ಶಿವಮೊಗ್ಗ: ಶಿವಮೊಗ್ಗದ ಗೆಜ್ಜೆನಹಳ್ಳಿ ಗ್ರಾಮದಲ್ಲಿ ಅಪರೂಪದ ಮಣ್ಣುಮುಕ್ಕ ಹಾವು (sandbow) ಪತ್ತೆಯಾಗಿದೆ. ಗೆಜ್ಜೆನಹಳ್ಳಿ ಗ್ರಾಮದ ವಿಜಯ್ ನಾಯ್ಕ ಎಂಬುವರ ಜಮೀನಿನಲ್ಲಿ ಮಣ್ಣುಮುಕ್ಕ ಹಾವು ಪತ್ತೆಯಾಗಿದೆ. ಇದನ್ನು ನೋಡಿದ ವಿಜಯ ನಾಯ್ಕ ಅವರು ತಕ್ಷಣ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ.
ತಕ್ಷಣ ಸ್ಥಳಕ್ಕೆ ಬಂದ ಸ್ನೇಕ್ ಕಿರಣ್ ಮಣ್ಣುಮುಕ್ಕ ಹಾವನ್ನು ಸೆರೆ ಹಿಡಿದಿದ್ದಾರೆ. ಹಾವು ಸುಮಾರು 3.5 ಅಡಿ ಉದ್ದವಿದೆ. ಸುಮಾರು 3 ಕೆಜಿಯಷ್ಟು ತೂಕವಿದೆ. ಈ ಹಾವನ್ನು ಎರಡು ತಲೆ ಹಾವು ಎಂದು ಕರೆಯುತ್ತಾರೆ. ಇವು ಹೆಚ್ಚಾಗಿ ಮಣ್ಣಿನಲ್ಲಿಯೇ ವಾಸವಾಗಿರುತ್ತವೆ. ಮಣ್ಣಿನಲ್ಲಿ ಇರುವ ಹುಳ, ಕಪ್ಪೆ ಸೇರಿದಂತೆ ಇತರೆ ಸಣ್ಣಪುಟ್ಟ ಹುಳಗಳನ್ನು ತಿಂದು ಇವು ಬದುಕುತ್ತವೆ.
ಇದು ವಿಷಕಾರಿ ಅಲ್ಲದ ಹಾವು. ಇದನ್ನು ಹಣ ಗಳಿಕೆಗಾಗಿ ಹಾಗೂ ವಾಮಾಚಾರಕ್ಕೆ ಬಳಕೆ ಮಾಡುತ್ತಾರೆ. ಇದರ ಮಾರಾಟ ನಿಷೇಧವಾಗಿದ್ದು, ಮಾರಾಟ ಮಾಡುವವರ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸಲಾಗುತ್ತದೆ. ಈ ಹಾವನ್ನು ನಂತರ ಸೆರೆ ಹಿಡಿದು ಸುರಕ್ಷಿತವಾಗಿ ಶಂಕರ ವಲಯದ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಕಾಡಿಗೆ ಬಿಡಲಾಯಿತು.
ಓದಿ: ಮದುವೆಯಾಗಿಲ್ಲವೆಂದು ಮನನೊಂದ ಯುವತಿ, ಡೆತ್ ನೋಟ್ ಬರೆದು ಆತ್ಮಹತ್ಯೆ