ವಿಜಯಪುರ: ಉದ್ಯೋಗ ಕೊಡಿಸುವುದಾಗಿ ನಂಬಿಸಿದ ವ್ಯಕ್ತಿಗೆ ಹಣ ನೀಡಿ ಮೋಸ ಹೋದ ಯುವಕನೊಬ್ಬನಿಗೆ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದೇವರಹಿಪ್ಪರಗಿಯ ತಾಂಡಾದಲ್ಲಿ ನಡೆದಿದೆ.
ಅನಿಲ್ ಕೇಸು ಜಾಧವ (30) ಮೃತ ಯುವಕ. ಅನಿಲ್ ಪಿಯುಸಿ ನಂತರ ಸೇನೆ ಸೇರಲು ಬಯಸಿದ್ದ. ಅದಕ್ಕಾಗಿ ವ್ಯಕ್ತಿಯೊಬ್ಬನಿಗೆ ತರಬೇತಿ ಮತ್ತು ಉದ್ಯೋಗ ಪಡೆಯಲು ಸಾಲ ಮಾಡಿ 2.50 ಲಕ್ಷ ರೂ. ನೀಡಿದ್ದ ಎನ್ನಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಹಲವು ದಿನಗಳಿಂದ ಹಣ ನೀಡಿದ್ದ ವ್ಯಕ್ತಿಗೆ ಪೋನ್ ಮಾಡಿದ್ದ. ಆದರೆ, ಹಣ ಪಡೆದವ ಕೇವಲ ಭರವಸೆ ನೀಡುತ್ತಿದ್ದನಂತೆ.
ಆದರೆ, ಒಂದು ವರ್ಷವಾದರೂ ನೌಕರಿ ಇಲ್ಲ, ನೀಡಿದ ಹಣ ಸಹ ವಾಪಸ್ ಬಂದಿಲ್ಲವೆಂದು ಮನನೊಂದು ಜಮೀನಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ದೇವರಹಿಪ್ಪರಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತ ಅನಿಲ್ ಸೇರಿ ಮೂವರಿಂದ ಇದೇ ರೀತಿ ಹಣ ಪಡೆದಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.