ಸುರಪುರ : ತಹಶೀಲ್ದಾರ್ ಬ್ಯಾಂಕ್ ಖಾತೆಯಿಂದ 75 ಲಕ್ಷಕ್ಕೂ ಅಧಿಕ ಹಣ ವಂಚನೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಕಚೇರಿಯ ಸಹಾಯಕ ಸಿ.ಎಸ್.ರಾಜು ಎನ್ನುವವರನ್ನು ಅಮಾನತುಗೊಳಿಸಿ ಡಿಸಿ ಆದೇಶ ಹೊರಡಿಸಿದ್ದಾರೆ.
ತಹಶೀಲ್ದಾರ್ ಕಚೇರಿಯಲ್ಲಿ ನೈಸರ್ಗಿಕ ವಿಕೋಪದ ಪ್ರಕರಣಗಳ ಕುರಿತು ಕರ್ತವ್ಯ ನಿರ್ವಹಿಸಲು ಕಚೇರಿಯ ಪ್ರಥಮ ದರ್ಜೆ ಸಹಾಯಕ ಸಿ.ಎಸ್.ರಾಜು ಎನ್ನುವವರನ್ನು ನೇಮಿಸಲಾಗಿತ್ತು. ಇವರ ಕರ್ತವ್ಯ ಲೋಪದಿಂದಾಗಿ ಜೂನ್. 1 ರಂದು ತಹಶೀಲ್ದಾರ್ ಅವರ ಸುರಪುರ ಬ್ಯಾಂಕ್ ಖಾತೆಯಿಂದ 75 ಲಕ್ಷಕ್ಕೂ ಅಧಿಕ ಹಣ ವಂಚನೆ ನಡೆದಿದೆ.
ಈ ಪ್ರಕರಣಕ್ಕೆ ಮೂಲವಾಗಿರುವ ಚೆಕ್ ಪ್ರತಿಯನ್ನು ಆಕ್ಸಿಸ್ ಬ್ಯಾಂಕಿನಲ್ಲಿ ಕೆಲಸ ಮಾಡುವ ವಿಜಯಕುಮಾರ್ ಚೌದ್ರಿ ಎಂಬುವವನು ಕದ್ದು ತೆಗೆದುಕೊಂಡಿದ್ದರು. ಇದನ್ನು ರಾಜು ಮೂರು ತಿಂಗಳಾದರೂ ನೋಡದಿರುವುದು ಹಾಗೂ ಕಳೆದ ಮೂರು ತಿಂಗಳಿಂದ ತಹಶೀಲ್ದಾರ್ ಸುರಪುರ ಬ್ಯಾಂಕ್ ಖಾತೆಯ ವ್ಯವಹಾರದ ವಿವರವನ್ನು ಬ್ಯಾಂಕ್ನಿಂದ ಪಡೆದು ಪುಸ್ತಕದಲ್ಲಿ ದಾಖಲಿಸುವುದಾಗಲಿ ಹಾಗೂ ತಹಶೀಲ್ದಾರ್ ಗಮನಕ್ಕೆ ತರದೇ ಕರ್ತವ್ಯಲೋಪ ಎಸಗಿರುವುದಕ್ಕಾಗಿ ರಾಜು ಅವರನ್ನು ಅಮಾನತು ಮಾಡಿರುವುದಾಗಿ ಆದೇಶದಲ್ಲಿ ತಿಳಿಸಿದ್ದಾರೆ.