ಶಿವಮೊಗ್ಗ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಬರಲು ಇನ್ನೂ ಒಂದೂವರೆ ವರ್ಷಕ್ಕಿಂತಲೂ ಹೆಚ್ಚಿನ ಕಾಲಾವಕಾಶವಿದೆ. ಆದರೆ, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಚುನಾವಣಾ ಕಾವು ಈಗಿನಿಂದಲೇ ಆರಂಭಗೊಂಡಿದೆ. ಕಾಂಗ್ರೆಸ್ ಟಿಕೆಟ್ಗಾಗಿ ನಾಯಕರುಗಳು ಈಗಾಗಲೇ ಪೈಪೋಟಿ ಆರಂಭಿಸಿದ್ದಾರೆ.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಇದೀಗ ಕಾಂಗ್ರೆಸ್ಗೆ ಸೇರ್ಪಡೆಗೊಂಡಿರುವ ಆರ್ ಎಂ ಮಂಜುನಾಥ ಗೌಡ ಈಗಿನಿಂದಲೇ ಟಿಕೆಟ್ ಪಡೆಯಲು ಹರಸಾಹಸ ಆರಂಭಿಸಿದ್ದಾರೆ. ಇದು ಉಭಯ ನಾಯಕರ ವಾಕ್ಸಮರಕ್ಕೂ ಕಾರಣವಾಗಿದೆ. ತೀರ್ಥಹಳ್ಳಿ ಕಾಂಗ್ರೆಸ್ನಲ್ಲಿ ಭಿನ್ನಮತ ಭುಗಿಲೆದ್ದಿದೆ.
ಈ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ತೀರ್ಥಹಳ್ಳಿ ಕ್ಷೇತ್ರದಲ್ಲಿ ಕಿಮ್ಮನೆ ರತ್ನಾಕರ್ ಸ್ಪರ್ಧಿಸುತ್ತಿದ್ದಾರೆ. ಆದರೆ, ಇದೀಗ ಜೆಡಿಎಸ್ ತೊರೆದ ಆರ್ ಎಂ ಮಂಜುನಾಥ ಗೌಡ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಈ ಇಬ್ಬರು ನಾಯಕರು ಮುಂಬರುವ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ, ಇಬ್ಬರು ನಾಯಕರು ಈಗಿನಿಂದಲೇ ತೀರ್ಥಹಳ್ಳಿ ಕ್ಷೇತ್ರದಲ್ಲಿ ಪಾದಯಾತ್ರೆ ಹಾಗೂ ಹೋರಾಟಗಳನ್ನು ಆರಂಭಿಸಿದ್ದಾರೆ.

ನೆಟ್ವರ್ಕ್ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಕಿಮ್ಮನೆ ರತ್ನಾಕರ್ ಪಾದಯಾತ್ರೆ ನಡೆಸಿದ ಬೆನ್ನಲ್ಲೇ, ಶರಾವತಿ ಮುಳುಗಡೆ ರೈತರ ಸಮಸ್ಯೆ ಪರಿಹರಿಸುವಂತೆ ಆರ್ ಎಂ ಮಂಜುನಾಥ ಗೌಡ ಪಾದಯಾತ್ರೆ ಆರಂಭಿಸಿದ್ದಾರೆ. ಈ ಮೂಲಕ ಇಬ್ಬರು ನಾಯಕರೂ ತಮ್ಮ ಬಲ ಪ್ರದರ್ಶನ ಆರಂಭಿಸಿದ್ದಾರೆ.
ಈ ನಡುವೆ ಮಾಧ್ಯಮಗಳಿಗೆ ಪತ್ರ ಬರೆದಿರುವ ಕಿಮ್ಮನೆ ರತ್ನಾಕರ್ ಅವರು, ಸ್ವಹಿತಾಸಕ್ತಿಗಾಗಿ ಮಂಜುನಾಥ ಗೌಡ ಪಾದಯಾತ್ರೆ ನಡೆಸುತ್ತಿದ್ದಾರೆ. ಅವರು ಹೀಗೆ ಮಾಡುವುದು ಕಾಂಗ್ರೆಸ್ಗೆ ನಷ್ಟವನ್ನುಂಟು ಮಾಡುತ್ತದೆ.
