ಕೋಲಾರ: ನಗರದಲ್ಲಿ ಹಲವಾರು ವರ್ಷಗಳಿಂದ ತಲೆನೋವಾಗಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸಲು ಇಂದು ಜಿಲ್ಲಾಧಿಕಾರಿ ಮಂಜುನಾಥ್ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ, ಸಂಘಟನೆ ಮುಖಂಡರ ಮತ್ತು ಜನಪ್ರತಿನಿಧಿಗಳ ಸಭೆ ಕರೆಯಲಾಗಿತ್ತು.
ನಗರದಲ್ಲಿ ಪ್ರತಿದಿನ ಬೀಳುತ್ತಿರುವ ಕಸವನ್ನು ವಿಲೇವಾರಿ ಮಾಡಲು ಸಭೆಯಲ್ಲಿ ಬಂದಿದ್ದ ಜನರಿಂದ ಸೂಕ್ತ ಸಲಹೆಗಳನ್ನು ಪಡೆಯಲಾಯಿತು. ಬೆಂಗಳೂರಿನಿಂದ ಬಂದಿದ್ದ ತ್ಯಾಜ್ಯ ವಿಲೇವಾರಿ ತಜ್ಞರು, ಜನರಿಂದ ಬಂದಂತಹ ಮಾಹಿತಿ ಪಡೆದುಕೊಂಡರು.
ಕೋಲಾರದಲ್ಲಿ ಪ್ರತಿದಿನ ಸುಮಾರು 60 ರಿಂದ 80 ಟನ್ ಕಸ ಸಂಗ್ರಹವಾಗುತ್ತಿದ್ದು, ಇದನ್ನು ವಿಲೇವಾರಿ ಮಾಡುವುದು ನಗರಸಭೆಗೆ ಕಷ್ಟದ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ಕಸವನ್ನು ವಿಲೇವಾರಿ ಮಾಡಿ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸಲು ತಜ್ಞರನ್ನು ಕರೆಸಲಾಗಿದೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದ್ರು.
ಅಲ್ಲದೇ ನಗರದಲ್ಲಿ ಉತ್ಪತ್ತಿಯಾಗುವ ಕಸವನ್ನ ಒಣಕಸ ಹಾಗೂ ಹಸಿಕಸವಾಗಿ ಬೇರ್ಪಡಿಸಿ ಅದನ್ನು ಮರುಬಳಕೆ ಮಾಡುವುದರೊಂದಿಗೆ ರೈತರಿಗೆ ನೀಡುವ ಕುರಿತು ಸಭೆಯಲ್ಲಿ ಚಿಂತನೆ ಮಾಡಲಾಯಿತು. ಇನ್ನು ಇದೇ ವೇಳೆ ಕಸ ವಿಲೇವಾರಿ ಮಾಡಲು ಕೋಲಾರ ಸುತ್ತಮುತ್ತ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದು, ಶೀಘ್ರದಲ್ಲಿಯೇ ಸೂಕ್ತ ಜಾಗದ ವ್ಯವಸ್ಥೆ ಮಾಡಲಾಗುವುದು ಎಂದರು.