ಕಾರವಾರ: ಅವಧಿ ಮುಗಿದ ಬಳಿಕವೂ ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯರ ಮೀನು ಬುಟ್ಟಿ ಕಸಿದುಕೊಂಡ ನಗರಸಭೆ ಸಿಬ್ಬಂದಿ ಮೀನಗಳನ್ನು ರಸ್ತೆಗೆ ಚೆಲ್ಲಿರುವ ಘಟನೆ ಕಾರವಾರದಲ್ಲಿ ನಡೆದಿದೆ.
ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ನಗರದ ಮುಖ್ಯ ಮೀನು ಮಾರುಕಟ್ಟೆ ಬಂದ್ ಮಾಡಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಇವರು ಮೀನು ಮಾರಾಟ ಮಾಡುತ್ತಿದ್ದರು. ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ 10 ಗಂಟೆಯವರೆಗೆ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಆದ್ರೆ ಇಂದು ಅವಧಿ ಮುಗಿದರೂ ಕೆಲ ಮೀನುಗಾರ ಮಹಿಳೆಯರು ನಗರದ ಆಯುಷ್ ಆಸ್ಪತ್ರೆ ಎದುರು ಮೀನು ಮಾರಾಟ ಮಾಡತೊಡಗಿದ್ದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ನಗರಸಭೆ ಸಿಬ್ಬಂದಿ ನಿಲೇಶ್ ಎಂಬುವವರು ಬಂದ್ ಮಾಡುವಂತೆ ಎಚ್ಚರಿಸುವ ಬದಲು ಮೀನುಗಾರ ಮಹಿಳೆಯರು ವ್ಯಾಪಾರಕ್ಕೆ ತಂದಿದ್ದ ಮೀನುಗಳನ್ನು ರಸ್ತೆಗೆ ಎಸೆದು ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಮೀನು ಮಾರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗವಿಮಠದ ಹಾಸ್ಟೆಲ್ನಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲು ಒಪ್ಪಿಗೆ
ಪೊಲೀಸರ ಎದುರು ನಗರಸಭೆ ಸಿಬ್ಬಂದಿ ಈ ರೀತಿ ದರ್ಪ ತೋರಿದ್ದಾರೆ. ನಾವು ಸಾವಿರಾರು ರೂ. ವ್ಯಯಿಸಿ ಮೀನು ತಂದು ಮಾರಾಟ ಮಾಡುತ್ತೇವೆ. ಬಂದ್ ಮಾಡಿ ಮನೆಗೆ ತೆರಳಲು ಬುಟ್ಟಿ ಬದಿಗೆ ಇಟ್ಟಿದ್ದನ್ನು ಎಳೆದು ಚೆಲ್ಲಿದ್ದಾರೆ ಎಂದು ಮೀನು ಮಾರಾಟಗಾರರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.