ಮೈಸೂರು: ಪರಿಸರ ಹಾಗೂ ಹವಾಮಾನ ಬದಲಾವಣೆ ವ್ಯತ್ಯಾಸಕ್ಕೆ ನಾವೇ ಕಾರಣವಾಗುತ್ತಿದ್ದೇವೆ. ಮುಂದಿನ ಪೀಳಿಗೆಗೆ ಪರಿಸರ ಉಳಿಸುವೆಡೆಗೆ ಗಮನ ಹರಿಸುವುದರ ಜೊತೆಗೆ ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಯದುವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದರು.
ಯುವ ಬ್ರಿಗೇಡ್ನಿಂದ ಮೈಸೂರಿನ ಕುವೆಂಪು ನಗರದಲ್ಲಿರುವ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ 125 ನೇ ಜಯಂತಿ ನಿಮಿತ್ತ ಏರ್ಪಡಿಸಿದ್ದ 'ಬ್ಲಡ್ ಅಂಡ್ ಫ್ರೀಡಂ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾವು ಮತ್ತೆ ಸುವರ್ಣಯುಗ ನೋಡಬೇಕೆಂಬ ಇಚ್ಛೆ ಇದ್ದರೆ ಪ್ರಕೃತಿಯನ್ನು ಸ್ವಚ್ಛವಾಗಿಡಬೇಕು ಎಂದು ಸಲಹೆ ನೀಡಿದರು.
ಸ್ವಚ್ಛತೆಯ ಪಾಠ ಮನೆಯಿಂದಲೇ ಆರಂಭವಾಗಬೇಕು ಆಗ ಮಾತ್ರ ಅದು ಸಾಮಾಜಿಕ ಪ್ರಜ್ಞೆಯಾಗುತ್ತದೆ ಎಂದು ಹೇಳಿದರು.
ನಂತರ ಗಣಪತಿ ಸಚ್ಚಿದಾನಂದ ಆಶ್ರಮದ ದತ್ತ ವಿಜಯಾನಂದ ಸ್ವಾಮೀಜಿ ಮಾತನಾಡಿ, ಶಾಲೆಗಳಲ್ಲಿ ಮಕ್ಕಳಿಗೆ ಕೇವಲ ಪಾಠ ಪ್ರವಚನ ಮಾತ್ರವಲ್ಲದೇ ದೇಶಭಕ್ತಿಯ ಬೋಧನೆಯಾಗಬೇಕು. ಇಂತಹ ದಿನಗಳ ಆಚರಣೆಯಿಂದಾಗಿ ದೇಶಕ್ಕೆ ತ್ಯಾಗ ಬಲಿದಾನ ಮಾಡಿದವರ ಬಗ್ಗೆ ಇನ್ನಷ್ಟು ತಿಳಿಯುತ್ತೇವೆ ಎಂದು ಹೇಳಿದರು.