ಅವರು ಹೀಗೆ ಮಾಡಿದರೆ ಅವರನ್ನು ಕಾಂಗ್ರೆಸ್ ಪಕ್ಷದಿಂದ ಹೊರ ಹಾಕುವುದು ಅನಿವಾರ್ಯವಾಗಬಹುದು ಎಂದು ಹೇಳಿದ್ದಾರೆ. ಈ ಪತ್ರ ಇದೀಗ ಇಬ್ಬರು ನಾಯಕರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.
ಆರ್.ಎಂ.ಮಂಜುನಾಥ ಗೌಡ ಅವರ ವಿರುದ್ಧ ಕಿಮ್ಮನೆ ರತ್ನಾಕರ್ ಪತ್ರ ಬರೆಯುತ್ತಿದ್ದಂತೆ, ಕಿಮ್ಮನೆ ವಿರುದ್ಧ ಮಂಜುನಾಥ ಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಿಮ್ಮನೆ ರತ್ನಾಕರ್ ಅವರಿಗೆ ನನ್ನ ಮೇಲಿನ ಪ್ರೀತಿಯಿಂದಾಗಿ ಆಗಾಗ ಪತ್ರ, ಲವ್ ಲೆಟರ್ ಬರೆಯುತ್ತಿರುತ್ತಾರೆ. ನನಗಿಂತ ಹಿರಿಯರಿದ್ದಾರೆ ಅವರು. ನಾನು ಹೋರಾಟದ ಬಗ್ಗೆ ಯೋಚನೆ ಮಾಡುತ್ತಿದ್ದೇನೆಯೇ ಹೊರತು ಪಕ್ಷದ ಸ್ಥಾನಮಾನಗಳಿಗಾಗಿ ಅಲ್ಲ.
ನಾನು 2001ರಲ್ಲಿ ಕಾಂಗ್ರೆಸ್ ಸೇರಿ 2004ರವರೆಗೆ ಕಾಂಗ್ರೆಸ್ಗಾಗಿ ದುಡಿದಿದ್ದೇನೆ. 2004ರ ಚುನಾವಣೆಯಲ್ಲಿ ನಾನು ಕಿಮ್ಮನೆ ರತ್ನಾಕರ್ ಅವರ ಪರವಾಗಿ ಪ್ರಚಾರ ಮಾಡಿದ್ದೆ. ಆದರೆ, ಅವರು ಆ ಚುನಾವಣೆಯಲ್ಲಿ ಸೋತರು. ಅದಕ್ಕೆ ನಾನೇನು ಮಾಡಲು ಸಾಧ್ಯ.
2008ರ ಚುನಾವಣೆಯಲ್ಲೂ ನಾನು ಅವರ ಪರವಾಗಿ ಚುನಾವಣೆ ನಡೆಸಿದ್ದೆ. ಆಗ ಕಿಮ್ಮನೆ ರತ್ನಾಕರ್ ಗೆದ್ದರು. ಬಳಿಕ ನಾನು ಕಾಂಗ್ರೆಸ್ ಬಿಟ್ಟಿದ್ದೆ. ಈಗ ನಾನು ಪಕ್ಷದ ಟಿಕೆಟ್ಗಾಗಿ ಹೋರಾಟ ಮಾಡುತ್ತಿಲ್ಲ. ಬದಲಿಗೆ ಜನಪರವಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ಮಂಜುನಾಥ ಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸಭಾ ಚುನಾವಣೆಗೆ ಇನ್ನು ಒಂದೂವರೆ ವರ್ಷಕ್ಕಿಂತ ಹೆಚ್ಚು ಸಮಯ ಇರುವ ಮುನ್ನವೇ ತೀರ್ಥಹಳ್ಳಿ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಕಿಮ್ಮನೆ ಬಣ ಹಾಗೂ ಮಂಜುನಾಥ ಗೌಡ ಬಣಗಳು ಹುಟ್ಟಿಕೊಂಡಿವೆ. ಈ ಸಮಸ್ಯೆ ಪರಿಹಾರವಾಗದೇ ಇದ್ದಲ್ಲಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಭಾರಿ ನಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ.