ಯಾದಗಿರಿ: ಸಚಿವ ಮುರುಗೇಶ್ ನಿರಾಣಿ ಅವರೇ ದೊಡ್ಡ ನಾಲಾಯಕ್, ಅವರಿಗೆ ಅಧಿಕಾರದ ಹುಚ್ಚು ಹಿಡಿದಿದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ತಿರುಗೇಟು ನೀಡಿದ್ದಾರೆ.
ನಗರದ ಖಾಸಗಿ ಹೋಟೆಲ್ವೊಂದರಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಮಾಜದ ಬಗ್ಗೆ ನಿರಾಣಿಯವರಿಗೆ ಕಳಕಳಿ ಇಲ್ಲ. ನನ್ನ ಬಗ್ಗೆ ಸ್ವಾಮೀಜಿಯವರ ಬಗ್ಗೆ ಅತೀ ಕೀಳಾಗಿ ಮಾತನಾಡಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೀರಿ, ಪಂಚಮಸಾಲಿ ಮೀಸಲಾತಿ ಬಗ್ಗೆ ವರದಿ ತರಿಸಿಕೊಂಡು 6 ತಿಂಗಳಲ್ಲಿ ಮೀಸಲಾತಿ ನೀಡುವ ಬಗ್ಗೆ ಸಿಎಂ ಸದನದಲ್ಲಿ ಭರವಸೆ ನೀಡಿದ್ದಾರೆ. ಸರ್ಕಾರದಲ್ಲಿ ಮಂತ್ರಿ ದೊಡ್ಡವರಾ? ಮುಖ್ಯಮಂತ್ರಿ ದೊಡ್ಡವರಾ? ಎಂದು ಪ್ರಶ್ನಿಸಿದರು.
ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಸಮಾಜದ ಪರ ನಿಂತಿದ್ದಕ್ಕೆ ನಿರಾಣಿ ಹೀಗೆಲ್ಲಾ ಮಾತನಾಡುತ್ತಿದ್ದಾರೆ. ಒಂದು ವೇಳೆ ಸರ್ಕಾರ 6 ತಿಂಗಳಲ್ಲಿ ಮೀಸಲಾತಿ ಘೊಷಣೆ ಮಾಡದಿದ್ದರೆ, ನಿರಾಣಿ ಮನೆ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಕಾಶಪ್ಪನವರ್ ಎಚ್ಚರಿಕೆ ನೀಡಿದರು.
ಸಮಾಜದ ವಿರುದ್ಧ ಹೀಗೆ ಹೇಳಿಕೆ ನೀಡಿದರೆ ಸಮಾಜವೇ ತಕ್ಕ ಪಾಠ ಕಲಿಸುತ್ತದೆ. ಸ್ವಾಮೀಜಿಯವರ ಆಶೀರ್ವಾದದಿಂದಲೇ ನಿರಾಣಿ ಮಂತ್ರಿಯಾಗಿರುವುದನ್ನು ಮರೆಯಬಾರದು ಅಂತಾ ಕಾಶಪ್ಪನವರ್ ಹೇಳಿದರು.