ಮೈಸೂರು: ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮೈಸೂರನ್ನು ಮತ್ತೆ ಸ್ವಚ್ಛ ನಗರವನ್ನಾಗಿ ಮಾಡಲು ಮತ್ತು ಸ್ವಚ್ಛ ನಗರಿ ಪ್ರಶಸ್ತಿಯನ್ನು ಪಡೆಯಲು ಖ್ಯಾತ ನಟ ಮಂಡ್ಯ ರಮೇಶ್ ಅವರನ್ನು ಸ್ವಚ್ಛತಾ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ನಟ ಮಂಡ್ಯ ರಮೇಶ್ ಪಾಲಿಕೆಯ ಈ ಆಹ್ವಾನವನ್ನು ಒಪ್ಪಿಕೊಂಡಿದ್ದಾರೆ.
ಪಾರಂಪರಿಕ ನಗರಿ ಮೈಸೂರು ಕಳೆದ ಕೆಲವು ವರ್ಷಗಳ ಹಿಂದೆ ಭಾರತದ ಸ್ವಚ್ಛ ನಗರಗಳ ಪೈಕಿ ಪ್ರಥಮ ಸ್ಥಾನದಲ್ಲಿತ್ತು. 2015 ಮತ್ತು 2016 ರಲ್ಲಿ ಸತತ ಎರಡು ಬಾರಿ ಸ್ವಚ್ಛತಾ ನಗರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಆದರೆ ನಂತರದ ವರ್ಷಗಳಲ್ಲಿ ಮೈಸೂರಿಗೆ ಪ್ರಶಸ್ತಿ ಸಿಗದೇ ನಿರಾಸೆಯಾಗಿತ್ತು. 2022 ರಲ್ಲಿ ಸ್ವಚ್ಛ ನಗರಗಳ ಪೈಕಿ 8ನೇ ಸ್ಥಾನ ಪಡೆದಿತ್ತು.

ನಂಬರ್ 1 ಸ್ಥಾನ ಪಡೆಯಲು ಕಸರತ್ತು: ಎರಡು ಬಾರಿ ಪ್ರಥಮ ಸ್ಥಾನ ಪಡೆದಿದ್ದ ಮೈಸೂರು ಜಿಲ್ಲೆಗೆ ಇತ್ತೀಚಿನ ವರ್ಷಗಳಲ್ಲಿ ಆ ಸ್ಥಾನ ಕೈ ತಪ್ಪುತ್ತಿದೆ. ಮತ್ತೆ ಹೇಗಾದರೂ ಮಾಡಿ ಸ್ವಚ್ಛ ನಗರಗಳಲ್ಲಿ ಮೊದಲ ಸ್ಥಾನ ಪಡೆಯಲೇಬೇಕೆಂದು ಮೈಸೂರು ಮಹಾನಗರ ಪಾಲಿಕೆ ಪಣತೊಟ್ಟಿದೆ. ಆದ್ದರಿಂದ ಮಹಾನಗರ ಪಾಲಿಕೆಯಿಂದ ಸ್ವಚ್ಛತಾ ರಾಯಭಾರಿಯನ್ನು ಆಯ್ಕೆ ಮಾಡಲು ಮುಂದಾಗಿದ್ದು, ಇದರಿಂದ ಪ್ರಶಸ್ತಿ ಪಡೆಯಲೇಬೇಕೆಂಬ ಹಠಕ್ಕೆ ಬಿದ್ದಿದೆ.
ಇದನ್ನೂ ಓದಿ: ನಾಡಹಬ್ಬ ದಸರಾ ಉದ್ಘಾಟಿಸಲಿರುವ ಹಂಸಲೇಖ: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ
ಮಂಡ್ಯ ರಮೇಶ್ ಸ್ವಚ್ಛತಾ ರಾಯಭಾರಿ: ಮೈಸೂರು ನಗರವನ್ನು ಮತ್ತೆ ಸ್ವಚ್ಛ ನಗರಗಳ ಪೈಕಿ ಮೊದಲ ಸ್ಥಾನಕ್ಕೇರಿಸಲು ಮೈಸೂರು ಮಹಾನಗರ ಪಾಲಿಕೆ ಸರ್ವ ಪ್ರಯತ್ನ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವಚ್ಛತಾ ರಾಯಭಾರಿಯನ್ನು ನೇಮಿಸಲು ಮುಂದಾಗಿದೆ. ಇದಕ್ಕಾಗಿ ಖ್ಯಾತ ನಟ ಮಂಡ್ಯ ರಮೇಶ್ ಅವರನ್ನು ಸ್ವಚ್ಛತಾ ರಾಯಭಾರಿಯಾಗಿ ಆಯ್ಕೆ ಮಾಡಲು ಪಾಲಿಕೆ ವತಿಯಿಂದ ಆಹ್ವಾನ ನೀಡಲಾಗಿತ್ತು. ಪಾಲಿಕೆ ಆಹ್ವಾನವನ್ನು ಮಂಡ್ಯ ರಮೇಶ್ ಅವರು ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸುವ ಭರವಸೆಯನ್ನು ಕೂಡ ಅವರು ನೀಡಿದ್ದಾರೆ.
'ಮೈಸೂರು ಸ್ವಚ್ಛ ನಗರ' ಎಂದು ಮತ ನೀಡಿ.. ಈ ಬಗ್ಗೆ ಮಾತನಾಡಿದ ನಟ ಮಂಡ್ಯ ರಮೇಶ್, "ಮೈಸೂರು ಅಂದ್ರೆ ನಿಮಗೂ ಇಷ್ಟ, ನನಗೂ ಇಷ್ಟ, ಎಲ್ಲರಿಗೂ ಇಷ್ಟ. ಮೈಸೂರು ಪರಂಪರೆಯ ಕಾರಣಕ್ಕಾಗಿ, ಅದಕ್ಕಿರುವ ಸ್ವಚ್ಛ ಸುಂದರ ಕಾರಣಕ್ಕಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಮೈಸೂರಿನ ಹೆಸರು ಹೇಳಿದರೆ ಒಮ್ಮೆ ಹುಬ್ಬೇರಿಸುತ್ತಾರೆ. ಎಲ್ಲರೂ ಮೈಸೂರು ನಗರಕ್ಕೆ ಸ್ವಚ್ಛ ನಗರ ಎಂಬ ಮತ ನೀಡಿ" ಎಂದು ಜನರಲ್ಲಿ ಕೋರಿದರು.
ಇದನ್ನೂ ಓದಿ: ರಾಷ್ಟ್ರೀಯ ಸ್ಮಾರ್ಟ್ ಸಿಟಿ ಪ್ರಶಸ್ತಿ: ಕರ್ನಾಟಕದ ಈ 3 ನಗರಗಳು ಆಯ್ಕೆ