ಯಾದಗಿರಿ: ಸರ್ಕಾರವನ್ನು ಪ್ರಶ್ನಿಸಲು ಹೋದಾಗ ಸಂಸತ್ತಿನಲ್ಲಿ ನಮಗೆ ಅವಕಾಶ ನೀಡುತ್ತಿಲ್ಲ. ನಮ್ಮ ಧ್ವನಿ ಹತ್ತಿಕ್ಕಲು ರಾಹುಲ್ ಗಾಂಧಿ ಅವರ ಸಂಸತ್ತಿನ ಸದಸ್ಯತ್ವ ರದ್ದು ಪಡಿಸಿದ್ದಾರೆ. ನಾವು ಯಾವುದೇ ಕಾರಣಕ್ಕೂ ಹೆದರುವುದಿಲ್ಲ. ದೇಶದ ಅಭಿವೃದ್ಧಿಗೆ ಹೋರಾಟ ಮಾಡುತ್ತಿರುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸೈದಾಪುರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ನೂತನ ಕಾಂಗ್ರೆಸ್ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಮೋದಿ ಅವರೇ ನಿಮಗೆ ಹಾಗೂ ಅದಾನಿ ಮತ್ತು ಅಂಬಾನಿ ಜೊತೆ ಇರುವ ಸಂಬಂಧವೇನು? ಅವರ ರಕ್ಷಣೆಗಾಗಿ ನೀವೇಕೆ ಕಾನೂನು ತಿದ್ದುಪಡಿ ಮಾಡುತ್ತಿದ್ದೀರಿ. ಅವರ ಖಾಸಗಿ ವಿಮಾನದಲ್ಲಿ ಹೋಗುತ್ತಿರುವ ಉದ್ದೇಶ ದೇಶಕ್ಕೆ ತಿಳಿಯುವಂತೆ ಹೇಳಿ ಎಂದು ಅವರು ಪ್ರಶ್ನಿಸಿದರು.
ಕೋಲಾರದಲ್ಲಿ ರಾಹುಲ್ ಗಾಂಧಿ ಭಾಷಣದಲ್ಲಿ ನೀರವ್ ಮೋದಿ ಮತ್ತು ಲಲಿತ್ ಮೋದಿ ಕಳ್ಳರ ಬಗ್ಗೆ ಹೇಳುವಾಗ ಕಳ್ಳರೆಲ್ಲರೂ ಮೋದಿ ಎಂಬ ಸರ್ನೇಮ್ನಿಂದ ಆರಂಭವಾಗಿದೆ ಎಂದು ಹೇಳಿದ್ದರು. ಆದರೆ, ಕೋರ್ಟ್ಗೆ ಗುಜರಾತ್ನಲ್ಲಿ ಉದ್ಯಮಿಯೊಬ್ಬರು ಕೇಸ್ ದಾಲಿಸಿದ್ದಾರೆ. ಇದು ಯಾವುದೇ ಜನಾಂಗವನ್ನು ಅವಮಾನ ಮಾಡಿದಂತಲ್ಲ. ನಮ್ಮ ಬಗ್ಗೆ ಮೋದಿ ಹಲವು ಸಲ ಹಂಗಿಸಿದ್ದಾರೆ. ನಾವು ವೈಯಕ್ತಿಕ ದ್ವೇಷ ಸಾಧಿಸಲು ಹೋಗಿಲ್ಲ ಎಂದು ಹೇಳಿದರು.
ಯಾರ ತಲೆ ಮೇಲೆ ಗಾಂಧಿ ಟೋಪಿ ಇರುತ್ತದೆಯೂ ಅವರಿಗೆ ರಕ್ಷಣೆ ಇರುತ್ತದೆ: ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಬೆಳಗಾವಿಯಲ್ಲಿ ಭಾಷಣ ಮಾಡುವಾಗ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಛತ್ರಿ ಹಿಡಿಯದೆ ಕಾಂಗ್ರೆಸ್ ಅವಮಾನಿಸಿದೆ ಎಂದು ಹೇಳಿದ್ದರು. ಅಂದು ನನ್ನ ತಲೆಯ ಮೇಲೆ ಗಾಂಧಿ ಟೋಪಿ ಇತ್ತು, ಯಾರ ತಲೆ ಮೇಲೆ ಗಾಂಧಿ ಟೋಪಿ ಇರುತ್ತದೆಯೂ ಸಹಜವಾಗಿಯೇ ಅವರಿಗೆ ರಕ್ಷಣೆ ಇರುತ್ತದೆ. ನೀವು ಕರಿ ಟೋಪಿ ಹಾಕ್ತೀರಿ, ನಾವು ಬಿಳಿ ಟೋಪಿ ಹಾಕ್ತೀವಿ ಎಂದು ಮೋದಿ ಹೇಳಿಕೆಗೆ ತಿರುಗೇಟು ನೀಡಿದರು.
