ಕಾರವಾರ: ರಸ್ತೆ ಬದಿಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಹಣ್ಣಿನ ಮಾರಾಟಗಾರರು ಹಾಗೂ ನಗರಸಭೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ನಗರದ ಕೋರ್ಟ್ ಹಿಂಬದಿ ರಸ್ತೆಯಲ್ಲಿ ಹಿಂದಿನಿಂದಲೂ ಹಣ್ಣಿನ ವ್ಯಾಪಾರಸ್ಥರು ರಸ್ತೆ ಬದಿಯಲ್ಲಿ ಗಾಡಿಗಳಲ್ಲಿ ಹಣ್ಣುಗಳನ್ನ ಇರಿಸಿ ಮಾರಾಟ ಮಾಡುತ್ತಿದ್ದರು. ಇದೀಗ ಲಾಕ್ಡೌನ್ ಹಿನ್ನೆಲೆ ಹಣ್ಣಿನ ವ್ಯಾಪಾರಕ್ಕೆ ಬೇರೆಡೆ ಸ್ಥಳಾವಕಾಶ ನೀಡಿದ್ದು, ಅಲ್ಲಿಯೇ ಮಾರಾಟ ಮಾಡುವಂತೆ ನಗರಸಭೆ ಸೂಚನೆ ನೀಡಿತ್ತು. ಆದರೆ ಅಲ್ಲಿ ವ್ಯಾಪಾರವಾಗದಿರುವುದರಿಂದ ಮೊದಲಿನ ಸ್ಥಳದಲ್ಲೇ, ರಸ್ತೆ ಬದಿಯಲ್ಲಿ ಕುಳಿತು ವ್ಯಾಪಾರಸ್ಥರು ವ್ಯಾಪಾರ ಮಾಡಲು ಮುಂದಾಗಿದ್ದು ಈ ವೇಳೆ ನಗರಸಭೆ ಅಧಿಕಾರಿಗಳು ಮಾರಾಟಗಾರರ ತಕ್ಕಡಿಯನ್ನ ಕಸಿದುಕೊಂಡು ಹೋಗಿದ್ದು ವ್ಯಾಪಾರಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು.
ತರಕಾರಿ ವ್ಯಾಪಾರಕ್ಕೆ ರಸ್ತೆ ಬದಿಯಲ್ಲಿ ಅವಕಾಶ ನೀಡಿದ್ದು, ಹಣ್ಣಿನ ವ್ಯಾಪಾರಸ್ಥರಿಗೆ ಮಾತ್ರ ಅನಾನುಕೂಲವಾಗುವಂತೆ ಮಾಡಿದ್ದಾರೆ ಎಂದು ವ್ಯಾಪಾರಸ್ಥರು ಆರೋಪಿಸಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಕಾರವಾರ ಉಪವಿಭಾಗಾಧಿಕಾರಿ ಪ್ರಿಯಾಂಕ.ಎಂ ಕೊರೊನಾದಂಥ ಸಂದಿಗ್ಧ ಸ್ಥಿತಿಯಲ್ಲಿ ಎಲ್ಲೆಂದರಲ್ಲಿ ವ್ಯಾಪಾರ ಮಾಡಲು ಅವಕಾಶವಿಲ್ಲ. ಈಗಾಗಲೇ ಮಾರ್ಕಿಂಗ್ ಮಾಡಿದ್ದು, ಅಲ್ಲಿಯೇ ಮಾರಾಟ ಮಾಡುವಂತೆ ಸೂಚಿಸಿದರು.