ತುಮಕೂರು : ಅಪರಿಚಿತ ವ್ಯಕ್ತಿಯೊಬ್ಬ ಉಸಿರಾಟದ ತೊಂದರೆಯಿಂದ ಬೀದಿಯಲ್ಲಿ ಬಿದ್ದು ನರಳುತ್ತಿದ್ದುದನ್ನು ಕಂಡು ಸಾರ್ವಜನಿಕರು ಕೆಲಕಾಲ ಗಾಬರಿಗೊಂಡ ಘಟನೆ ತುರುವೇಕೆರೆ ತಾಲೂಕಿನ ದಂಡಿನ ಶಿವರದಲ್ಲಿ ನಡೆದಿದೆ.
ಕೊರೊನಾ ಭೀತಿ ಹಿನ್ನೆಲೆ ಜನರು ವ್ಯಕ್ತಿಯ ಸಮೀಪ ಹೋಗಿ ಪೂರ್ವಾಪರ ವಿಚಾರಿಸಲು ಹಿಂದೇಟು ಹಾಕಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದರು. ಆದರೆ, ಸುಮಾರು ಎರಡು ಗಂಟೆಯ ಬಳಿಕ ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಬಂದು ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಈ ವ್ಯಕ್ತಿ ಹಲವು ದಿನಗಳಿಂದ ದಂಡಿನಶಿವರ ಸುತ್ತಮುತ್ತ ಓಡಾಡಿಕೊಂಡಿದ್ದ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ವ್ಯಕ್ತಿ ರಸ್ತೆ ಮಧ್ಯೆ ನರಳುತ್ತಿದ್ದರೂ ತಕ್ಷಣ ಆಗಮಿಸದಿರುವುದಕ್ಕೆ ಆರೋಗ್ಯ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.