ವಿಜಯಪುರ: ಮಹಾಮಾರಿ ಕೊರೊನಾ ಸೋಂಕು ತಡೆಯಲು ಲಾಕ್ಡೌನ್ ಮಾಡಿದ ಹಿನ್ನೆಲೆಯಲ್ಲಿ ನಿರ್ಗತಿಕರು, ಬಡ ಕಾರ್ಮಿಕರು ಉದ್ಯೋಗವಿಲ್ಲದೆ ಬೀದಿಪಾಲಾಗಿದ್ದಾರೆ. ಈ ವೇಳೆ ಸರ್ಕಾರ ಮಹತ್ವದ ಹೆಜ್ಜೆ ಇಟ್ಟು ಇಂದಿರಾ ಕ್ಯಾಂಟೀನ್ನಲ್ಲಿ ನಿರಾಶ್ರಿತರಿಗೆ, ಕಾರ್ಮಿಕರಿಗೆ ಉಚಿತ ಊಟದ ವ್ಯವಸ್ಥೆ ಮಾಡಿದ್ದು, ಸದ್ಯ ಬಡವರ ಪಾಲಿಗೆ ಇಂದಿರಾ ಕ್ಯಾಂಟೀನ್ ಅನ್ನ ದಾಸೋಹ ಕೇಂದ್ರವಾಗಿದೆ.
ವಿಜಯಪುರ ನಗರದಲ್ಲಿ ಇರುವ ನಾಲ್ಕು ಕ್ಯಾಂಟೀನ್ಗಳಲ್ಲಿ ಉಚಿತ ತಿಂಡಿ, ಊಟ ನೀಡುತ್ತಿರುವ ಕಾರಣ ನಿತ್ಯ 500ಕ್ಕೂ ಹೆಚ್ಚು ಬಡವರು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಆದರೆ ಇಂದಿರಾ ಕ್ಯಾಂಟೀನ್ ಗುತ್ತಿಗೆ ಪಡೆದವರಿಗೆ ಕಳೆದ 7 ತಿಂಗಳಿಂದ ಕ್ಯಾಂಟೀನ್ ಬಾಕಿ ಹಣ ಬರದಿದ್ದರೂ ಸಹ ಮಾನವೀಯತೆ ದೃಷ್ಟಿಯಿಂದ ಊಟ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿ ಹಲವು ವರ್ಷಗಳೇ ಕಳೆದಿವೆ. ಕೇವಲ 5 ರೂ.ಗೆ ತಿಂಡಿ, 10 ರೂ.ಗೆ ಊಟ ದೊರೆಯುತ್ತಿದ್ದರಿಂದ ಬಡ ಕಾರ್ಮಿಕರು ಕಡಿಮೆ ದರದಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆದರೆ ಲಾಕ್ಡೌನ್ ಜಾರಿ ಮಾಡಿದ ಕಾರಣ ದುಡಿಮೆಯಿಂದಲೇ ಬದುಕು ಸಾಗಿಸುತ್ತಿದ್ದ ಬಡ ಕಾರ್ಮಿಕ ಕುಟುಂಬಗಳು ಬೀದಿಪಾಲಾಗಿದ್ದವು. ಅಂಥವರಿಗೆ ಕೇವಲ ಪ್ಯಾಕೇಜ್ ಘೋಷಿಸಿದರೆ ಸಾಲದು ಎಂದು ಸರ್ಕಾರ ಇಂದಿರಾ ಕ್ಯಾಂಟೀನ್ ಬಳಸಿಕೊಂಡು ಬಡವರಿಗೆ ಊಟದ ವ್ಯವಸ್ಥೆ ಮಾಡಿದೆ. ಕಟ್ಟಡ ಕಾಮಗಾರಿಗೆ ಬಂದಿದ್ದ ಮಹಿಳೆಯೊಬ್ಬಳು ಕೆಲಸವಿಲ್ಲದೇ, ಊರಿಗೆ ಹೋಗದೇ, ಊಟವಿಲ್ಲದ ಪರದಾಡುತ್ತಿದ್ದಾಗ ಇದೇ ಕ್ಯಾಂಟೀನ್ ಅವರಿಗೆ ಸಹಾಯಕವಾಗಿದೆ.
ಇಂದಿರಾ ಕ್ಯಾಂಟೀನ್ ನಡೆಸುತ್ತಿರುವ ಗುತ್ತಿಗೆದಾರರರು ಮೊದಲು ಲಾಕ್ಡೌನ್ ಮಾಡಿದಾಗ ಕ್ಯಾಂಟೀನ್ ಮುಚ್ಚಬೇಕು ಎಂದು ಚಿಂತನೆ ನಡೆಸಿದ್ದರು. 7 ತಿಂಗಳಿಂದ ಕ್ಯಾಂಟೀನ್ ನಿರ್ವಹಣೆ ಹಣವನ್ನು ಸರ್ಕಾರ ಬಿಡುಗಡೆ ಮಾಡಿರಲಿಲ್ಲ. ಅದನ್ನು ಮರೆತು ಕ್ಯಾಂಟೀನ್ ಆರಂಭಿಸಿ ಬಡವರಿಗೆ ಈ ಮೂಲಕ ಸಹಾಯ ಮಾಡುತ್ತಿದ್ದಾರೆ. ಇವರಿಗೆ ಹಲವು ಸಂಘಟನೆಗಳು ಸಹ ಸಾಥ್ ನೀಡಿವೆ.
ಇಂದಿರಾ ಕ್ಯಾಂಟೀನ್ನಲ್ಲಿ ಊಟ ಪಾರ್ಸೆಲ್ ತೆಗೆದುಕೊಂಡು ಹೋಗಿ ಬಸ್ ನಿಲ್ದಾಣ, ರೈಲು ನಿಲ್ದಾಣದಲ್ಲಿ ಊಟವಿಲ್ಲದೇ ಪರದಾಡುತ್ತಿರುವ ಬಡವರಿಗೆ ನೀಡುತ್ತಿದ್ದಾರೆ. ಈ ಹಿಂದೆ ಕ್ಯಾಂಟೀನ್ಗೆ 250-300 ಜನ ಬರುತ್ತಿದ್ದರು. ಈಗ 500ಕ್ಕಿಂತ ಹೆಚ್ಚು ಜನ ಊಟಕ್ಕೆ ಬರುತ್ತಿದ್ದಾರೆ. ಎಷ್ಟೇ ಜನ ಬರಲಿ ಅವರಿಗೆ ಉಚಿತ ಊಟದ ವ್ಯವಸ್ಥೆ ಮಾಡುವುದಾಗಿ ಇಂದಿರಾ ಕ್ಯಾಂಟೀನ್ ವ್ಯವಸ್ಥಾಪಕ ಕೃಷ್ಣ ತಿಳಿಸಿದ್ದಾರೆ.