ಗಂಗಾವತಿ: ಕೊರೊನಾ ಸೋಂಕಿನಿಂದ ಮೃತಪಟ್ಟ ಬಿಜೆಪಿ ಹಿರಿಯ ಮುಖಂಡ ಸೋಮಶೇಖರಗೌಡ ಅವರ ಅಂತ್ಯಕ್ರಿಯೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆ ಸದಸ್ಯರು ನೆರವೇರಿಸಿ ಗಮನ ಸೆಳೆದರು.
ಮೃತರ ಕುಟುಂಬ ಸದಸ್ಯರ ಅನುಮತಿ ಹಾಗೂ ಜಿಲ್ಲಾಡಳಿತದ ಸೂಚನೆ ಮೇರೆಗೆ ಕೋವಿಡ್ ವಿಧಾನಗಳನ್ನು ಅನುಸರಿಸಿ ಇಲ್ಲಿನ ವೀರಶೈವವ ಲಿಂಗಾಯತ ರುದ್ರಭೂಮಿಯಲ್ಲಿ ಕೇವಲ ಆಯ್ದ ಸಂಖ್ಯೆಯ ಜನರ ಮಧ್ಯೆ ಸಂಘಟನೆಯ ಕಾರ್ಯಕರ್ತರು ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆ ನೆರವೇರಿಸಿದರು.
ಜಿಲ್ಲಾಡಳಿತ ಸೂಚನೆ ಹಿನ್ನೆಲೆ ಬಿಜೆಪಿ ಪ್ರಮುಖರು, ಕುಟುಂಬ ಸದಸ್ಯರು ಹಾಗೂ ಮೃತರ ಆತ್ಮೀಯರು ಬೆರಳೆಣಿಕೆಯಷ್ಟು ಮಂದಿ ಪಾಲ್ಗೊಂಡಿದ್ದರು. ಸೋಂಕಿತರ ಅಂತ್ಯಕ್ರಿಯೆಗೆ ಬಹುತೇಕರ ಕುಟುಂಬಗಳು ಹಿಂದೇಟು ಹಾಕುತ್ತಿರುವ ಈ ಸನ್ನಿವೇಶದಲ್ಲಿ ಪಿಎಫ್ಐ ಸಂಘಟನೆಯ ಪದಾಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.