೆಯಾಗಿದೆ. ಈ ಹೂಳನ್ನು ತೆಗೆಯಲು ರಕ್ಷಣಾ ತಂಡ ಪ್ರಯತ್ನಿಸುತ್ತಿದ್ದು, ಇದಕ್ಕೆ ಸಮಗ್ರ ಯೋಜನೆ ರೂಪಿಸಲಾಗುತ್ತಿದೆ ಎಂದು ನೀರಾವರಿ ಸಚಿವ ಉತ್ತಮ್ ಕುಮಾರ್ ರೆಡ್ಡಿ, ಕಾರ್ಯಾಚರಣೆಯ ಬಗೆಗಿನ ಮಾಹಿತಿ ನೀಡಿದ್ದಾರೆ.
ರಾಜಕೀಯ ಬೇಡ: ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳಕ್ಕೆ ಮುನುಗೋಡು ಮಾಜಿ ಶಾಸಕ ಕೋಮಟಿ ರೆಡ್ಡಿ ರಾಜಗೋಪಾಲ್ ರೆಡ್ಡಿ ಭೇಟಿ ನೀಡಿದ್ದು, ಮಾಹಿತಿ ಪಡೆದುಕೊಂಡಿದ್ದಾರೆ . ಸಂತ್ರಸ್ತರ ರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ರಕ್ಷಣಾ ತಂಡಗಳು, ಸಂಬಂಧಿತ ಅಧಿಕಾರಿಗಳ ತಂಡ ಅವಿರತವಾಗಿ ಶ್ರಮಿಸುತ್ತಿದೆ. ಇನ್ನ 24 ಗಂಟೆಯೊಳಗೆ ಕಾರ್ಯಾಚರಣೆ ಪೂರ್ಣಗೊಳ್ಳುವ ವಿಶ್ವಾಸ ಇದೆ ಎಂದು ಭರವಸೆಯನ್ನೂ ಕೂಡಾ ರೆಡ್ಡಿ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಈ ವಿಚಾರದಲ್ಲಿ ರಾಜಕೀಯಗೊಳಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಎರಡು ದಿನದಲ್ಲಿ ರಕ್ಷಣಾ ಕಾರ್ಯ: ಶನಿವಾರ ಬೆಳಗ್ಗೆ 8.30ರ ಸುಮಾರಿಗೆ ಎಸ್ಎಲ್ಬಿಸಿ ಟನಲ್ ಕುಸಿತ ಪ್ರಕರಣ ಸಂಭವಿಸಿತ್ತು. ಘಟನೆ ನಡೆದಾಗಿನಿಂದ ಕಳೆದ ಆರು ದಿನಗಳಿಂದ ಸುರಂಗದಲ್ಲಿ ಸಿಲುಕಿದ ಹಾಗೂ ನಾಪತ್ತೆಯಾದವರ ಬಗ್ಗೆ ಚಿಂತೆ ಮೂಡಿದೆ. ಆದಾಗ್ಯೂ ಸಚಿವರಾದ ಉತ್ತಮ್ ಕುಮಾರ್ ರೆಡ್ಡಿ ಇನ್ನೆರಡು ದಿನದಲ್ಲಿ ರಕ್ಷಣಾ ಕಾರ್ಯ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟಿಬಿಎಂ ಅವಶೇಷಗಳು ಹಾಗೂ ಸಾವಿರಾರು ಕ್ಯೂಬಿಕ್ ಮೀಟರ್ ಮಣ್ಣನ್ನು ಸ್ಥಳಾಂತರಿಸುವುದು ದೀರ್ಘ ಮತ್ತು ಹೆಚ್ಚು ಸಮಯವನ್ನು ತೆಗೆದುಕೊಳ್ಳಬಹುದಾದ ಕೆಲಸ ಎಂದು ಹೇಳಲಾಗುತ್ತಿದೆ.
ಹೂಳು ಮತ್ತು ಕಲ್ಲುಮಣ್ಣುಗಳನ್ನು ಸ್ಥಳಾಂತರಿಸುವ ಏಕೈಕ ಮಾರ್ಗವೆಂದರೆ ಲೊಕೊ ರೈಲು. ಕನ್ವೇಯರ್ ಬೆಲ್ಟ್ ಬಳಸಿ ಈ ಅವಶೇಷಗಳನ್ನು ನೇರವಾಗಿ ಹೊರಕ್ಕೆ ತಳ್ಳಬಹುದು. ಇದಕ್ಕೆ , ವಿಶೇಷ ರಿಪೇರಿಗಳನ್ನು ಕೈಗೊಳ್ಳಬೇಕು. ಹೆಚ್ಚು ಜನರನ್ನು ನಿಯೋಜಿಸದ ಹೊರತು ಈ ಕಾಮಗಾರಿ ವೇಗ ಪಡೆಯುವ ಸಾಧ್ಯತೆ ಕಡಿಮೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಬೇಕಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಇದನ್ನೂ ಓದಿ: ನೌಕಾ ಪಡೆಗೆ ಆನೆ ಬಲ: ಮರಳಿ ಮರಳಿ ಗುರಿಯಿಡುವ ಆ್ಯಂಟಿ ಶಿಪ್ ಕ್ಷಿಪಣಿ ಯಶಸ್ವಿ ಪರೀಕ್ಷೆ ನಡೆಸಿದ DRDO
ಇದನ್ನೂ ಓದಿ: ತೆಲಂಗಾಣದ ಎಸ್ಎಲ್ಬಿಸಿ ಸುರಂಗ ದುರಂತ: ಆ 40 ಮೀಟರ್ಗಳೇ ಈಗ ದುರ್ಗಮ, ಮುಂದುವರಿದ ಕಾರ್ಯಾಚರಣೆ