ವಿಜಯಪುರ: ಇಬ್ಬರು ಪೂಜಾರಿಗಳ ನಡುವೆ ದೇವರ ಪೂಜೆ ಮಾಡುವ ವಿಚಾರವಾಗಿ ನಡೆದ ಕಿತ್ತಾಟದಿಂದ ದೇವಸ್ಥಾನಕ್ಕೆ ಬೀಗ ಹಾಕಿದ ವಿಚಿತ್ರ ಘಟನೆ ನಗರದಲ್ಲಿ ನಡೆದಿದೆ.
ನಗರದ ಗೋಳಗುಮ್ಮಟ ಬಳಿ ಇರುವ ಪ್ರತಿಷ್ಠಿತ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಮಾಡುವ ವಿಚಾರವಾಗಿ ಪೂಜಾರಿಗಳ ಎರಡು ಕುಟುಂಬಗಳ ಮಧ್ಯೆ ಭಿನ್ನಾಭಿಪ್ರಾಯ ಹಲವು ವರ್ಷಗಳಿಂದ ಇದೆ. ಇಂದು ಬೆಳಗ್ಗೆ ದೇವಸ್ಥಾನಕ್ಕೆ ಆಗಮಿಸಿದ್ದ ಎರಡು ಕುಟುಂಬಗಳ ಪೂಜಾರಿಗಳು ಪೂಜೆ ವಿಚಾರವಾಗಿ ಕಿತ್ತಾಡಿಕೊಂಡು ದೇವಸ್ಥಾನಕ್ಕೆ ಇಬ್ಬರು ಪ್ರತ್ಯೇಕವಾಗಿ ಬೀಗ ಜಡಿದು ಹೋಗಿದ್ದಾರೆ. ದೇವರ ದರ್ಶನಕ್ಕೆ ಆಗಮಿಸಿದ ಭಕ್ತರು ಇವರ ವರ್ತನೆಗೆ ಬೇಸತ್ತು ಗುಡಿಯಿಂದ ವಾಪಸಾಗಿದ್ದಾರೆ.
ಇದು ಜಿಲ್ಲೆಯ ಪ್ರತಿಷ್ಠಿತ ದೇವಸ್ಥಾನಗಳಲ್ಲಿ ಪವಾಡ ಬಸವೇಶ್ವರ ದೇವಸ್ಥಾನ ಸಹ ಒಂದಾಗಿದೆ. ಈ ದೇವಸ್ಥಾನಕ್ಕೆ ಚಿನ್ನಕಾಳಿಮಠ ಮತ್ತು ನಂದಿಕೋಲ ಎಂಬ ಕುಟುಂಬಸ್ಥರು ಪೂಜಾರಿಕೆ ಮಾಡಿಕೊಂಡು ಬರುತ್ತಿದ್ದಾರೆ. ಒಂದು ತಿಂಗಳ ಅವಧಿ ಬಳಿಕ ಇನ್ನೊಂದು ಕುಟುಂಬಕ್ಕೆ ಪೂಜೆಗೆ ಅವಕಾಶವನ್ನು ನಂದಿಕೋಲ ಕುಟುಂಬ ಮಾಡಿಕೊಡಬೇಕಾಗಿತ್ತು. ಆದರೆ, ಇದಕ್ಕೊಪ್ಪದ ಹಿನ್ನೆಲೆ ಬೆಳಗ್ಗೆ ಚಿನ್ನಕಾಳಿಮಠ ಹಾಗೂ ನಂದಿಕೋಲ ಕುಟುಂಬದವರು ಕಿತ್ತಾಡಿಕೊಂಡು ದೇವಸ್ಥಾನಕ್ಕೆ ಬೀಗ ಹಾಕಿದ್ದಾರೆ.
ಹೀಗೆ ಇಬ್ಬರು ಪೂಜಾರಿಗಳ ಮಧ್ಯೆ ದೇವರು ಬಡವಾದಂತಾಗಿದೆ. ಇಂದು ಪವಾಡ ಬಸವೇಶ್ವರನಿಗೆ ಪೂಜೆ ಭಾಗ್ಯ ದೊರೆತಿಲ್ಲ. ಸದ್ಯ ಈ ಪ್ರಕರಣ ಗೋಳಗುಮ್ಮಟ ಪೊಲೀಸ್ ಠಾಣೆ ಮೆಟ್ಟಿಲೇರಿದೆ.