ಮೈಸೂರು: ಮಕ್ಕಳು, ವೃದ್ಧರು ಬಿಸಿಲು, ಮಳೆ ಎನ್ನದೇ ಸರತಿ ಸಾಲಲ್ಲಿ ನಿಂತು ರಾತ್ರಿ, ಹಗಲು ಎನ್ನದೆ ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಕಾಯುತ್ತ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿರುವ ದೃಶ್ಯ ನಂಜನಗೂಡಿನಲ್ಲಿ ಕಂಡುಬಂತು.
ಕಳೆದ 15 ದಿನಗಳಿಂದ ಜನರು ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಸಾಲುಗಟ್ಟಿ ನಿಂತಿರುವುದು ಇಲ್ಲಿನ ನಂಜನಗೂಡು ಪಟ್ಟಣದಲ್ಲಿ. ಆಧಾರ್ ಕಾರ್ಡ್ನಲ್ಲಿನ ಲೋಷದೋಷಗಳನ್ನು ಸರಿಪಡಿಕೊಳ್ಳಲು ಕೆನರಾ ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್ ಎದುರು ಕಾಯುತ್ತಿದ್ದಾರೆ.
ದಿನಕ್ಕೆ 15 ಜನರ ಆಧಾರ್ ಕಾರ್ಡ್ ಅನ್ನು ಮಾತ್ರ ತಿದ್ದುಪಡಿ ಮಾಡಲಾಗುತ್ತಿರುವುದರಿಂದ ಜನದಟ್ಟನೆ ಹೆಚ್ಚಾಗುತ್ತಿದೆ. ಕೂಲಿ ಕಾರ್ಮಿಕರು, ದಿನಗೂಲಿ ನೌಕರರು ತಮ್ಮ ನಿತ್ಯ ಕಾಯಕ ಬಿಟ್ಟು ಹೀಗೆ ಸಾಲಲ್ಲಿ ನಿಲ್ಲುವುದು ಅನಿವಾರ್ಯವಾಗಿದೆ. ಇದು ಅವರ ಆದಾಯಕ್ಕೂ ಕತ್ತರಿಯಾಗಿರುವುದು ಇನ್ನೊಂದು ಬೇಸರದ ಸಂಗತಿ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂಬುದು ಜನಗಳ ಒತ್ತಾಯ.