ಬಾಗ್ಪತ್, ಉತ್ತರಪ್ರದೇಶ,: ಫೆ. 15 ರಂದು ಕಾಣೆಯಾಗಿದ್ದ ಯುವಕನೊಬ್ಬನ ಮೃತದೇಹ ಮೂರು ಭಾಗಗಳಾಗಿ ಕತ್ತರಿಸಿ, ಚೀಲಗಳಲ್ಲಿ ತುಂಬಿಸಿ ನದಿಗೆ ಎಸೆದಿರುವ ಸ್ಥಿತಿಯಲ್ಲಿ ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ಬುಧವಾರ ಸಂಜೆ ಪತ್ತೆಯಾಗಿದೆ. ಛಪ್ರೌಲಿಯ ಮೊಹಲ್ಲಾ ಖುರೇಷಿಯಾನ್ ನಿವಾಸಿ ಅಸ್ಗರ್ ಅವರ ಮಗ ಫೈಸಲ್ (21) ಕೊಲೆಯಾದ ಯುವಕ.
ಇದ್ದಕ್ಕಿದ್ದಂತೆ ಕಾಣೆಯಾಗಿದ್ದ ಯುವಕ: ಫೈಸಲ್ ಫೆ.15 ರಿಂದ ಇದ್ದಕ್ಕಿದ್ದಂತೆ ಕಾಣೆಯಾಗಿದ್ದ, ಆತನಿಗಾಗಿ ಕುಟುಂಬದವರು ಸಾಕಷ್ಟು ಹುಡುಕಾಟ ನಡೆಸಿದ್ದರು. ಸಿಗದ ಕಾರಣ ಕೊನೆಗೆ ಛಪ್ರೌಲಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ಕೂಡ ದಾಖಲಿಸಿದ್ದರು. ಯುವಕನನ್ನು ಅಪಹರಿಸಿರುವ ಆರೋಪವೂ ಕೇಳಿ ಬಂದಿತ್ತು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಯುವಕನಿಗಾಗಿ ಹುಡುಕಾಟ ಆರಂಭಿಸಿದ್ದರು. ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಆದರೆ, ಇದೀಗ ಬುಧವಾರ ಸಂಜೆ ಹರ್ಷಿಯಾ ಗ್ರಾಮದ ಬಳಿಯ ಹಿಂದೋನ್ ನದಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮೂರು ಭಾಗಗಳಾಗಿ ಕತ್ತರಿಸಿ ಚೀಲಗಳಲ್ಲಿ ತುಂಬಿಸಿ ಎಸೆದಿರುವ ರೀತಿಯಲ್ಲಿ ಪತ್ತೆಯಾಗಿದೆ. ಮುಂಡ, ಮತ್ತು ಕುತ್ತಿಗೆ ಸೇರಿದಂತೆ ದೇಹವನ್ನು ಮೂರು ಭಾಗಗಳಾಗಿ ಕತ್ತರಿಸಲಾಗಿದೆ. ಹೊಟ್ಟೆಯನ್ನು ಚೂರಿಯಿಂದ ಸೀಳಿ ಹಾಕಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೃತದೇಹವನ್ನು ಫೈಸಲ್ನದ್ದು ಎಂದು ಗುರುತಿಸಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಘಟನೆ ಬಗ್ಗೆ ಎಸ್ಒ ಹೇಳಿದ್ದಿಷ್ಟು: ಈ ಬಗ್ಗೆ ಛಪ್ರೌಲಿ ಎಸ್ಒ ದೇವೇಶ್ ಶರ್ಮಾ ಮಾಹಿತಿ ನೀಡಿದ್ದು, "ಯುವಕ ಕಾಣೆಯಾಗಿದ್ದ ಬಗ್ಗೆ ಕುಟುಂಬದವರು ದೂರು ನೀಡಿದ್ದರು. ಪೊಲೀಸರು ಹುಡುಕುತ್ತಿದ್ದರು. ಈಗ ಯುವಕನ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಕುಟುಂಬ ಸದಸ್ಯರ ಆರೋಪಗಳ ಪ್ರಕಾರ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆದಷ್ಟು ಶೀಘ್ರದಲ್ಲಿ ಆರೋಪಿಯನ್ನು ಬಂಧಿಸಲಾಗುವುದು" ಎಂದು ತಿಳಿಸಿದರು.
ಮೂರು ಸಾವಿರಕ್ಕೆ ಕೊಲೆ: ಸ್ಥಳೀಯರ ಆರೋಪ: ಯುವಕ 3000 ರೂ. ಸಾಲ ಪಡೆದಿದ್ದು, ಅದನ್ನು ಹಿಂತಿರುಗಿಸಿರಲಿಲ್ಲ. ಆ 3000 ರೂಪಾಯಿಗಾಗಿ ಫೈಸಲ್ನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ಏತಕ್ಕಾಗಿ ಕೊಲೆ ನಡೆದಿದೆ. ಕಾರಣ ಏನು?, ಕೊಲೆ ಮಾಡಿದ್ಯಾರು ಎಂಬುದು ಗೊತ್ತಾಗಲಿದೆ.
ಇದನ್ನೂ ಓದಿ: ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಿ ಬಂಗಾರ ದೋಚಿದ ಮೂವರಿಗೆ ಜೀವಾವಧಿ ಶಿಕ್ಷೆ