ಕೋಲಾರ: ಸಿದ್ದರಾಮಯ್ಯ ದೊಡ್ಡ ಹುಲಿ ಇದ್ದ ಹಾಗೆ, ಸಿದ್ದರಾಮಯ್ಯ ನವರನ್ನ ಬುಕ್ ಮಾಡೋ ಗಂಡು ಇನ್ನೂ ಹುಟ್ಟಿಲ್ಲ ಎಂದು ಬಂಗಾರಪೇಟೆಯಲ್ಲಿ ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷ, ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಆಫರ್ ಕೊಟ್ಟಿದೆ ಎಂಬ ವದಂತಿ ಪ್ರಶ್ನೆಗೆ ಉತ್ತರಿಸಿದ ಅವರು, ನೇರ ನಿಷ್ಠುರ ವ್ಯಕ್ತಿ ಸಿದ್ದರಾಮಯ್ಯ, ದೇವರಾಜ್ ಅರಸು ನಂತರ ರಾಜ್ಯ ಕಂಡ ಹಿಂದುಳಿದ ವರ್ಗಗಳ ನಾಯಕ ಎಂದರಲ್ಲದೆ, ಬಿಜೆಪಿ ಆಪರೇಷನ್ ಕಮಲಕ್ಕೆ ತಿರುಗೇಟು ನೀಡಿದ್ರು.
ಬಿಜೆಪಿಯವರು ಮೈತ್ರಿ ಸರ್ಕಾರ ಬೀಳಿಸಲು ಮುಹೂರ್ತ ಫಿಕ್ಸ್ ಮಾಡಿ ವೈಫಲ್ಯ ಕಾಣುತ್ತಿದ್ದಾರೆ, ಬಿಜೆಪಿಯವರ ಆಪರೇಷನ್ ಕಮಲದ ಕನಸು ನನಸಾಗೋದಿಲ್ಲ ಎಂದರು.
ಇನ್ನೂ ಮೈತ್ರಿ ಯಿಂದ ಕಾಂಗ್ರೆಸ್ಗೆ ಸೋಲಾಗಿದೆ ಎಂದು ಮಾಜಿ ಸಂಸದರು, ಹಿರಿಯ ಮುಖಂಡರಾದ ಕೆ.ಹೆಚ್ ಮುನಿಯಪ್ಪ ಹಾಗೂ ವೀರಪ್ಪ ಮೊಯ್ಲಿ ಹೇಳಿಕೆಗೆ ಟಾಂಗ್ ನೀಡಿದ ಅವರು ಸಂಸದರಾಗಿದ್ದಾಗ ಇವರುಗಳು ಪಕ್ಷ ಸಂಘಟನೆಗೆ ಒತ್ತು ಕೊಟ್ಟಿಲ್ಲ, ಸೋಲುವ ಮುನ್ನವೇ ರಾಹುಲ್ ಗಾಂಧಿಯವರಿಗೆ ಹೇಳಬಹುದಿತಲ್ವಾ ಎಂದು ಪ್ರಶ್ನಿಸಿದ್ದಾರೆ.
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲಿಗೆ ಅಭ್ಯರ್ಥಿಗಳ ವೈಫಲ್ಯವೇ ಕಾರಣ, ಆದ್ರೆ ಕಾಂಗ್ರೆಸ್ ಮತಗಳು ಎಲ್ಲಿಯೂ ಹೋಗಿಲ್ಲ, ಇನ್ನಾದ್ರು ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡಲಿ ಎಂದು ಸಲಹೆ ನೀಡಿದರು. ಇದೆ ವೇಳೆ ಮೈತ್ರಿ ಪಕ್ಷದಲ್ಲಿ ಒಳ್ಳೆಯ ಆಡಳಿತ ನಡೆಯುತ್ತಿದೆ, ಅಂದಿನ ಬಿಜೆಪಿ ಆಡಳಿತಕ್ಕೆ ಹೋಲಿಕೆ ಮಾಡಿದ್ರೆ ಸಿದ್ದರಾಮಯ್ಯ ಹಾಗೂ ಮೈತ್ರಿ ಸರ್ಕಾರದಲ್ಲಿ ಜನಪರ ಕಾರ್ಯಕ್ರಮ ಆಗುತ್ತಿದೆ ಎಂದು ಹೇಳಿದರು.