ಮುದ್ದೇಬಿಹಾಳ: ಯಡಿಯೂರಪ್ಪನವರನ್ನು ಭೇಟಿಯಾದಾಗ ನಿಮಗೆ ಒಳ್ಳೆಯ ದಿನಗಳು ಬರಲಿವೆ ಕಾಯಿರಿ ಎಂದು ಹೇಳಿದ್ದರು. ಆದರೆ ಆರು ತಿಂಗಳು ಕಳೆದರೂ ನಮಗೆ ಇನ್ನೂ ಒಳ್ಳೆಯ ದಿನಗಳು ಬಂದಿಲ್ಲವೇ ಎಂದು ಶಾಮೀಯಾನ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಶಿವಕುಮಾರ ಹಿರೇಮಠ ಪ್ರಶ್ನಿಸಿದರು.
ಪಟ್ಟಣದ ಹುಡ್ಕೋದ ಸಭಾಭವನದ ಕಬೀರ್ ಹುಸೇನ್ ವೇದಿಕೆಯಲ್ಲಿ ಬುಧವಾರ ಬಿಜಾಪುರ ಜಿಲ್ಲಾ ಮಂಟಪ, ಮೈಕ್ ಲೈಟ್ ಮತ್ತು ಫ್ಲವರ್ ಡೆಕೊರೇಟರ್ಸ್ ಮಾಲೀಕರ ಸಂಘದ ವತಿಯಿಂದ 23ನೇ ವಾರ್ಷಿಕ ಸ್ನೇಹ ಸಮ್ಮೇಳನ-2020 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನಪ್ರತಿನಿಧಿಗಳು ಹೇಳಿದಂತೆ ನಾವು ಕೆಲಸ ಮಾಡುತ್ತೇವೆ. ಆದರೆ ನಮ್ಮ ಕಷ್ಟಕ್ಕೆ ಸ್ಪಂದಿಸದೇ ಇರುವುದರಿಂದ ಸಮಸ್ಯೆ ಎದುರಿಸುವಂತಾಗಿದೆ. ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಬಿಟ್ಟರೆ ಇನ್ನುಳಿದ ಜನಪ್ರತಿನಿಧಿಗಳು ಶಾಮೀಯಾನ ಕಾರ್ಮಿಕರ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿಲ್ಲ. ಸರ್ಕಾರ ಅನುಮತಿ ನೀಡಲಿ ಬಿಡಲಿ ಯುಗಾದಿ ದಿನದಿಂದ ಸಾರ್ವಜನಿಕ ಕಾರ್ಯಕ್ರಮಗಳಿಗೆ ಮಂಟಪದ ಸೇವೆ ನೀಡುವ ಕಾರ್ಯವನ್ನು ಆರಂಭಿಸುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಆಹಾರ ಪೂರೈಕೆ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ಕೊರೊನಾ ಸಂಕಷ್ಟದ ಮಧ್ಯೆಯೂ ದೇಶದ ಜಿಎಸ್ಟಿ ಸಂಗ್ರಹ ಒಂದು ಲಕ್ಷ ಕೋಟಿ ರೂ.ಗಳಿಗೇರಿದೆ. ರೈತರನ್ನು ಸಬಲಗೊಳಿಸುವ ಕಾರ್ಯದಲ್ಲಿ ನಾನು ತೊಡಗಿಕೊಂಡಿದ್ದೇನೆ. ನಿಮ್ಮ ಸಮಸ್ಯೆಗಳಿಗೆ ಧ್ವನಿಯಾಗುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.