ರಾಮನಗರ: ನಗರ ಪ್ರದೇಶದಲ್ಲೇ ಪ್ರತ್ಯಕ್ಷವಾದ ಕರಡಿಯೊಂದು ಮಹಿಳೆ ಸೇರಿ ಇಬ್ಬರ ಮೇಲೆ ಗಂಭೀರವಾಗಿ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ, ಚನ್ನಪಟ್ಟಣ ನಗರದ ಎಂ.ಜಿ ರಸ್ತೆಯ ಸುಣ್ಣದಕೇರಿಯಲ್ಲಿ ನಡೆದಿದೆ.
ನಗರಸಭಾ ಮಾಜಿ ಉಪಾಧ್ಯಕ್ಷೆ ಸಾಕಮ್ಮ (65), ಈಕೆಯ ಮಗ ಸುಧೀರ್ (40) ಗಾಯಗೊಂಡವರು. ಇಲ್ಲಿನ ಎಂ.ಜಿ ರಸ್ತೆಯ ಸುಣ್ಣದಕೇರಿಯಲ್ಲಿ ಮುಂಜಾನೆ ಕರಡಿಯೊಂದು ಪ್ರತ್ಯಕ್ಷವಾಗಿದೆ. ಮನೆಯಿಂದ ತಾಯಿ ಮತ್ತು ಮಗ ಹೊರಬರುತ್ತಿದ್ದಂತೆಯೇ ಇಬ್ಬರ ಮೇಲೆ ಎರಗಿ ದಾಳಿ ಮಾಡಿದೆ. ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಸಾಕಮ್ಮರ ಸ್ಥತಿ ಚಿಂತಾಜನಕವಾಗಿದೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಸಾಕಮ್ಮರನ್ನು ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಮಗ ಸುಧೀರ್ ಚನ್ನಪಟ್ಟಣದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
ಸಾರ್ವಜನಿಕರಲ್ಲಿ ಹೆಚ್ಚಾಯ್ತು ಆತಂಕ :
ನಗರದ ಮಧ್ಯಭಾಗದಲ್ಲಿ ಕರಡಿ ಕಾಣಿಸಿಕೊಂಡಿರುವ ಹಿನ್ನೆಲೆ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಮಾಗಡಿಯಲ್ಲಿನರಭಕ್ಷಕ ಚಿರತೆ ಇಬ್ಬರನ್ನ ಬಲಿ ಪಡೆದಿದ್ದ ಘಟನೆ ಮಾಸುವ ಮುನ್ನವೇ ಚನ್ನಪಟ್ಟಣದಲ್ಲಿ ಕರಡಿ ದಾಳಿ ಜನರನ್ನು ಬೆಚ್ಚಿ ಬೀಳಿಸಿದೆ. ಅರಣ್ಯ ಇಲಾಖೆ ಕೂಡಲೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.