ಕೊಪ್ಪಳ: ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದ್ದು, ಸಂಜೆ ಬಿಡುಗಡೆಯಾಗುವ ಹೆಲ್ತ್ ಬುಲೆಟಿನ್ನಲ್ಲಿ ಅಧಿಕೃತ ಘೋಷಣೆಯಾಗಲಿದೆ. ಜಿಲ್ಲೆಯ ಕನಕಗಿರಿ ಮೂಲದ 28 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದನ್ನು ಕೊಪ್ಪಳ ಜಿಲ್ಲಾಡಳಿತ ಖಚಿತಪಡಿಸಿದೆ.
ಮೇ 30ರಂದು ತನ್ನ ತಂದೆ-ತಾಯಿಯೊಂದಿಗೆ ಈ ವ್ಯಕ್ತಿ ಮುಂಬೈನ ದಿವಾ ಪ್ರದೇಶದಿಂದ ಖಾಸಗಿ ವಾಹನದ ಮೂಲಕ ಕೊಪ್ಪಳಕ್ಕೆ ಬಂದಿದ್ದ. ಮೇ 31ರಂದು ಕನಕಗಿರಿಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ದಿವಾ ಏರಿಯಾದಲ್ಲಿ ಇವರು 15 ದಿನಗಳ ಕಾಲ ಕ್ವಾರಂಟೈನ್ನಲ್ಲಿದ್ದರು. ಬಳಿಕ ಇಲ್ಲಿಗೆ ಬಂದ ಮೇಲೂ ಕ್ವಾರಂಟೈನ್ ಮಾಡಲಾಗಿತ್ತು.
ಜೂನ್ 2ರಂದು ಗಂಗಾವತಿಯಲ್ಲಿ ಗಂಟಲು ದ್ರವ ಮಾದರಿ ಪಡೆದು ಲ್ಯಾಬ್ಗೆ ಕಳಿಸಲಾಗಿತ್ತು. ವರದಿಯಲ್ಲಿ ವ್ಯಕ್ತಿಗೆ ಪಾಸಿಟಿವ್ ಬಂದಿದ್ದು, ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಹೀಗಾಗಿ ಸೋಂಕಿತನನ್ನು ಕೊಪ್ಪಳದ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.