ಹಿಂದಿನ ಅಧ್ಯಕ್ಷರ ತಲೆ ಮೇಲೆ ಬಿಳಿ ಟೋಪಿ ಇತ್ತು, ಮೋದಿಯವರ ತಲೆ ಮೇಲೆ ಕರಿ ಛತ್ರಿ ಇತ್ತು, ಯಾರ ಬಳಿ ಕಪ್ಪು ಹಣ ಇರುತ್ತದೆ ಅವರ ಬಳಿ ಕರಿ ಟೋಪಿ, ಕರಿ ಛತ್ರಿ, ಇರುತ್ತದೆ. ನಮ್ಮ ಬಳಿ ಬಿಳಿ ಟೋಪಿ, ಬಿಳಿ ಛತ್ರಿ ಇದ್ದು ಎಲ್ಲ ಸ್ವಚ್ಛವಾಗಿದೆ ಎಂದರು. ಈಗ ಯಾರು ಕನಿಕರ ತೋರಿಸುತ್ತಿರುವವರೇ ನಾನು ಪಾರ್ಲಿಮೆಂಟ್ನಲ್ಲಿ ಪ್ರತಿಪಕ್ಷ ನಾಯಕ ಆಗಲು ಅಡ್ಡಿ ಬಂದಿದ್ದರು. ನಾನು ಇಲ್ಲಿ ನಿಂತಾಗ ನಮ್ಮವರನ್ನು ನನ್ನ ವಿರುದ್ಧ ನಿಲ್ಲಿಸಿದ್ದು ಅವರೇ. ಅಮಿತ್ ಶಾ ಬಂದು ನನ್ನ ವಿರುದ್ಧ ಪ್ರಚಾರ ಮಾಡಿದ್ದರು ಎಂದು ಕಿಡಿಕಾರಿದರು.
ನನ್ನ ರಾಜಕೀಯ ಗುರು ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸರ ಮಾರ್ಗದರ್ಶನದಂತೆ ಗುರುಮಠಕಲ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಸತತವಾಗಿ 8 ಸಲ ಗೆದ್ದು ಕಾಂಗ್ರೆಸ್ ಪಕ್ಷದ ಎಐಸಿಸಿ ಅಧ್ಯಕ್ಷನಾಗಿ ಉನ್ನತ ಮಟ್ಟಕ್ಕೆ ತಲುಪಲು ನಿಮ್ಮ ಆಶೀರ್ವಾದದಿಂದಲೇ ಎಂದು ಹಳೆಯ ನೆನೆಪುಗಳನ್ನು ಸ್ಮರಿಸಿಕೊಂಡರು. 371 (ಜೆ) ಕಲಂ ಸಂವಿಧಾನದಲ್ಲಿ ಇರುವವರಿಗೆ ಕಲ್ಯಾಣ ಕರ್ನಾಟಕದಲ್ಲಿ ಹಲವು ಜನರಿಗೆ ಉದ್ಯೋಗ ಮತ್ತು ಉನ್ನತ ಶಿಕ್ಷಣಗಳಾದ ವೈದ್ಯಕೀಯ, ಎಂಜಿನಿಯರ್ ಮುಂತಾದವುಗಳಲ್ಲಿ ಮೀಸಲಾತಿ ಸಿಗಲಿದೆ. ಕಲ್ಯಾಣ ಕರ್ನಾಟಕ ಹೊರಗಡೆ ಶೇ.8 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಇದು ಸೋನಿಯಾ ಗಾಂಧಿ ಅವರ ಆಶೀರ್ವಾದವಾಗಿದೆ ಎಂದರು.
ಇನ್ನು ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಬಾಬುರಾವ್ ಚಿಂಚನಸೂರ, ಶರಣಬಸಪ್ಪ ದರ್ಶನಾಪೂರ್, ರಾಜಾ ವೆಂಕಟಪ್ಪ ನಾಯಕ, ರಾಜಶೇಖರ್ ಪಾಟೀಲ್, ಶಾಸಕ ಡಾ.ಅಜಯ್ ಸಿಂಗ್, ಶರಣಪ್ಪ ಮಟ್ಟೂರ್, ಡೇವಿಡ್ ಶೇಮಿನ, ಚನ್ನಾರೆಡ್ಡಿ ತುನ್ನೂರು, ಬಸ್ಸಿರೆಡ್ಡಿ ಅನಪುರ, ಕೃಷ್ಣ ಚಪೇಟ್ಲಾ ಇದ್ದರು.
ಇದನ್ನೂ ಓದಿ:ಸಿದ್ದರಾಮಯ್ಯರಿಂದ ಸರಣಿ ಟ್ವೀಟ್.. ಆನ್ಸರ್ ಮಾಡಿ ಮೋದಿ ಅಂದ ಪ್ರತಿಪಕ್ಷ ನಾಯಕ